ಸುರಪುರ | ರಸ್ತೆ ಅಗಲೀಕರಣ ಮಾಡದಿದ್ದರೆ ಪ್ರತಿಭಟನೆ : ಮಾನು ಗುರಿಕಾರ

ಸುರಪುರ: ಪಟ್ಟಣದ ಬುದ್ಧ ವಿಹಾರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಮೊದಲು ಅಗಲೀಕರಣ ಮಾಡಬೇಕು. ರಸ್ತೆ ವಿಸ್ತರಣೆ ಮಾಡದೇ ಕಾಮಗಾರಿ ಆರಂಭಿಸಿದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಕ್ರಾಂತಿಕಾರಿ ಬಣ) ಮುಖಂಡ ಮಾನು ಗುರಿಕಾರ ಎಚ್ಚರಿಸಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2023ರಲ್ಲಿಯೇ ಅಂದಿನ ಶಾಸಕ ರಾಜಾ ವೆಂಕಟಪ್ಪ ನಾಯಕ ಅವರಿಗೆ ರಸ್ತೆ ಅಗಲೀಕರಣ ಕುರಿತು ಮನವಿ ಸಲ್ಲಿಸಲಾಗಿತ್ತು. ಅವರು ಭರವಸೆ ನೀಡಿದ್ದರೂ ಕಾಮಗಾರಿ ನಡೆದಿಲ್ಲ. ಇದೀಗ ಹಾಲಿ ಶಾಸಕ ರಾಜಾ ವೇಣುಗೋಪಾಲ ನಾಯಕ ಅವರು ರಸ್ತೆ ಅಗಲೀಕರಣಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.
ಸುರಪುರ ಹಾಗೂ ಹುಣಸಗಿ ತಾಲೂಕಿನ ಮಧ್ಯದಲ್ಲಿರುವ ಏಕೈಕ ಬೌದ್ಧ ಧಾರ್ಮಿಕ ಕೇಂದ್ರವಾದ ಬುದ್ಧ ವಿಹಾರಕ್ಕೆ ಆಗಮಿಸುವ ಭಕ್ತರಿಗೆ ಅನುಕೂಲವಾಗುವಂತೆ ರಸ್ತೆ ವಿಸ್ತರಣೆ ಮಾಡಬೇಕು. ರಸ್ತೆ ಅಗಲೀಕರಣ ಪೂರ್ಣಗೊಂಡ ಬಳಿಕವೇ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಂಘಟನೆಯ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿ, ಸಾಹೇಬನ ಅಂಗಡಿಯಿಂದ ಬುದ್ಧ ವಿಹಾರದವರೆಗೆ ಸಂಪೂರ್ಣ ರಸ್ತೆ ಅಗಲೀಕರಣ ಮಾಡಬೇಕು. ಅಂಬೇಡ್ಕರ್ ನಗರದ ಅಂಬೇಡ್ಕರ್ ವೃತ್ತದವರೆಗೆ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲು ಭೂಸೇನಾ ನಿಗಮ ಹಾಗೂ ನಿರ್ಮಿತಿ ಕೇಂದ್ರ ಮುಂದಾಗಿರುವ ಮಾಹಿತಿ ಇದೆ. ಆದರೆ ರಸ್ತೆ ಅಗಲೀಕರಣ ಮಾಡದೆ ಕಾಮಗಾರಿ ಆರಂಭಿಸಬಾರದು ಎಂದು ಒತ್ತಾಯಿಸಿದರು.
ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ 75 ಲಕ್ಷ ರೂ. ನಿಂದ 1 ಕೋಟಿ ರೂ. ಅನುದಾನ ಪಡೆದು ಕನಿಷ್ಠ 15ರಿಂದ 20 ಅಡಿ ಅಗಲದ ರಸ್ತೆಯನ್ನು ನಿರ್ಮಿಸಬೇಕು ಎಂದು ಶಾಸಕ ರಾಜಾ ವೇಣುಗೋಪಾಲ ನಾಯಕ ಅವರಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರ್ ಕಟ್ಟಿಮನಿ ಝಂಡದಕೇರಾ, ಸಿದ್ದಪ್ಪ ಸುರಪುರಕರ್, ಮೂರ್ತಿ ಬೊಮ್ಮನಹಳ್ಳಿ, ರಾಮಚಂದ್ರ ವಾಗಣಗೇರ, ಮರೆಪ್ಪ ಕಾಂಗ್ರೆಸ್, ರಾಮಣ್ಣ ಶೆಳ್ಳಗಿ ಇತರರು ಉಪಸ್ಥಿತರಿದ್ದರು.






