ಶಹಾಪುರ | ಶೌಚಾಲಯಕ್ಕೆ ಬೀಗ: ಪ್ರಯಾಣಿಕರಿಗೆ ಸಂಕಷ್ಟ ; ಸ್ವಚ್ಛತೆ ಕಾಪಾಡುವಂತೆ ಸಮತಾ ಸೈನಿಕ ದಳ ಆಗ್ರಹ

ಶಹಾಪುರ: ಬೀದರ್-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಪ್ರಮುಖ ಸಂಪರ್ಕ ಕೇಂದ್ರವಾಗಿರುವ ಹತ್ತಿಗೂಡೂರು ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯಕ್ಕೆ ಕಾಯಂ ಬೀಗ ಹಾಕಿರುವುದರಿಂದ ಪ್ರಯಾಣಿಕರು, ಮಹಿಳೆಯರು ಹಾಗೂ ವಯೋವೃದ್ಧರು ಪರದಾಡುವಂತಾಗಿದೆ ಎಂದು ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಹತ್ತಿಗೂಡೂರು ಶರಣರೆಡ್ಡಿ ಹೇಳಿದ್ದಾರೆ.
ಹತ್ತಿಗೂಡೂರು ಬಸ್ ನಿಲ್ದಾಣದ ಮೂಲಕ ಪ್ರತಿನಿತ್ಯ ನೂರಾರು ಪ್ರಯಾಣಿಕರು ಸಂಚರಿಸುತ್ತಿದ್ದು, ಹೊರರಾಜ್ಯಗಳಿಗೂ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. ಆದರೆ ಸಾರ್ವಜನಿಕರ ಬಳಕೆಗೆ ನಿರ್ಮಿಸಿರುವ ಶೌಚಾಲಯವನ್ನು ಬಂದ್ ಮಾಡಿರುವುದರಿಂದ ಶೌಚಾಲಯಕ್ಕೆ ತೆರಳಲು ಸಾಧ್ಯವಾಗದೆ ಮಹಿಳೆಯರು ಸೇರಿದಂತೆ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ಅನಿವಾರ್ಯವಾಗಿ ಬಯಲು ಪ್ರದೇಶವನ್ನು ಅವಲಂಬಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಸ್ ನಿಲ್ದಾಣದ ಆವರಣದಲ್ಲಿ ಸಮರ್ಪಕ ಸ್ವಚ್ಛತೆ ಇಲ್ಲದೆ ಗಬ್ಬು ವಾಸನೆ ಬೀರುತ್ತಿದೆ. ಸೂಕ್ತ ಕಂಪೌಂಡ್ ಗೋಡೆ ಇಲ್ಲದಿರುವುದರಿಂದ ನಿಲ್ದಾಣದ ಪರಿಸರವೂ ಅಶುಚಿತ್ವದಿಂದ ಕೂಡಿದೆ. ಸಾರಿಗೆ ಇಲಾಖೆಯ ಅಧಿಕಾರಿಗಳು ನಿತ್ಯ ಈ ಮಾರ್ಗವಾಗಿ ಸಂಚರಿಸುತ್ತಿದ್ದರೂ ಸಮಸ್ಯೆ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಸಮತಾ ಸೈನಿಕ ದಳ ಆರೋಪಿಸಿದೆ.
ತಕ್ಷಣ ಸಾರ್ವಜನಿಕ ಶೌಚಾಲಯದ ದುರಸ್ತಿ ಕಾರ್ಯ ಕೈಗೊಂಡು ಬಳಕೆಗೆ ಮುಕ್ತಗೊಳಿಸಬೇಕು. ಬಸ್ ನಿಲ್ದಾಣದಲ್ಲಿ ನಿಯಮಿತವಾಗಿ ಸ್ವಚ್ಛತೆ ಕೈಗೊಂಡು ಪ್ರಯಾಣಿಕರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು. ಇಲ್ಲವಾದಲ್ಲಿ ಸಮತಾ ಸೈನಿಕ ದಳದ ಜಿಲ್ಲಾ ಘಟಕದ ವತಿಯಿಂದ ಬಸ್ ನಿಲ್ದಾಣದ ಆವರಣದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.






