ಸುರಪುರ | ಯಲ್ಲಪ್ಪನ ಬಾವಿ ಬಳಿ ಸಿಸಿ ಕ್ಯಾಮೆರಾ ಅಳವಡಿಕೆಗೆ ಒತ್ತಾಯ

ಸುರಪುರ: ನಗರದ ಐತಿಹಾಸಿಕ ಯಲ್ಲಪ್ಪನ ಬಾವಿ ಬಳಿ ಕಿಡಿಗೇಡಿಗಳು ಅನೈತಿಕ ಚಟುವಟಿಕೆ ನಡೆಸುತ್ತಿರುವುದರಿಂದ ಬಾವಿಯ ನೀರು ಕಲುಷಿತಗೊಳ್ಳುತ್ತಿದೆ. ಹೀಗಾಗಿ ಬಾವಿ ಬಳಿ ಸಿಸಿ ಕ್ಯಾಮೆರಾ ಅಳವಡಿಸಿ, ಕಾವಲುಗಾರರನ್ನು ನೇಮಕ ಮಾಡಬೇಕು ಎಂದು ರಾಷ್ಟ್ರೀಯ ಸತ್ಯವಾದಿ ಮಾನವ ಹಕ್ಕುಗಳ ಸಂಘಟನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನಾಯಕ ದೊರಿ ಬಿಚ್ಚಗತ್ತಿಕೇರ ಒತ್ತಾಯಿಸಿದ್ದಾರೆ.
ಈ ಕುರಿತು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿರುವ ಅವರು, ಯಲ್ಲಪ್ಪನ ಬಾವಿಗೆ ಐತಿಹಾಸಿಕ ಮಹತ್ವವಿದ್ದು, ನಿತ್ಯ ನೂರಾರು ಕುಟುಂಬಗಳು ಕುಡಿಯುವ ನೀರಿಗಾಗಿ ಈ ಬಾವಿಯನ್ನು ಅವಲಂಬಿಸಿವೆ. ಬೇಸಿಗೆ ಹಾಗೂ ಮಳೆಗಾಲ ಸೇರಿದಂತೆ ವರ್ಷಪೂರ್ತಿ ಬಾವಿಯ ನೀರು ಸಾರ್ವಜನಿಕರ ಉಪಯೋಗಕ್ಕೆ ಬರುತ್ತಿದೆ ಎಂದು ತಿಳಿಸಿದ್ದಾರೆ.
ಆದರೆ, ಇತ್ತೀಚಿನ ದಿನಗಳಲ್ಲಿ ಕಿಡಿಗೇಡಿಗಳು ಬಾವಿಯ ಸುತ್ತಮುತ್ತ ಅನೈತಿಕ ಚಟುವಟಿಕೆ ನಡೆಸುತ್ತಿರುವುದರಿಂದ ನೀರು ಕಲುಷಿತಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಬಾವಿ ಬಳಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸುವುದರ ಜೊತೆಗೆ ಶಾಶ್ವತವಾಗಿ ಕಾವಲುಗಾರರನ್ನು ನೇಮಕ ಮಾಡಿ ಬಾವಿಯ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.




