ಸುರಪುರ | ಬೀದಿ ನಾಯಿಗಳನ್ನು ತೆರವುಗೊಳಿಸಿದ ನಗರಸಭೆ ಅಧಿಕಾರಿಗಳ ವಿರುದ್ಧ ಪೊಲೀಸ್ ಠಾಣೆಗೆ ದೂರು

ಸುರಪುರ: ನಗರದಲ್ಲಿನ ಬೀದಿ ನಾಯಿಗಳನ್ನು ಹಿಡಿದು ನೀರು ಆಹಾರ ಇಲ್ಲದ ಅಡವಿಯಲ್ಲಿ ಬಿಟ್ಟು ನಾಯಿಗಳ ಸಾವಿಗೆ ಕಾರಣರಾಗಿರುವ ನಗರಸಭೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರಾಣಿಪ್ರಿಯ ಮಹಿಳೆ ನವ್ಯ ಎಮ್. ಕರಡಕಲ್ ಎನ್ನುವವರು ಪೊಲೀಸರಿಗೆ ದೂರು ನೀಡಿದ್ದಾರೆ.
ಈ ಕುರಿತು ಮಾತನಾಡಿರುವ ನವ್ಯ ಎಮ್. ಕರಡಕಲ್ ಅವರು, ನಾಯಿಗಳನ್ನು ಹಿಡಿದು ಸಂತಾನ ಹರಣ ಚಿಕಿತ್ಸೆ ನೀಡಬೇಕು ಮತ್ತು ರೇಬಿಸ್ ವ್ಯಾಕ್ಸಿನೇಶನ್ ಮಾಡಬೇಕು ಎಂಬ ಆದೇಶವಿದೆ. ಆದರೆ, ಸುರಪುರ ನಗರಸಭೆಯ ಅಧಿಕಾರಿಗಳು ನಾಯಿಗಳನ್ನು ಹಿಡಿಯಲು ಬೇರೆ ಏಜೆನ್ಸಿಯವರಿಗೆ ನೀಡಿದ್ದು, ಏಜೆನ್ಸಿಯವರು ನಾಯಿಗಳನ್ನು ಹಿಡಿದು ಅವುಗಳಿಗೆ ಆಹಾರ ನೀರು ಏನು ಸಿಗದಂತ ಗುಡ್ಡಗಾಡಿನಲ್ಲಿ ಬಿಟ್ಟು ಬಂದಿದ್ದಾರೆ.
ಇದರಿಂದ ಅನೇಕ ನಾಯಿಗಳು ವಾಹನಗಳ ಅಪಘಾತಕ್ಕೊಳಗಾಗಿ ಸಾವನ್ನಪ್ಪಿವೆ. ಇದಕ್ಕೆ ನಗರಸಭೆ ಅಧಿಕಾರಿಗಳೆ ಕಾರಣರಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ದೂರು ನೀಡಿರುವುದಾಗಿ ಹಾಗೂ ನಾಯಿಗಳನ್ನು ಹಿಡಿಯುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ನವ್ಯ ಎಮ್.ಕರಡಕಲ್ ತಿಳಿಸಿದ್ದಾರೆ.





