ಯಾದಗಿರಿ | ಒಳಮೀಸಲಾತಿ ವಿರೋಧಿಸಿ ಮಾ.25ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

ಯಾದಗಿರಿ: ಒಳಮೀಸಲಾತಿ ವಿಚಾರದಲ್ಲಿ ನಾಗಮೋಹನ್ ದಾಸ್ ಸಮಿತಿ ನೀಡಿರುವ ವರದಿ ಅವೈಜ್ಞಾನಿಕವಾಗಿದ್ದು, ಹಂಚಿಕೆ ಹಾಗೂ ರೋಸ್ಟರ್ ವ್ಯವಸ್ಥೆಯಲ್ಲಿ ಬಲಗೈ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಛಲವಾದಿ ಮಹಾಸಭೆ ಯಾದಗಿರಿ ಜಿಲ್ಲಾ ಅಧ್ಯಕ್ಷ ವೀರಭದ್ರಪ್ಪ ಯಡ್ಡಳ್ಳಿ ಆರೋಪಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ಮಾರ್ಚ್ 25ರಂದು ಬೆಂಗಳೂರಿನಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ ಅವರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ನಾಗಮೋಹನ್ ದಾಸ್ ವರದಿಯನ್ನು ತಿರಸ್ಕರಿಸಿ, ಮತ್ತೊಮ್ಮೆ ಸಮಗ್ರ ಜಾತಿ ಜನಗಣತಿ ಸಮೀಕ್ಷೆ ನಡೆಸಬೇಕು. ರೋಸ್ಟರ್ ಪದ್ಧತಿಯ ಒಳಮೀಸಲಾತಿಯನ್ನು ಯಾವುದೇ ಕಾರಣಕ್ಕೂ ಜಾರಿಗೆ ತರಬಾರದು ಎಂದು ಅವರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಬಲಗೈ ಜಾತಿಗಳ ಒಕ್ಕೂಟ ಸಮಿತಿಯ ಯಾದಗಿರಿ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಪೂಜಾರಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಪರಿಶಿಷ್ಟ ಜಾತಿಯ ಬಲಗೈ ಪಂಗಡದವರ ಮತದ ಆಧಾರದಲ್ಲಿ ಅಧಿಕಾರಕ್ಕೆ ಬಂದಿದ್ದರೂ, ಒಳಮೀಸಲಾತಿ ಜಾರಿಗೆ ಸಂಬಂಧಿಸಿದ ಭರವಸೆಯನ್ನು ಎರಡು ವರ್ಷಗಳಾದರೂ ಈಡೇರಿಸಿಲ್ಲ. ಬದಲಾಗಿ ಬಲಗೈ ಮತ್ತು ಎಡಗೈ ಜಾತಿಗಳ ನಡುವೆ ಭಿನ್ನತೆ ಉಂಟುಮಾಡುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಸರ್ವೋಚ್ಚ ನ್ಯಾಯಾಲಯವು 2024ರ ಆ.1ರಂದು ನೀಡಿದ ತೀರ್ಪಿನಲ್ಲಿ ಒಳಮೀಸಲಾತಿ ಜಾರಿಗೆ ರಾಜ್ಯಗಳಿಗೆ ಅಧಿಕಾರವಿದೆ ಎಂದರೂ, ಅದು ಸಮರ್ಪಕ ಅಂಕಿಅಂಶಗಳ ಆಧಾರದಲ್ಲಿಯೇ ಜಾರಿಯಾಗಬೇಕು ಎಂದು ಸ್ಪಷ್ಟಪಡಿಸಿದೆ. ಆದರೆ, ರಾಜ್ಯ ಸರ್ಕಾರ ಈ ಮಾರ್ಗಸೂಚಿಗಳನ್ನು ಪಾಲಿಸದೇ ಕ್ರಮ ಕೈಗೊಂಡಿದೆ ಎಂದು ಅವರು ಹೇಳಿದರು.
ಮಾರ್ಚ್ 25ರಂದು ನಡೆಯುವ ಪ್ರತಿಭಟನೆಯಲ್ಲಿ ಯಾದಗಿರಿ ಜಿಲ್ಲೆಯಿಂದ ಸಾವಿರಾರು ಜನರು ಭಾಗವಹಿಸಲಿದ್ದು, ಪ್ರಗತಿಪರ ಚಿಂತಕರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಮಿತಿಯ ಗೌರವಾಧ್ಯಕ್ಷ ಡಾ. ಭಗವಂತ ಅನ್ವಾರ್, ಸಂಚಾಲಕ ಶ್ರೀಶೈಲ ಹೊಸ್ಮನಿ, ಉಪಾಧ್ಯಕ್ಷ ಮಾನಪ್ಪ ಕಟ್ಟಿಮನಿ, ಪ್ರಧಾನ ಕಾರ್ಯದರ್ಶಿ ಮರೆಪ್ಪ ಚಟ್ಟೇರಕರ್, ಕಾರ್ಯದರ್ಶಿ ಡಾ. ಗಾಳೆಪ್ಪ ಪೂಜಾರಿ, ಸಹ ಕಾರ್ಯದರ್ಶಿ ಚಂದಪ್ಪ ಮುನಿಪನೋರ, ಸಂಘಟನಾ ಕಾರ್ಯದರ್ಶಿ ಶರಣು ಎಸ್. ನಾಟೇಕಾರ್, ಭೀಮಣ್ಣ ಹೊಸ್ಮನಿ, ನಾಗಣ್ಣ ಬಡಿಗೇರ, ಬಾಬರಾವ್ ಕಾಡ್ಲೂರ್, ಶಿವುಪುತ್ರ ಜವಳಿ, ಕಾಶೀನಾಥ್ ನಾಟೇಕಾರ್, ನೀಲಕಂಠ ಬಡಿಗೇರ, ಭೀಮರಾಯ ಸಿಂದಿಗೇರಿ, ಹೊನಪ್ಪ ಗಂಗನಾಳ ಸೇರಿದಂತೆ ಹಲವರು ಉಪಸ್ಥಿತರಿದ್ದರು.






