ಗುರುಮಠಕಲ್ | ಬಿಜೆಪಿ ದಲಿತ, ಮುಸ್ಲಿಂ, ಹಿಂದುಳಿದ ವರ್ಗದ ಮತದಾರರನ್ನು ಗುರಿಯಾಗಿಸುತ್ತಿದೆ : ಬಾಬುರಾವ್ ಚಿಂಚನಸೂರ ಆರೋಪ

ಗುರುಮಠಕಲ್ : ಬಿಜೆಪಿ ಪಕ್ಷವು ದಲಿತರು, ಮುಸ್ಲಿಮರು ಹಾಗೂ ಹಿಂದುಳಿದ ವರ್ಗದ ಮತದಾರರನ್ನು ಮತದಾನ ಪ್ರಕ್ರಿಯೆಯಿಂದ ದೂರವಿಡುವ ಅಜೆಂಡಾದೊಂದಿಗೆ ಕಾರ್ಯನಿರ್ವಹಿಸುತ್ತಿದೆ ಎಂದು ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಆರೋಪಿಸಿದರು.
ತಾಲೂಕಿನ ಯಡ್ಡಳ್ಳಿ ಗ್ರಾಮದಲ್ಲಿ ಎಸ್ಐಆರ್ (ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ) ಕುರಿತು ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಎಲ್ಒಗಳಿಗೆ ಅಗತ್ಯ ನಮೂನೆಗಳನ್ನು ಸರಿಯಾಗಿ ಭರ್ತಿ ಮಾಡಿ ಸಲ್ಲಿಸುವಂತೆ ಮಹಿಳೆಯರು ಹಾಗೂ ಗ್ರಾಮಸ್ಥರಿಗೆ ಮನವಿ ಮಾಡಿದರು. ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರುಗಳು ಸರಿಯಾಗಿರುವುದನ್ನು ಪ್ರತಿಯೊಬ್ಬರೂ ಖಚಿತಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಂಬರುವ 2028ರ ವಿಧಾನಸಭೆ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ ಅವರು, “ನಾನು ಈಗ ಅಧಿಕಾರದಲ್ಲಿಲ್ಲ. ಆದ್ದರಿಂದ ನಿಮ್ಮ ಸೇವೆಯನ್ನು ಪೂರ್ಣ ಪ್ರಮಾಣದಲ್ಲಿ ಮಾಡಲು ಸಾಧ್ಯವಾಗುತ್ತಿಲ್ಲ. ನನಗೆ ತಂದೆ-ತಾಯಿ ಯಾರೂ ಇಲ್ಲ. ನೀವೇ ನನ್ನ ಕುಟುಂಬ. ನಾನು ಇರುವವರೆಗೆ ನಿಮ್ಮ ಸೇವೆ ಮಾಡುತ್ತೇನೆ” ಎಂದು ಹೇಳಿದರು.
ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೃಷ್ಣ ಚಪೇಟ್ಲಾ ಮಾತನಾಡಿ, ಎಸ್ಐಆರ್ ಪ್ರಕ್ರಿಯೆ ಕುರಿತು ಸಾರ್ವಜನಿಕರು ಜಾಗೃತರಾಗಬೇಕು. ಮತದಾರರ ಪಟ್ಟಿಯಿಂದ ಯಾರ ಹೆಸರೂ ಕೈಬಿಡದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ನಿಗದಿತ ಅವಧಿಯಲ್ಲಿ ಫಾರ್ಮ್ ಭರ್ತಿ ಮಾಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಗುರುಮಠಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ಅಧ್ಯಕ್ಷ ವೀರಭದ್ರಪ್ಪ ಯಡ್ಡಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡ ಶರಣಪ್ಪ ಸೋಮಣೋರ, ಬಸವರಾಜ ಬಾಚವಾರ್, ಆಶಾಪ್ಪ ಚಿನ್ನಾಕಾರ್, ಹಣಮಂತ ಲಿಂಗೇರಿ, ಅಮೃತರಡ್ಡಿ ಹತ್ತಿಕುಣಿ, ಮುನಿಂದ್ರರಡ್ಡಿ ಜಟ್ಟೂರ್, ಶರಣಗೌಡ ಪೋಲಿಸ್ ಪಾಟೀಲ್, ಚಂದ್ರಕಾಂತ ಹತ್ತಿಕುಣಿ, ಚಂದ್ರು ಬಾಡಿಯಾಳ, ಬಸಪ್ಪ ಚಾಮನಳ್ಳಿ, ವೆಂಕಟೇಶ ತೇಲುಗೂರು, ಹಣಮಂತ ಚಾಮನಳ್ಳಿ, ಶ್ರೀಶೈಲ ಚಾಮನಳ್ಳಿ, ಹೊನ್ನಪ್ಪ ಟಿ. ನಾಟೇಕಾರ್, ಭೀಮರಾಯ ಕಳ್ಳಿ, ಜ್ಞಾನಮಿತ್ರಪ್ಪ ಆಶನಾಳ, ಶಿರೋಮಣಿ ಕಿಲ್ಲನಕೇರಾ, ಚಂದ್ರಾಮಪ್ಪ ಬಂದಳಿಕರ್, ದೇವಪ್ಪ ನಾಯ್ಕೋಡಿ, ಜಗಪ್ಪ ಮಡಿವಾಳ, ಹೊನ್ನಪ್ಪ ಎಸ್ ನಾಟೇಕಾರ್, ಭೀಮರಾಯ ಎಸ್ ನಾಟೇಕಾರ್, ಸಾಯಿಬಣ್ಣ ಎಚ್. ನಾಟೇಕಾರ್, ಮಲ್ಲು ಹೊಸ್ಮನಿ, ಸಾಬಣ್ಣ ಬಂದಳಿಕರ್, ಶರಣಪ್ಪ ನೀರಕಟ್, ಮಹಾದೇವಪ್ಪ ಮನೆನೋರ್, ರಡ್ಡಿ ಬಂದಳ್ಳಿ, ಹಂಪಯ್ಯ ಬಿ ನಾಟೇಕಾರ್, ಸಾಬರಡ್ಡಿ ಹತ್ತಿಕುಣಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದ ವೇಳೆ ಜೆಡಿಎಸ್ ಪಕ್ಷದ ಭೀಮರಾಯ ಮಣೆನೋರ್, ಮಲ್ಲಪ್ಪ ಮಣೆನೋರ್, ನಾಗಪ್ಪ ಮಣೆನೋರ್, ಸಿದ್ದಪ್ಪ ನಾಯ್ಕೋಡಿ ಹಾಗೂ ದೊಡ್ಡ ಮಲ್ಲಪ್ಪ ಮಣೆನೋರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು. ಪಕ್ಷದ ಮುಖಂಡರು ಶಾಲು ಹೊದಿಸಿ ಅವರನ್ನು ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.






