ಸುರಪುರ | ವೇಣುಗೋಪಾಲ ಸ್ವಾಮಿ ಜಾತ್ರೆಯಲ್ಲಿ ಕುಸ್ತಿ ಪಂದ್ಯಾವಳಿ

ಸುರಪುರ: ನಗರದ ಶ್ರೀ ವೇಣುಗೋಪಾಲ ಸ್ವಾಮಿ ದೇವರ ಜಾತ್ರಾ ಮಹೋತ್ಸವದ ಅಂಗವಾಗಿ ಮೂರನೇ ದಿನದ ಕಾರ್ಯಕ್ರಮದಲ್ಲಿ ಅದ್ದೂರಿಯಾಗಿ ಕುಸ್ತಿ ಪಂದ್ಯಾವಳಿ ನಡೆಸಲಾಯಿತು.
ದೇವಸ್ಥಾನದ ಆವರಣದಲ್ಲಿ ಕುಸ್ತಿ ಪಂದ್ಯಾವಳಿಗೆ ಅಂಕಣವನ್ನು ಸಿದ್ಧಗೊಳಿಸಲಾಗಿತ್ತು, ಸುರಪುರ ರಾಜವಂಶಸ್ಥರಾದ ರಾಜ ಕೃಷ್ಣಪ್ಪ ನಾಯಕ ಅವರು ಭಾಗವಹಿಸಿ ಪಂದ್ಯಾವಳಿಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಿನ ವಾಗಣಗೇರ, ದೇವರಗೊನಾಲ ಹಾಗೂ ಶಹಾಪುರ ತಾಲ್ಲೂಕಿನ ರಸ್ತಾಪುರ ದೋರನಹಳ್ಳಿ, ಗೋಗಿ ಸೇರಿದಂತೆ ಕಲಬುರಗಿ, ವಿಜಯಪುರ ಇತರೆ ಜಿಲ್ಲೆಗಳಿಂದಲೂ ಅನೇಕ ಜನ ಕುಸ್ತಿಪಟುಗಳು ಭಾಗವಹಿಸಿದ್ದರು.
ಕುಸ್ತಿ ಪಂದ್ಯಾವಳಿಯಲ್ಲಿ ಮೊದಲಿಗೆ ನಗದು ಬಹುಮಾನದ ಕುಸ್ತಿ ಪಂದ್ಯಾವಳಿ ನಡೆಯಿತು. ನಂತರ ಸಂಜೆಯ ವೇಳೆಗೆ ಕಡಗದ ಕುಸ್ತಿಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದ ಅಶೋಕ ಎನ್ನುವ ಕುಸ್ತಿಪಟು ಕಡಗದ ಕುಸ್ತಿಯನ್ನು ಗೆದ್ದಿದ್ದು, ಈ ಕುಸ್ತಿ ಪಟುವಿಗೆ ರಾಜಾ ಕೃಷ್ಣಪ್ಪ ನಾಯಕ ಅವರು ಬೆಳ್ಳಿಯ ಕಡಗವನ್ನು ತೊಡಿಸಿ ಸಾವಿರ ರೂಪಾಯಿ ನಗದು ಬಹುಮಾನವನ್ನು ನೀಡಿ ಸತ್ಕರಿಸಿದರು.
ಈ ಸಂದರ್ಭದಲ್ಲಿ ಅರಸು ಮನೆತನದ ರಾಜಾ ಲಕ್ಷ್ಮಿ ನಾರಾಯಣ ನಾಯಕ ಸೇರಿದಂತೆ ಅನೇಕ ಜನ ವತನದಾರರು ಹಾಗೂ ಮುಖಂಡರು ಸೇರಿದಂತೆ ಸಾವಿರಾರು ಜನ ಭಾಗವಹಿಸಿ ರಣ ರೋಚಕವಾಗಿ ನಡೆದ ಕುಸ್ತಿ ಪಂದ್ಯಾವಳಿಯನ್ನು ವೀಕ್ಷಿಸಿದರು.
ಸುರಪುರದ ಹಾಲೋಕಳಿ ಜಾತ್ರೆಯ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದ ಬಳಿಯ ಆವರಣದಲ್ಲಿ ರಣಗಂಬೋತ್ಸವ ಕಾರ್ಯಕ್ರಮ ಜರುಗಿತು.
ರಣಗಂಬೋತ್ಸವದಲ್ಲಿ ವಿವಿಧ ಕೇರಿಗಳ ಕಂಬ ಆರೋಹಿಗಳು ಭಾಗವಹಿಸಿ ಕಂಬಾರೋಹಣವನ್ನು ನಡೆಸಿದರು. ಜಿನಿ ಜಿನಿ ಸುರಿಯುತ್ತಿರುವ ಮಳೆಯಲ್ಲಿಯೇ ರಣಗಂಬೋತ್ಸವ ಆಚರಿಸಲಾಯಿತು.







