ಶಹಾಪುರ | ಗ್ರಾಮದ ಜನರಿಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಿ : ಲವೀಶ್ ಒರಡಿಯಾ

ಶಹಾಪುರ: ಗ್ರಾಮದ ಸ್ವಚ್ಛತೆ, ನೈರ್ಮಲ್ಯ, ಶುದ್ಧ ಕುಡಿಯುವ ನೀರು ಪೂರೈಕೆಯಲ್ಲಿ ಜನರಿಗೆ ತೊಂದರೆಯಾಗದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಒರಡಿಯಾ ಅವರು ಪಂಚಾಯತ್ ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು.
ಜ.30ರಂದು ಶಹಾಪುರ ತಾಲೂಕಿನ ಬೀರನೂರು ಗ್ರಾಮ ಪಂಚಾಯಿತಿಗೆ ದಿಢೀರ್ ಭೇಟಿ ನೀಡಿ, ಗ್ರಾಮದ ಸಾರ್ವಜನಿಕರ ಕುಂದು-ಕೊರತೆಗಳ ಅಹ್ವಾಲುಗಳನ್ನು ಪರಿಶೀಲಿಸಿದ ಅವರು, ಗ್ರಾಮದಲ್ಲಿ ಸ್ವಚ್ಛ ನೈರ್ಮಲ್ಯ ಕಾಪಾಡಿ, ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಲು ಅಗತ್ಯ ಕ್ರಮವಹಿಸಿ ಎಂದರು.
ಚರಂಡಿಗಳಲ್ಲಿ ನೀರು ನಿಲ್ಲಂದತೆ ತುಂಬಿದ ಹೂಳನ್ನು ತೆಗೆದು ಸ್ವಚ್ಛಗೊಳಿಸಿ, ನಳಗಳ ಮೂಲಕ ಪೂರೈಕೆ ಮಾಡುವ ಕುಡಿಯುವ ನೀರು, ಟ್ಯಾಪ್ ಇಲ್ಲದ ನಳಗಳಿಂದ ಸೂರಿಕೆಯಾಗುವುದನ್ನು ತಡೆಯಲು ನಳದ ಮಾಲಕರಿಗೆ ಟ್ಯಾಪ್ ಅಳವಡಿಕೆ ಮಾಡಿ, ನೀರು ಪೊಲಾಗದಂತೆ ನೀಗಾವಹಿಸಿ ಎಂದು ತಿಳಿಸಲು ಸೂಚಿಸಿದರು.
ಬಳಿಕ, ಬೀರನೂರು ಗ್ರಾಮದ ಸರಕಾರಿ ಪ್ರೌಢ ಶಾಲೆಗೆ ಭೇಟಿ ನೀಡಿ, ಶಾಲಾ ಕಟ್ಟಡದ ಭೌತಿಕ ಸ್ಥಿತಿ ವೀಕ್ಷಿಸಿದರು.
ಈ ವೇಳೆ ಶಹಾಪುರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಶರಭೈ, ಸಹಾಯಕ ನಿರ್ದೇಶಕರಾದ ಶಾರದಮ್ಮ ನಾಗ್ಲೋಟ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಇಂಜಿನಿಯರ್ ಶಂಕರ, ಬೀರನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೇವರಾಜ ಮೌರ್ಯ, ನರೇಗಾ ಸಹಾಯಕ ಇಂಜಿನಿಯರ್ ವೆಂಕಟರಡ್ಡಿ, ಗ್ರಾಮ ಪಂಚಾಯಿತಿ ಸದಸ್ಯ ಮರೆಪ್ಪ ಬೇಗಾರ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.







