ಯಾದಗಿರಿ | ಸಚಿವ ಝಮೀರ್ ಅಹ್ಮದ್ ಅವರನ್ನು ಡಿಸಿಎಂ ಮಾಡಲು ಆಗ್ರಹ

ಯಾದಗಿರಿ: ರಾಜ್ಯದ ಅಲ್ಪಸಂಖ್ಯಾತ ಸಮುದಾಯಕ್ಕೆ ನ್ಯಾಯವಾದ ಪ್ರತಿನಿಧಿತ್ಯ ದೊರೆಯಬೇಕಾದರೇ ಸಚಿವ ಝಮೀರ್ ಅಹ್ಮದ್ ಖಾನ್ ಅವರನ್ನು ಉಪಮುಖ್ಯಮಂತ್ರಿಯನ್ನಾಗಿ ನೇಮಕ ಮಾಡುವಂತೆ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಮುಜೀಬ್ ಅವರು ಪಕ್ಷದ ಹೈಕಮಾಂಡ್ ಗೆ ಒತ್ತಾಯಿಸಿದ್ದಾರೆ.
ಸೋಮವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 10 ಶಾಸಕರು, ನಾಲ್ವರು ಎಂಎಲ್ಗಳು ಮತ್ತು ಒಬ್ಬರು ರಾಜ್ಯಸಭಾ ಸದಸ್ಯರಿದ್ದರೂ, ಸಮುದಾಯಕ್ಕೆ ಕೇವಲ ಎರಡು ಸಚಿವ ಸ್ಥಾನಗಳು ನೀಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ 2013ರ ವಿಧಾನಸಭಾ ಚುನಾವಣೆಯಲ್ಲಿ ಶೇ 30.90ರಷ್ಟು ಮುಸ್ಲಿಂ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ಮತಹಾಕಿದ್ದು, 70,80 ಕ್ಷೇತ್ರಗಳಲ್ಲಿ ಪಕ್ಷದ ಗೆಲುವಿಗೆ ಪ್ರಮುಖ ಕಾರಣರಾಗಿದ್ದಾರೆಂದು ಅವರು ವಿವರಿಸಿದರು. ಸಮುದಾಯಕ್ಕೆ ಸಮನಾದ ನ್ಯಾಯ ಸಿಕ್ಕಿಲ್ಲ. ಆದ್ದರಿಂದ ಝಮೀರ್ ಅವರನ್ನು ಡಿಸಿಎಂ ಮಾಡಬೇಕು, ಸಮುದಾಯದ ಅರ್ಹ 3-4 ಶಾಸಕರಿಗೆ ಸಚಿವ ಸ್ಥಾನ, ನಿಗಮ ಮಂಡಳಿಗಳ ಅಧ್ಯಕ್ಷ ಸ್ಥಾನ ನೀಡಬೇಕೆಂದು ಅವರು ಒತ್ತಾಯಿಸಿದರು.
ನಿರ್ಲಕ್ಷ್ಯವಹಿಸದರೆ ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲಿಸುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ನೆಲೋರ್ ಬಾದಲ್ ಅವರು ಮಾತನಾಡಿದರು.
ಸುದ್ದಿಗೋಷ್ಠಿಯಲ್ಲಿ ಕಲ್ಯಾಣ ಕರ್ನಾಟಕ ನ್ಯಾಯಕ್ರಾಂತಿ ಸಂಘಟನೆಯ ಅಧ್ಯಕ್ಷ ಬಿ ಕೆ.ನಾಸಿ, ಕಾಂಗ್ರೆಸ್ ಯುವ ಮುಖಂಡರಾದ ಜಲಾಲ್ ಸಾಬ್, ಸಲೀಂ ನಾಯ್ಕಲ್, ಗ್ಯಾರಂಟಿ ಸಮಿತಿ ಸದಸ್ಯ ಜಲಾಲ್ ಪಟೇಲ್ ಮತ್ತು ಅಕಿಲಾ ಬೂತುಲ್ ಸೇರಿದಂತೆ ಇತರರಿದ್ದರು.







