ಯಾದಗಿರಿ | ಫೇಸ್ಬುಕ್ನಲ್ಲಿ ದಲಿತರ ನಿಂದನೆ ಆರೋಪ : ಆರೋಪಿಯ ಬಂಧನಕ್ಕೆ ಒತ್ತಾಯ

ಯಾದಗಿರಿ, ಜ.12: ಡಾ.ಬಿ.ಆರ್.ಅಂಬೇಡ್ಕರ್ ಮತ್ತು ದಲಿತರಿಗೆ ಅವಮಾನ ಮಾಡುವ ರೀತಿಯಲ್ಲಿ ಪ್ರಚೋದನಕಾರಿ ಪೋಸ್ಟ್ ಮಾಡುತ್ತಿರುವ ‘ಗುಲಾಮರ ಅಪ್ಪ’ ಎನ್ನುವ ಫೇಸ್ಬುಕ್ ಕಿಡಿಗೇಡಿಯನ್ನು ಬಂಧಿಸಬೇಕೆಂದು ದಲಿತ ಸಂಘರ್ಷ ಸಮಿತಿ (ಭೀಮವಾದ) ಜಿಲ್ಲಾಧ್ಯಕ್ಷ ವಿಶ್ವ ನಾಟೇಕಾರ್ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕಿಡಿಗೇಡಿಯೊಬ್ಬ ‘ಗುಲಾಮರ ಅಪ್ಪ’ ಎಂಬ ನಕಲಿ ಖಾತೆಯಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಮತ್ತು ದಲಿತ ಸಮುದಾಯವನ್ನು ಅತ್ಯಂತ ಕೆಟ್ಟ ಪದಗಳಲ್ಲಿ ನಿಂದಿಸುತ್ತಿದ್ದರೂ ಅಧಿಕಾರದಲ್ಲಿರುವವರು ಅದರ ಬಗ್ಗೆ ತಲೆಕೆಡಸಿಕೊಳ್ಳುತ್ತಿಲ್ಲ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಚಿತ್ರನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಕಾರಣಕ್ಕೆ, ಪ್ರಿಯಾಂಕ್ ಖರ್ಗೆಯವರನ್ನು ಅಶ್ಲೀಲವಾಗಿ ಬೈದ ಅನ್ನೋ ಕಾರಣಕ್ಕೆ ದಿನಾ ಬೆಳಗಾಗುವುದರೊಳಗೆ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಾರೆ. ಆದರೆ ಅಂಬೇಡ್ಕರ್, ಬುದ್ಧ ಹಾಗೂ ದಲಿತರನ್ನು ಪ್ರತಿನಿತ್ಯ ನಿಂದಿಸುವ ದುಷ್ಕರ್ಮಿಗಳು ಕಣ್ಣಿಗೆ ಬೀಳುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.





