ಸುರಪುರ | ಸಂಗೀತ ಮನುಷ್ಯನಿಗೆ ದೇವರು ನೀಡಿದ ವರ: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
ಜ್ಞಾನ ಸಿಂಚನ ಪ್ರಶಸ್ತಿ ಪ್ರದಾನ

ಸುರಪುರ: ಸಂಗೀತ ಎನ್ನುವುದು ಮನುಷ್ಯನಿಗೆ ದೇವರು ನೀಡಿದ ವರ. ಸಂಗೀತ ಆಲಿಸುವುದರಿಂದ ಮನಸ್ಸಿಗೆ ಸಂತೋಷ ಹಾಗೂ ನೆಮ್ಮದಿ ದೊರೆಯುತ್ತದೆ ಎಂದು ದೇವಾಪುರ ಜಡಿಶಾಂತಲಿಂಗೇಶ್ವರ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಮಾತಾಶ್ರಮದಲ್ಲಿ ಶ್ರೀ ರೇಣುಕಾ ಮಾತಾಶ್ರಮ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಶ್ರೀ ರೇಣುಕಾ ಮಾತಾ 10ನೇ ವರ್ಷದ ಆರಾಧನಾಮಹೋತ್ಸವ ಹಾಗೂ ಶ್ರೀ ರೇಣುಕಾ ಮಾತಾ ಜ್ಞಾನ ಸಿಂಚನ ಪ್ರಶಸ್ತಿ ಪ್ರದಾನ ಸಮಾರಂಭದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಶ್ರೀ ರೇಣುಕಾ ಮಾತಾ ಟ್ರಸ್ಟ್ ವತಿಯಿಂದ ಪ್ರತಿವರ್ಷ ಸಂಗೀತ ಕಾರ್ಯಕ್ರಮ ಹಾಗೂ ಪ್ರಶಸ್ತಿ ಪ್ರದಾನ ಮಾಡುತ್ತಿರುವುದು ಹೊಸ ಕಲಾವಿದರಿಗೆ ಪ್ರೋತ್ಸಾಹ ನೀಡುತ್ತಿದೆ. ಬದುಕು ನೋಟ್ ಪುಸ್ತಕದಂತೆ. ಅದರ ಮೊದಲ ಹಾಗೂ ಕೊನೆಯ ಪುಟಗಳು ಮುದ್ರಣವಾಗಿರುತ್ತವೆ. ಆದರೆ ಮಧ್ಯದಲ್ಲಿರುವ ಖಾಲಿ ಪುಟಗಳಲ್ಲಿ ಸುಂದರವಾದ ಅಕ್ಷರಗಳನ್ನು ಬರೆದಂತೆ ಮನುಷ್ಯನ ಜೀವನವೂ ಅರ್ಥಪೂರ್ಣವಾಗಿರಬೇಕು ಎಂದು ಹೇಳಿದರು.
ಶ್ರೀ ರೇಣುಕಾ ಮಾತಾ ಜ್ಞಾನ ಸಿಂಚನ ಪ್ರಶಸ್ತಿ ಪುರಸ್ಕೃತ ಗಾಯಕ ಬಸವರಾಜ ಬಂಟನೂರ ಮಾತನಾಡಿ, ಸಂಗೀತ ವೇದಿಕೆಯ ಭೂಷಣವಾಗಿದ್ದು, ಭಗವಂತನನ್ನು ಕಾಣಲು ಹತ್ತಿರದ ಮಾರ್ಗವಾಗಿದೆ. ಸ್ವರಸಿದ್ಧಿಗಾಗಿ ಒಂದು ಸ್ವರವನ್ನು 40 ದಿನಗಳ ಕಾಲ ಅಭ್ಯಾಸ ಮಾಡಬೇಕು. ಇದರಿಂದ ಜನ್ಮದುದ್ದಕ್ಕೂ ಸ್ವರಸಿದ್ಧಿ ದೊರೆಯಲಿದೆ ಎಂದು ಪಂಡಿತ ಪುಟ್ಟರಾಜರು ಹೇಳುತ್ತಿದ್ದರು ಎಂದು ಸ್ಮರಿಸಿದರು.
ಕಲೆ, ಸಂಗೀತ, ಸಾಹಿತ್ಯ ಹಾಗೂ ಸಂಸ್ಕೃತಿಯ ಪೋಷಣೆಯನ್ನು ದೇವಾಪುರ ಮಠದಲ್ಲಿ ಶ್ರೀಗಳು ಮಾಡುತ್ತಿದ್ದಾರೆ. ಸಂಗೀತ ಸಾಹಿತಿಗಳನ್ನು ಪೋಷಿಸಿದ ನಾಡು ಸುರಪುರ. ಸಂಗೀತ ಸಾಧನೆಯೊಂದಿಗೆ ಆರಾಧನೆಯನ್ನೂ ಮಾಡಬೇಕು ಎಂದು ಹೇಳಿದರು.
ಮುಖ್ಯ ಅತಿಥಿಯಾಗಿದ್ದ ಪಿಎಸ್ಐ ಕೃಷ್ಣಾ ಸುಬೇದಾರ ಮಾತನಾಡಿ, ಒತ್ತಡದ ಬದುಕಿನಲ್ಲಿ ಸಂಗೀತ ಅತ್ಯಂತ ಅಗತ್ಯವಾಗಿದೆ. ಇಂತಹ ಕಾರ್ಯಕ್ರಮಗಳು ಎಲ್ಲೆಡೆ ನಡೆಯುವುದರಿಂದ ಸಮಾಜದಲ್ಲಿ ಶಾಂತಿ ನೆಲೆಸಲು ಸಹಕಾರಿಯಾಗುತ್ತದೆ. ಕಲೆ, ಸಾಹಿತ್ಯ ಹಾಗೂ ಸಂಗೀತಕ್ಕೆ ಹೆಚ್ಚಿನ ಮಹತ್ವ ನೀಡಿದ ಭೂಮಿ ಸುರಪುರವಾಗಿದೆ ಎಂದರು.
ನೀಟ್ ಸಾಧಕಿ ಸೌಮ್ಯಗೆ ಸನ್ಮಾನ :
ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಎಂ.ಬಿ.ಬಿ.ಎಸ್. ಪದವಿಗೆ ಆಯ್ಕೆಯಾದ ವಿದ್ಯಾರ್ಥಿನಿ ಸೌಮ್ಯ ಗೋಪಾಲ ಚಿನ್ನಾಕಾರ ಅವರನ್ನು ಶ್ರೀ ರೇಣುಕಾ ಮಾತಾ ಟ್ರಸ್ಟ್ ವತಿಯಿಂದ ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಸಂಗೀತ ಕಲಾವಿದರಾದ ಬಸವರಾಜ ಬಂಟನೂರ, ಭೀಮಾಶಂಕರ ಬಿದನೂರ, ರವಿಕುಮಾರ ಆಳಂದ, ಮಲ್ಲಯ್ಯ ಹಿರೇಮಠ, ನೇಹಾ ಸುರಪುರ, ಮೇಘ, ಸಾವಿತ್ರಿ ಗಾಳಿ, ರವಿ ರಾಜನಕೊಳೂರ ಸೇರಿದಂತೆ ಮಾತಾಶ್ರಮದ ಮಕ್ಕಳಿಂದ ಸಂಗೀತ ಕಾರ್ಯಕ್ರಮ ನೆರವೇರಿತು.
ವೇದಿಕೆಯಲ್ಲಿ ನಿವೃತ್ತ ಕೃಷಿ ಅಧಿಕಾರಿ ವೆಂಕಟೇಶ ದೇಸಾಯಿ, ಪತ್ರಕರ್ತ ಗಿರೀಶ್ ಶಾಬಾದಿ, ಸಾಹಿತಿ ಜಾವೇದ್ ಹುಸೇನ ಹವಾಲ್ದಾರ್ ಉಪಸ್ಥಿತರಿದ್ದರು. ಟ್ರಸ್ಟ್ ಕಾರ್ಯದರ್ಶಿ ಜಯರಾಮ್ ಎಸ್.ಕಟ್ಟಿಮನಿ ಅಧ್ಯಕ್ಷತೆ ವಹಿಸಿದ್ದರು. ವಂದೀತಾ ಪಿ.ಕಟ್ಟಿಮನಿ ಪ್ರಾರ್ಥಿಸಿದರು, ಯುವ ಸಾಹಿತಿ ಸಿದ್ದಣ್ಣ ಪೂಜಾರಿ, ಮಾಧವ ಸಿದ್ದಾಪೂರ ನಿರೂಪಿಸಿದರು, ಪ್ರಹ್ಲಾದ್ ಕಟ್ಟಿಮನಿ ವಂದಿಸಿದರು. ನೂರಾರು ಜನ ಸಂಗೀತ ಅಭಿಮಾನಿಗಳು ಭಾಗವಹಿಸಿದ್ದರು.






