ಸುರಪುರ | ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಆಗ್ರಹಿಸಿ ರೈತ ಸಂಘದಿಂದ ಪ್ರತಿಭಟನೆ

ಸುರಪುರ : ರುಕ್ಮಾಪುರ–ಬೇವಿನಹಳ್ಳಿ ರಸ್ತೆ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಂಘಟನೆಯ ತಾಲೂಕು ಅಧ್ಯಕ್ಷ ಹಣಮಂತ್ರಾಯ ಚಂದಲಾಪೂರ, ರುಕ್ಮಾಪುರ ಗ್ರಾಮದಿಂದ ಬೇವಿನಹಳ್ಳಿ ಕಡೆಗೆ ಸಾಗುವ ರಸ್ತೆ ಕಾಮಗಾರಿ ಆರಂಭವಾಗಿ ಎರಡು ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ ಎಂದು ಆರೋಪಿಸಿದರು.
ಕಾಮಗಾರಿಯ ಆರಂಭದಲ್ಲಿ ರಸ್ತೆಗೆ ಕಂಕರ್ ಮತ್ತು ಮೋರಂ ಹಾಕಿ ನಂತರ ಕೆಲಸ ಸ್ಥಗಿತಗೊಳಿಸಲಾಗಿದೆ. ಅಪೂರ್ಣ ಕಾಮಗಾರಿಯಿಂದ ವಾಹನ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗಿದ್ದು, ರಸ್ತೆಯ ಎರಡೂ ಬದಿಯ ನಿವಾಸಿಗಳು ನಿತ್ಯ ಧೂಳಿನ ಸಮಸ್ಯೆಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.
ವಾಹನಗಳ ಸಂಚಾರದಿಂದ ಭಾರಿ ಪ್ರಮಾಣದಲ್ಲಿ ಧೂಳು ಹರಡುತ್ತಿದ್ದು, ಮನೆಗಳ ಆಹಾರ, ಬಟ್ಟೆ ಹಾಗೂ ಇತರೆ ವಸ್ತುಗಳು ಧೂಳಿನಿಂದ ಹಾಳಾಗುತ್ತಿವೆ. ಧೂಳಿನ ಕಾರಣದಿಂದ ಅನೇಕರು ಆರೋಗ್ಯ ಸಮಸ್ಯೆಗೂ ಒಳಗಾಗುತ್ತಿದ್ದಾರೆ ಎಂದು ದೂರಿದರು.
ಕೂಡಲೇ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲವಾದರೆ ರೈತ ಸಂಘದ ವತಿಯಿಂದ ಸಂಬಂಧಪಟ್ಟ ಇಲಾಖೆಯ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಳಿಕ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಉದ್ದೇಶಿಸಿದ ಮನವಿಯನ್ನು ತಹಸೀಲ್ದಾರ್ ಕಚೇರಿಯ ಸಿರಸ್ತೆದಾರರ ಮೂಲಕ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಹುಣಸಗಿ ತಾಲೂಕ ಗೌರವಾಧ್ಯಕ್ಷ ಸಾಹೇಬ ಗೌಡ ಮದಲಿಂಗನಾಳ, ಜಿಲ್ಲಾ ಉಪಾಧ್ಯಕ್ಷ ತಿಪ್ಪಣ್ಣ ಜಂಪಾ, ಹುಣಸಗಿ ತಾಲೂಕ ಅಧ್ಯಕ್ಷ ಹನುಮಗೌಡ ನಾರಾಯಣಪುರ, ಸುರಪುರ ತಾಲೂಕ ಗೌರವ ಅಧ್ಯಕ್ಷ ಮಲ್ಲಣ್ಣ ಹಾಲಬಾವಿ, ತಿರುಪತಿ ಕುಪಗಲ್, ಭೀಮಣ್ಣ ತಿಪ್ಪನಟಗಿ, ಭೀಮನಗೌಡ ಕರ್ನಾಳ, ರಾಘು ಕುಪಗಲ್, ನಾಗಪ್ಪ ಕುಪಗಲ್, ಶಿವನಗೌಡ ರುಕ್ಮಾಪುರ, ಮೌನೇಶ ಅರಳಹಳ್ಳಿ, ಪ್ರಭು ದೊರೆ, ನಿಂಗನಗೌಡ ಗುಳಬಾಳ, ಮೋದಿನ್ ಬೇವಿನಾಳ, ತಿಪ್ಪಣ್ಣ ತಳವಾರ, ಭೀಮರಾಯ ಒಕ್ಕಲಿಗ,ಖುದಾಭಕ್ಷ, ವೆಂಕೋಬ ದೊರೆ ಕುಪಗಲ್, ಶಾಂತಪ್ಪ ತಿಪ್ಪನಟಗಿ, ಭೀಮನಗೌಡ ಸೂಗೂರ, ಚಂದ್ರಶೇಖರ ಗುಳಬಾಳ, ಶಂಕ್ರಪ್ಪ ಗುಳಬಾಳ, ಶರಣಪ್ಪ ದೊಡ್ಡಮನಿ, ಮಲ್ಲಿಕಾರ್ಜುನ ದೊಡ್ಡಮನಿ, ಮಾನಪ್ಪ ರುಕ್ಮಾಪುರ, ಶಿವನಗೌಡ ಬಿರಾದಾರ, ಹನುಮಂತ್ರಾಯ ಕುಪಗಲ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.






