ಸುರಪುರ | ಕಚೇರಿ, ಅಂಗಡಿಗಳ ಮೇಲೆ ಕನ್ನಡ ನಾಮಫಲಕಕ್ಕೆ ಆಗ್ರಹಿಸಿ ಹೋರಾಟಗಾರರ ಮನವಿ

ಸುರಪುರ : ನಗರದಲ್ಲಿರುವ ಎಲ್ಲಾ ಸರ್ಕಾರಿ ಕಚೇರಿಗಳು ಸೇರಿದಂತೆ ಅಂಗಡಿ-ಮಳಿಗೆಗಳ ಮೇಲೆ ಕಡ್ಡಾಯವಾಗಿ ಕನ್ನಡ ನಾಮಫಲಕ ಹಾಕುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ನಗರಸಭೆ ಮುಂದೆ ಪ್ರತಿಭಟನೆ ನಡೆಸಿದವು.
ಈ ವೇಳೆ ಪ್ರತಿಭಟನಾಕಾರರು ಮಾತನಾಡಿ, ಈ ಕುರಿತು ಈಗಾಗಲೇ ಅನೇಕ ಬಾರಿ ಮೌಖಿಕ ಮನವಿ ಮಾಡಿದ್ದರೂ ಪರಿಣಾಮಕಾರಿ ಕ್ರಮ ಕೈಗೊಳ್ಳಲಾಗಿಲ್ಲ. ಇಂದು ಕೊನೆಯದಾಗಿ ಮನವಿ ಸಲ್ಲಿಸುತ್ತಿದ್ದೇವೆ. ಒಂದು ವಾರದೊಳಗೆ ಎಲ್ಲಾ ಕಚೇರಿ, ಅಂಗಡಿಗಳ ಮೇಲೆ ದೊಡ್ಡ ಅಕ್ಷರಗಳಲ್ಲಿ ಕನ್ನಡ ನಾಮಫಲಕಗಳನ್ನು ಹಾಕದಿದ್ದರೆ ಎಲ್ಲ ಸಂಘಟನೆಗಳು ಸೇರಿ ನಾಮಫಲಕ ತೆರವುಗೊಳಿಸುವ ಹೋರಾಟ ನಡೆಸಲಾಗುವುದು. ಆ ಸಂದರ್ಭದಲ್ಲಿ ಏನೇ ಘಟನೆ ನಡೆದರೂ ತಾಲೂಕು ಆಡಳಿತವೇ ಹೊಣೆಗಾರವಾಗುತ್ತದೆ ಎಂದು ಎಚ್ಚರಿಸಿದರು.
ನಂತರ ಪ್ರತಿಭಟನಾಕಾರರು ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಶಿವಮೋನಯ್ಯ ಎಲ್.ಡಿ. ನಾಯಕ, ಭೀಮನಾಯಕ ಮಲ್ಲುಬಾವಿ, ಮಲ್ಲು ನಾಯಕ, ನಿಂಗಪ್ಪ ನಾಯಕ ಬಿಜಾಪುರ, ಭೀಮನಗೌಡ ಲಕ್ಷ್ಮಿಗೋಪಾಲದೊರೆ, ಮಲ್ಲು ಕವಡಿಮಟ್ಟಿ, ಯಲ್ಲಪ್ಪ ನಾಯಕ, ಶಿವರಾಜ ವಗ್ಗಾರ, ಮಲ್ಲು ವಿಷ್ಣುಸೇನಾ, ರಂಗಪ್ಪ ನಾಯಕ, ನಾಗರಾಜ ನಾಯಕ, ವಿನೋದ ನಾಯಕ, ಮಲ್ಲು ಬೇವಿನಾಳ, ನಾಗೇಂದ್ರ ದೊರೆ ಹಾಗೂ ಇತರರು ಉಪಸ್ಥಿತರಿದ್ದರು.





