ರಾಜ್ಯ ಸಾರಿಗೆ ನೌಕರರ ಮುಷ್ಕರ: ಯಾದಗಿರಿಯಲ್ಲಿ ಖಾಸಗಿ ವಾಹನಗಳನ್ನು ಆಶ್ರಯಿಸಿದ ಪ್ರಯಾಣಿಕರು

ಯಾದಗಿರಿ: ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸೋಮವಾರ ಸರ್ಕಾರದ ಜೊತೆಗಿನ ಮಾತುಕತೆ ಮುರಿದು ಬಿದ್ದ ಪರಿಣಾಮ ಸಾರಿಗೆ ನೌಕರರು ಮಂಗಳವಾರ ಬೆಳಗ್ಗೆಯಿಂದಲೇ ಬಸ್ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟಿಸಿದ್ದರಿಂದ ನಗರ ಸೇರಿದಂತೆಯೇ ಜಿಲ್ಲೆಯಾದ್ಯಂತ ಒಂದು ಲಕ್ಷಕ್ಕೂ ಅಧಿಕ ಪ್ರಯಾಣಿಕರು ವೈರಾಣಾಗಿದ್ದು ಒಂದಡೆಯಾದರೇ, ಇತ್ತ ಇದೇ ಒಳ್ಳೆಯ ಸಮಯವೆಂದು ಬೀದಿಗಿಳಿದ ವಿವಿಧ ಖಾಸಗಿ ವಾಹನಗಳು ದುಪ್ಪಟ್ಟು ಹಣ ಪಡೆದು ಭರ್ಜರಿ ಗಳಿಕೆ ಮಾಡಿಕೊಂಡರು.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಕರೆ ಮೆರೆಗೆ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಇಳಿದ ಜಿಲ್ಲೆಯ ನಾಲ್ಕು ಡೀಪೊಗಳ ಸುಮಾರು 700 ಚಾಲಕ, ನಿರ್ವಾಹಕರು, ಮೆಕ್ಯಾನಿಕ್ಗಳು ಕರ್ತವ್ಯಕ್ಕೆ ಹಾಜರಾಗಲಿಲ್ಲ.
ಮುಷ್ಕರ ಇದೆಯೇ ಇಲ್ಲ ಎಂಬ ಗೊಂದಲಕ್ಕೆ ಬಿದ್ದ ಅನೇಕರು ಪರ ಊರುಗಳಿಗೆ ಹೊಗುವುದಕ್ಕಾಗಿ ಜಿಲ್ಲೆಯ ವಿವಿಧ ಬಸ್ ನಿಲ್ದಾಣಗಳಿಗೆ ಬೆಳಗ್ಗೆ ಬೇಗನೇ ಬಂದಾಗ ಚಾರಕ್ಕೆ ಸಜ್ಜಾದ ನಾಲ್ಕು ಡೀಪೊಗಳ ಕೇವಲ 18 ಬಸ್ ಗಳು ನಿಗದಿತ ಊರುಗಳಿಗೆ ಹೋಗಿದ್ದು, ಬಿಟ್ಟರೇ ಉಳಿದ ಯಾವ ಬಸ್ ಸಂಚಾರಕ್ಕೆ ಮುಂದಾಗಲಿಲ್ಲ.
ಬಸ್ ಸಂಚಾರ ಇಲ್ಲ ಎಂಬ ಮಾಹಿತಿ ಗೊತ್ತಾಗುತ್ತಲೇ ನೂರಾರು ಖಾಸಗಿ ವಾಹನಗಳು, ಆಟೊರೀಕ್ಷಾಗಳು ಬಸ್ ನಿಲ್ದಾಣಗಳು ಸೇರಿದಂತೆಯೇ ಎಲ್ಲೆಂದರಲ್ಲಿ ಬೀದಿಗಿಳಿದು ಹೆಚ್ಚಿನ ಹಣ ಪಡೆದು ಪ್ರಯಾಣಿಕರ ಹೇಳುವ ಊರುಗಳಿಗೆ ಹೋಗಲು ಸಜ್ಜಾದವು. ದೂರ ಮತ್ತು ಬೇರೆ ರಾಜ್ಯಗಳಿಗೆ ಹೋಗುವ ಅನೇಕ ಪ್ರಯಾಣಿಕರು ವಾಪಸ್ ಮನೆ ತೆರಳಿದರು. ಇನ್ನೂ ಕೆಲವರು ರೈಲುಗಳಲ್ಲಿ ಪ್ರಯಾಣಿಸಿದರು.
ಜಿಲ್ಲೆಯಲ್ಲಿ ನಾಲ್ಕು ಬಸ್ ಡೀಪೊಗಳಿದ್ದು, ಈ ಎಲ್ಲಕಡೆಗಳಿಂದ ನಿತ್ಯವು 232 ಬಸ್ ಗಳ ನಿರ್ಗಮನವಾಗುತ್ತಿತ್ತು. ಪ್ರತಿನಿತ್ಯ ಜಿಲ್ಲೆಯ ನಾಲ್ಕು ಡೀಪೊಗಳಿಂದ ಸುಮಾರು 1.30 ಲಕ್ಷ ಜನರು ಪ್ರಯಾಣ ಮಾಡುತ್ತಾರೆ.
ಮುಷ್ಕರ ನಿಲ್ಲುವುದಿಲ್ಲ :
ನಮ್ಮ ಬೇಡಿಕೆಗಳ ಈಡೇರಿಕೆಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿಲ್ಲ. ಹೀಗಾಗಿ, ಮಂಗಳವಾರ ಬೆಳಿಗ್ಗೆ 6 ಗಂಟೆಯಿಂದಲೇ ಚಾಲಕರು, ನಿರ್ವಾಹಕರು, ಮೆಕ್ಯಾನಿಕರು ಸೇರಿದಂತೆ ಎಲ್ಲರೂ ಕೆಲಸದಿಂದ ಹೊರಗೆ ಉಳಿದು ಮುಷ್ಕರದಲ್ಲಿ ಭಾಗವಹಿಸಿದ್ದಾರೆ. ನಮ್ಮ ಬೇಡಿಕೆಗಳು ಈಡೇರುವವರೆಗೂ ಮುಷ್ಕರ ಮುಂದುವರಿಸುತ್ತೇವೆ ಎಂದು ಕಲ್ಯಾಣ ಕರ್ನಾಟಕ ಸಾರಿಗೆ ಒಕ್ಕೂಟದ ಮುಖಂಡ ಹೇಳಿದ್ದಾರೆ.
ನಿನ್ನೆ ಬೆಳಿಗ್ಗೆಯಿಂದ ಇಲ್ಲಿಯವರೆಗೂ 300-400 ಸಿಬ್ಬಂದಿ ಜತೆಗೆ ಮಾತುಕತೆ ನಡೆಸಿ ಮುಷ್ಕರ ಬೇಡ, ಕಾನೂನು ಕೈಗೆ ತೆಗದುಕೊಳ್ಳಬೇಡಿ, ಪ್ರಯಾಣಿಕರಿಗೆ ತೊಂದರೆಯಾಗುತ್ತದೆ ಎಂದು ಹೇಳಿದ್ದೇವೆ. ಸಂಸ್ಥೆಯ ಸೂಚನೆಯೂ ಮೀರಿ ಮುಷ್ಕರದಲ್ಲಿ ಪಾಲ್ಗೊಳ್ಳುವವರ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆಯೂ ಕೊಟ್ಟಿದ್ದೇವೆ.
-ಸುನೀಲಕುಮಾರ ಚಂದರಗಿ, ಡಿಸಿ, ಕೆಕೆಆರ್ ಟಿದೇವೇಂದ್ರಪ್ಪ
ಕೋರ್ಟ್ ಆದೇಶದ ಮೇರೆಗೆ ತಾತ್ಕಾಲಿಕವಾಗಿ ಮುಷ್ಕರ ವಾಪಸ್ :
ಬೆಳಗ್ಗೆಯಿಂದ ಆರಂಭಗೊಂಡಿದ್ದ ಸಾರಿಗೆ ನೌಕರರ ಮುಷ್ಕರ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಎರಡು ದಿನಗಳ ತಾತ್ಕಾಲಿಕವಾಗಿ ಹಿಂದಕ್ಕೆ ಪಡೆಯಲಾಗಿದೆ ಎಂದು ಹೇಳಿರುವ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ಅಧ್ಯಕ್ಷ ದೇವೆಂದ್ರಪ್ಪ ಮ್ಯಾಗೇರಿ, ಸಂಜೆಯಿಂದ ಬಸ್ ಸಂಚಾರ ಶುರುವಾಗಲಿದೆ ಎಂದಿದ್ದಾರೆ.
ಮಂಗಳವಾರ ಮತ್ತು ಬುಧವಾರ ಈ ಎರಡು ದಿನ ಮುಷ್ಕರ ಬೇಡ ಎಂಬ ಕೋರ್ಟ್ ಆದೇಶದ ಹಿನ್ನಲೆಯಲ್ಲಿ ಇಂದು ಮಧ್ಯಾಹ್ನ ಸಂಘದ ರಾಜ್ಯಾಧ್ಯಕ್ಷರು ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ಅವರು ಹೇಳಿದ್ದಾರೆ. ಆ.7 ರಿಂದ ಮುಷ್ಕರ ಮುಂದುವರೆಯುವ ಬಗ್ಗೆ ರಾಜ್ಯಾಧ್ಯಕ್ಷರು ಸೂಚನೆ ನೀಡಿದರೇ, ಇಲ್ಲೂ ಕೂಡಾ ಮುಂದುವರೆಯುತ್ತದೆ ಎಂದು ಅವರು ಹೇಳಿದ್ದಾರೆ.







