ನವೆಂಬರ್ನಲ್ಲಿ ಯಾದಗಿರಿ ಜಿಲ್ಲಾ ಉತ್ಸವ ಆಯೋಜನೆ

ಯಾದಗಿರಿ: ಬರುವ ನವೆಂಬರ್ ತಿಂಗಳೊಳಗಾಗಿ ಜಿಲ್ಲಾ ಉತ್ಸವವನ್ನು ಅದ್ಧೂರಿಯಾಗಿ ಆಯೋಜಿಸಲಾಗುವುದು ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪೂರ ಪ್ರಕಟಿಸಿದರು.
ನಗರದಲ್ಲಿನ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರ ನಿಯೋಗವನ್ನು ಭೇಟಿ ಮಾಡಿ ಮಾತನಾಡಿದ ಅವರು, ಮುಂಬರುವ ಏಪ್ರಿಲ್ ತಿಂಗಳಲ್ಲಿ ಜಿಲ್ಲೆಯ ಎಲ್ಲಾ ಉನ್ನತ ಅಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರ ವಿಶೇಷ ಸಭೆ ಕರೆಯಲಾಗುವುದು. ಆ ಸಭೆಯಲ್ಲಿ ಉತ್ಸವದ ಪೂರ್ವಸಿದ್ಧತೆಗಳ ಕುರಿತು ಸವಿಸ್ತಾರವಾಗಿ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರವೇ (ಪ್ರವೀಣ ಶೆಟ್ಟಿ ಬಣ) ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಬಿ ಗದ್ದಿಗೆ, ಜಿಲ್ಲೆ ರಚನೆಯಾಗಿ 16 ವರ್ಷಗಳಾದರೂ ಜಿಲ್ಲಾ ಉತ್ಸವ ಇನ್ನೂ ಕನಸಾಗಿಯೇ ಉಳಿದಿದೆ. ಜಿಲ್ಲೆಯ ಸಮಸ್ತ ಕನ್ನಡಿಗರ ಕನಸು ಈ ವರ್ಷ ನನಸಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಕರವೇ ಜಿಲ್ಲಾಧ್ಯಕ್ಷ ಟಿ ಎನ್ ಭೀಮುನಾಯಕ್ ಮಾತನಾಡಿ, ಜಿಲ್ಲೆಯ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅನಾವರಣಗೊಳಿಸಲು ಜಿಲ್ಲಾ ಉತ್ಸವ ಆಯೋಜನೆ ಅಗತ್ಯವಾಗಿದೆ. ಹಿಂದುಳಿದ ಗಡಿಭಾಗದ ಜಿಲ್ಲೆಯಲ್ಲಿ ಕನ್ನಡದ ಸಂಸ್ಕೃತಿ ಪಸರಿಸಲು ಇದು ಸಹಾಯಕವಾಗಲಿದೆ ಎಂದು ಹೇಳಿದರು.
ಸ್ಥಳೀಯ ಕಲಾವಿದರಿಗೆ ವೇದಿಕೆ ಕಲ್ಪಿಸಿ, ಜಿಲ್ಲೆಯ ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಜಿಲ್ಲಾ ಉತ್ಸವ ಅತ್ಯಂತ ಅವಶ್ಯಕ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಕರವೇ ನಿಯೋಗವು ಸಚಿವ ದರ್ಶನಾಪೂರ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿತು.
ಬಳಿಕ ಕರವೇ ಮುಖಂಡರ ನಿಯೋಗವು ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಈ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಸಂತೋಷಕುಮಾರ ನಿರ್ಮಲಕರ್, ಸಿದ್ದುರಡ್ಡಿ ತಂಗಡಗಿ, ಮಲ್ಲು ಮಾಳಿಕೇರಿ, ಅಂಬ್ರೇಷ್ ಹತ್ತಿಮನಿ, ಚೌಡಯ್ಯ ಬಾವೂರ, ವಿಶ್ವರಾಜ ಪಾಟೀಲ್, ಭೀಮಾಶಂಕರ ಹತ್ತಿಕುಣಿ, ಬಸವರಾಜ ಜಗನ್ನಾಥ, ಅಶೋಕ ನಾಯಕ, ವಿಜಯಕುಮಾರ ರಾಠೋಡ, ಸಿದ್ದಲಿಂಗರಡ್ಡಿ ಮುನಗಾಲ, ರವಿ ಜಮ್ಮಾರ, ಮಲ್ಲು ಚಾಮನಳ್ಳಿ, ಭೀಮುಪೂಜಾರಿ, ರಮೇಶ ಡಿ. ನಾಯಕ ಸೇರಿದಂತೆ ಅನೇಕರು ಇದ್ದರು.







