ವೀರಶೈವ ಸಮಾಜಕ್ಕೆ ಶಾಮನೂರು ಶಿವಶಂಕರಪ್ಪ ಅವರ ಕೊಡುಗೆ ಅಪಾರ: ಸುರೇಶ್ ಸಜ್ಜನ

ಯಾದಗಿರಿ: ಅಖಿಲ ಭಾರತ ವೀರಶೈವ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ಅಖಂಡ ವೀರಶೈವ ಲಿಂಗಾಯತ ಸಮಾಜಕ್ಕೆ ಮಹತ್ತರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ಸುರಪುರ ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಸುರೇಶ್ ಸಜ್ಜನ ಹೇಳಿದರು.
ಸುರಪುರ ಪಟ್ಟಣದ ಬಸವೇಶ್ವರ ಬ್ಯಾಂಕ್ ಸಭಾಂಗಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸುರಪುರ ತಾಲೂಕು ಘಟಕದ ವತಿಯಿಂದ ಆಯೋಜಿಸಿದ್ದ ಶಾಮನೂರು ಶಿವಶಂಕರಪ್ಪನವರಿಗೆ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಸುರೇಶ್ ಸಜ್ಜನ, ಶಿವಶಂಕರಪ್ಪನವರು ಕೊಡಗೈದಾನಿಗಳಾಗಿದ್ದರು. ರಾಜ್ಯದ ಅನೇಕ ಜಿಲ್ಲೆಗಳ ವಿದ್ಯಾರ್ಥಿ ವಸತಿ ನಿಲಯಗಳಿಗೆ ತಮ್ಮ ಸ್ವಂತ ಹಣದಿಂದ ದೇಣಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ. ಜೊತೆಗೆ ಧಾರ್ಮಿಕ ಪರಂಪರೆಯ ಗುರು ವಿರಕ್ತರನ್ನು ಒಂದುಗೂಡಿಸಲು ನಿರಂತರವಾಗಿ ಶ್ರಮಿಸಿದ್ದಾರೆ ಜೊತೆಗೆ ಹಲವು ದಶಕಗಳ ಪಂಚಪೀಠದ ಜಗದ್ಗುರುಗಳ ಸಮಸ್ಯೆಯನ್ನು ಬಗೆಹರಿಸಿ ದಾವಣಗೆರೆಯಲ್ಲಿ ಪಂಚಪೀಠ ಜಗದ್ಗುರುಗಳ ಒಂದುಗೂಡಿಸಿ ಧಾರ್ಮಿಕ ಸಮಾವೇಶ ಯಶಸ್ವಿಗೊಳಿಸಿದ್ದಾರೆ. ವೀರಶೈವ ಲಿಂಗಾಯತ ಎರಡು ಒಂದೇ ಎಂದು ಏಕತೆಯನ್ನು ಸಾರಿದ್ದಾರೆ. ಇಂದು ಅವರ ನಿಧನ ಸಮಾಜಕ್ಕೆ ಅಪಾರ ನಷ್ಟವಾಗಿದೆ ಎಂದು ಹೇಳಿದರು.
ಮಹಾಸಭಾ ತಾಲೂಕು ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನಳ್ಳಿ ಮಾತನಾಡಿ, ವೀರಶೈವ ಮಹಾಸಭೆಯಲ್ಲಿ ನಿರಂತರವಾಗಿ ರಾಷ್ಟ್ರೀಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಸಮಾಜದ ಸಂಘಟನೆಗೆ ತಮ್ಮ ಇಳಿ ವಯಸ್ಸಿನಲ್ಲೂ ಕೂಡ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚಿಗೆ ದಾವಣಗೆರೆಯಲ್ಲಿ ಬೃಹತ್ ಪ್ರಮಾಣದ ವೀರಶೈವ ಲಿಂಗಾಯತ ಸಮಾವೇಶವನ್ನು ಆಯೋಜಿಸಿ ಯಶಸ್ವಿಗೊಳಿಸಿದ್ದರು. ಜೊತೆಗೆ ಬಾಪೂಜಿ ಶಿಕ್ಷಣ ಸಂಸ್ಥೆ, ಬಾಪುಜಿ ಸಹಕಾರಿ ಸಂಘವನ್ನು ಪ್ರಾರಂಭಿಸಿ ದಾವಣಗೆರೆಯಲ್ಲಿ ಶೈಕ್ಷಣಿಕ ಮತ್ತು ಸಹಕಾರ ಕ್ರಾಂತಿಯನ್ನು ಮಾಡಿದ್ದಾರೆ. ಉದ್ಯಮ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸುವ ಮೂಲಕ ಶ್ರೇಷ್ಠ ಉದ್ಯಮಿಗಳಾಗಿ ಗುರುತಿಸಿಕೊಂಡಿದ್ದರು. ಶಾಸಕರಾಗಿ ಸಚಿವರಾಗಿ ಜನಪರ ಚಟುವಟಿಕೆಗಳ ಮೂಲಕ ಸದಾ ಮುಂಚೂಣಿಯಲ್ಲಿದ್ದರು ಇಂದು ಅವರ ನಿಧನ ನಾಡಿಗೆ ಅಪಾರ ನಷ್ಟ ತಂದಿದೆ ಎಂದು ಅಂಗಡಿ ಹೇಳಿದರು.
ಈ ಸಂದರ್ಭದಲ್ಲಿ ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ ಶಾಮನೂರು ಶಿವಶಂಕರಪ್ಪನವರ ಕೊಡುಗೆ ಕುರಿತು ಮಾತನಾಡಿದರು. ಶ್ರದ್ಧಾಂಜಲಿ ಸಭೆಯಲ್ಲಿ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಬಸನಗೌಡ ಪಾಟೀಲ್ ದೇವಾಪುರ, ಬಸವೇಶ್ವರ ಬ್ಯಾಂಕ್ ಉಪಾಧ್ಯಕ್ಷ ವೀರೇಶ ನಿಷ್ಠಿ ದೇಶಮುಖ್, ಪ್ರಮುಖರಾದ ಶಿವಶರಣಪ್ಪ ಹೆಡಗಿನಾಳ, ಮಂಜುನಾಥ ಗುಳಗಿ, ಸಿದ್ದಲಿಂಗಯ್ಯಸ್ವಾಮಿ ಕಡ್ಲಪ್ಪಮಠ, ಶರಣಬಸವ ಹೂಗಾರ, ಚೆನ್ನಮಲ್ಲಯ್ಯ ಜೆಠಗಿಮಠ, ಸಿದ್ದನಗೌಡ ಹೆಬ್ಬಾಳ, ಪ್ರಕಾಶ ಹೆಮ್ಮಡಗಿ, ಅಮರೇಶ ಕುಂಬಾರ, ಮಲ್ಲಿಕಾರ್ಜುನ ಮುಧೋಳ, ಶರಣಗೌಡ ಕಿರದಳ್ಳಿ, ಸಂದೀಪ ಜೋಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.







