ವಡಿಗೇರಾ | ಗ್ರಾಮೀಣರಿಗೆ ನಿರಂತರ ಕೂಲಿ ಕೆಲಸ, ಗುಣಮಟ್ಟದ ಆಸ್ತಿ ಸೃಜನೆಗೆ ಆದ್ಯತೆ: ಸಿ.ಬಿ.ದೇವರಮನೆ

ವಡಿಗೇರಾ: ಗ್ರಾಮೀಣ ಭಾಗದಲ್ಲಿ ನಿರಂತರ ಅಕುಶಲ ಕೂಲಿ ಕೆಲಸ ಒದಗಿಸುವ ಉದ್ದೇಶದಿಂದ ವಿಕಸಿತ ಭಾರತ ಗ್ಯಾರಂಟಿ ಫಾರ್ ರೋಜ್ಗಾರ್ ಆ್ಯಂಡ್ ಅಜೀವಿಕ ಮಿಷನ್ (ವಿಬಿ-ಜಿ ರಾಮ್-ಜಿ) ಯೋಜನೆಯಡಿ ಸಾವಿರಾರು ಜನರು ಕೂಲಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿರುವ ಕಾಮಗಾರಿಗಳಲ್ಲಿ ಗುಣಮಟ್ಟದ ಆಸ್ತಿ ಸೃಜನೆಗೆ ಎಲ್ಲರೂ ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಯೋಜನಾ ನಿರ್ದೇಶಕ ಸಿ.ಬಿ. ದೇವರಮನೆ ಹೇಳಿದರು.
ತಾಲೂಕಿನ ತುಮಕೂರು, ಬಿಳ್ಹಾರ ಹಾಗೂ ಐಕೂರು ಗ್ರಾಮಗಳ ಹೊರವಲಯದಲ್ಲಿ ವಿಬಿ-ಜಿ ರಾಮ್-ಜಿ ಯೋಜನೆಯಡಿ ಕೈಗೊಂಡಿರುವ ಗೋ ಕಟ್ಟೆ ಹಾಗೂ ಟ್ರಂಚೆಸ್ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿದ ಅವರು, ಅನುಮೋದಿತ ಕಾಮಗಾರಿಗಳ ತಾಂತ್ರಿಕ ಮಾನದಂಡಗಳನ್ನು ಪರಿಶೀಲಿಸಿದರು. ನಿಯಮಾನುಸಾರ ಕಾಮಗಾರಿಯ ಗುಣಮಟ್ಟ, ಅಳತೆ ಹಾಗೂ ಕಾರ್ಮಿಕರ ಹಾಜರಾತಿಯನ್ನು ಪರಿಶೀಲಿಸಿ, ಕಾರ್ಮಿಕರು ನಿಗದಿತ ಮಾಪನದಂತೆ ಕೆಲಸ ನಿರ್ವಹಿಸುವ ಮೂಲಕ ಕಾಮಗಾರಿಯ ಭೌತಿಕ ಗುಣಮಟ್ಟ ಕಾಪಾಡಬೇಕು ಎಂದು ಸೂಚಿಸಿದರು.
ಈಗಾಗಲೇ ಬರ ಪರಿಸ್ಥಿತಿ ಆವರಿಸಿರುವ ಹಿನ್ನೆಲೆಯಲ್ಲಿ ಗ್ರಾಮೀಣರಿಗೆ ನಿರಂತರ ಕೆಲಸ ಒದಗಿಸಲು ಇಲಾಖೆ ಸಿದ್ಧವಿದೆ. ಕಾರ್ಮಿಕರು ನಿರ್ಲಕ್ಷ್ಯ ವಹಿಸದೆ ನಿಗದಿತ ಸಮಯಕ್ಕೆ ಬೆಳಿಗ್ಗೆ ಕೆಲಸಕ್ಕೆ ಹಾಜರಾಗಿ, ತಾಂತ್ರಿಕ ಮಂಜೂರಾತಿಯಂತೆ ಕಾಮಗಾರಿ ನಿರ್ವಹಿಸಬೇಕು ಎಂದರು.
ಬಿಳ್ಹಾರ ಗ್ರಾಮದ ಅರಣ್ಯ ಪ್ರದೇಶದಲ್ಲಿ ನಡೆಯುತ್ತಿದ್ದ ಟ್ರಂಚೆಸ್ ಕಾಮಗಾರಿಯ ಸ್ಥಳಕ್ಕೆ ಭೇಟಿ ನೀಡಿದ ಅವರು, ಜಾಬ್ ಕಾರ್ಡ್ ಮೇಳ ಅಭಿಯಾನದಲ್ಲೂ ಭಾಗವಹಿಸಿದರು. ಆ.15ರಿಂದ ಸೆ.15ರವರೆಗೆ ನಡೆಯುತ್ತಿರುವ ಜಾಬ್ ಕಾರ್ಡ್ ಮೇಳದ ಸದುಪಯೋಗವನ್ನು ಗ್ರಾಮೀಣರು ಪಡೆದುಕೊಳ್ಳಬೇಕು. ಇದುವರೆಗೆ ಜಾಬ್ ಕಾರ್ಡ್ ಹೊಂದಿರದ ಕುಟುಂಬಗಳು ಅಗತ್ಯ ದಾಖಲೆಗಳೊಂದಿಗೆ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ಹೊಸ ಜಾಬ್ ಕಾರ್ಡ್ ಪಡೆಯಬೇಕು. ಜಾಬ್ ಕಾರ್ಡ್ ಹೊಂದಿದ್ದರೂ ಕೆಲಸಕ್ಕೆ ಬಾರದ ಕಾರ್ಮಿಕರು ಸಹ ವಿಬಿ-ಜಿ ರಾಮ್-ಜಿ ಯೋಜನೆಯಡಿ ಕೆಲಸದಲ್ಲಿ ಭಾಗವಹಿಸಬೇಕು ಎಂದು ತಿಳಿಸಿದರು.
ಈಗಾಗಲೇ ಕೆಲಸಕ್ಕೆ ಬರುತ್ತಿರುವ ಕಾರ್ಮಿಕರು ನಿರಂತರವಾಗಿ ಹಾಜರಾಗಬೇಕು. ಪ್ರತಿ ಕಾರ್ಮಿಕರಿಗೆ ದಿನಕ್ಕೆ ₹382 ಕೂಲಿ ನೀಡಲಾಗುತ್ತಿದ್ದು, ವಾರ್ಷಿಕ 125 ದಿನಗಳವರೆಗೆ ನಿರಂತರ ಕೆಲಸ ಪಡೆಯಲು ಅವಕಾಶವಿದೆ ಎಂದರು.
ಟ್ರಂಚೆಸ್ ಹಾಗೂ ಗೋ ಕಟ್ಟೆ ಕಾಮಗಾರಿಗಳಿಂದ ಅಂತರ್ಜಲ ಮಟ್ಟ ಹೆಚ್ಚಾದರೆ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ನೀರಿನ ತೇವಾಂಶ ಹೆಚ್ಚಾಗಿ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಇದರಿಂದ ಪರಿಸರ ಸಂರಕ್ಷಣೆ, ಪರಿಸರ ಸಮತೋಲನ ಹಾಗೂ ಜೀವವೈವಿಧ್ಯತೆಯ ವೃದ್ಧಿಗೆ ಸಹಕಾರಿಯಾಗುವುದರ ಜತೆಗೆ ಗ್ರಾಮೀಣ ಜನರು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲರಾಗಲು ನೆರವಾಗಲಿದೆ ಎಂದು ಹೇಳಿದರು.
ಕೆಲಸದ ಸ್ಥಳಗಳಲ್ಲಿ ಕುಡಿಯುವ ನೀರು, ನೆರಳು ಹಾಗೂ ಅಗತ್ಯ ಪ್ರಥಮ ಚಿಕಿತ್ಸಾ ವ್ಯವಸ್ಥೆ ಕಲ್ಪಿಸಬೇಕು. ಗ್ರಾಮೀಣ ಕೂಲಿ ಕಾರ್ಮಿಕರು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ಸೂಚಿಸಿದರು. ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ವೈಯಕ್ತಿಕ ಕಾಮಗಾರಿಗಳಾದ ಕುರಿ ಶೆಡ್, ಕೋಳಿ ಶೆಡ್, ಜಾನುವಾರುಗಳ ಶೆಡ್ ಸೇರಿದಂತೆ ವಿವಿಧ ಯೋಜನೆಗಳ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದರು.
ತಾಲೂಕಿನಲ್ಲಿ ತಾಂತ್ರಿಕ ಅನುಮೋದನೆ ಪಡೆದಿರುವ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಿ, ಗ್ರಾಮೀಣ ಭಾಗದ ಜನರು ಗುಳೆ ಹೋಗುವುದನ್ನು ತಡೆಯಲು ವಿಬಿ-ಜಿ ರಾಮ್-ಜಿ ಯೋಜನೆಯಡಿ ನಿರಂತರ ಕೆಲಸ ಒದಗಿಸಬೇಕು. ನಿಗದಿತ ಮಾನವ ದಿನಗಳ ಗುರಿ ತಲುಪುವಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಶ್ರೀ ಶಶಿಧರ ಹಿರೇಮಠ, ಡಿಎಮ್ ಐಎಸ್ ರಾಘವೇಂದ್ರ, ಟಿಐಇಸಿ ಪರಶುರಾಮ, ಪಿಡಿಓ ಮಲ್ಲಿಕಾರ್ಜುನ, ಟಿಸಿ ರವೀಂದ್ರ ದೇಸಾಯಿ, ಟಿಐಇಸಿ ದುರ್ಗೇಶ್, ಟಿಎಇ, ಬಿಎಫ್ ಟಿ, ಜಿಕೆಮ್ ಸೇರಿದಂತೆ ಕೂಲಿಕಾರರು ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ಇದ್ದರು.






