ಯಾದಗಿರಿ | ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯಾಗಿ ಮಾಡಿ: ನಿಜಗುಣನಂದ ಸ್ವಾಮಿ

ಗುರುಮಠಕಲ್ : ಕಷ್ಟ -ದುಃಖಗಳು ಬಂದಾಗ ಪರಿಹಾರಕ್ಕೆ ನಮ್ಮ ದುಡಿಮೆಯೇ ಮದ್ದು ಹೊರತು ದೇವರು ಅಲ್ಲ ಎಂದು ಬೈಲೂರು ನಿಷ್ಕಲ ಮಂಟಪ ಶ್ರೀ ನಿಜಗುಣನಂದ ಮಹಾಸ್ವಾಮಿಗಳು ತಿಳಿಸಿದರು.
ಪಟ್ಟಣದ ಭಾನುವಾರ ಶ್ರೀರಾಮ್ ಶಿಕ್ಷಣ ಅಭಿವೃದ್ಧಿ ಸಂಸ್ಥೆ ಸಂಚಾಲಿತ ಜ್ಞಾನವೃಕ್ಷ ನವೋದಯ ತರಬೇತಿ ಕೇಂದ್ರ ವತಿಯಿಂದ ಆಯೋಜಿಸಿದ ಪಾಲಕರ ಸಭೆ ಮತ್ತು ಆಯ್ಕೆ ಗೊಂಡ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಅವರು ಮಾತನಾಡಿ, ಭೂತ ಬಿಡಿಸುವರ ಹತ್ತಿರ ಕೈ ಚಾಚ ಭೇಡಿ, ದೇವರು ದಿಂಡ್ರು ಅಂತಾ ಮೂಢ ನಂಬಿಕೆಗಳಿಗೆ ಬಲಿಯಾಗಬೇಡಿ ನಮ್ಮ ಸ್ವಾಲಂಬನೆಗೆ ಒತ್ತು ನೀಡಬೇಕು ಎಂದು ಅವರು ಸಲಹೆ ನೀಡಿದರು.
ಪಾಲಕರು ಮಕ್ಕಳಿಗಾಗಿ ಆಸ್ತಿ ಮಾಡಬೇಡಿ, ಮಕ್ಕಳನ್ನೇ ಆಸ್ತಿಯಾಗಿ ಮಾಡಿ, ಮಕ್ಕಳಿಗೆ ಭಯ ಭೀತಿಯಲ್ಲಿ ಬೆಳೆಸದೆ ಉತ್ತಮ ಸಂಸ್ಕಾರ ಉತ್ತಮ ನಡತೆ ಮತ್ತು ಉತ್ತಮ ಜ್ಞಾನ ಹಾಗು ಉತ್ತಮ ಮನುಷ್ಯ ಆಗುವಂತೆ ಬೆಳೆಯಲು ಉತ್ತಮ ವಾತಾವರಣ ಕಲ್ಪಿಸಬೇಕು ಹೊರತು ತಮ್ಮ ಮಕ್ಕಳನ್ನು ಬೇರೆ ಮಕ್ಕಳಿಗೆ ಹೋಲಿಸಬೇಡಿ ಎಂದು ಅವರು ಪಾಲಕರಿಗೆ ಕಿವಿ ಮಾತು ಹೇಳಿದರು.
ಮಕ್ಕಳು ಜೀವಂತ ಇರುವ ತಂದೆ ತಾಯಿರನ್ನು ದೇವರು ಎಂದು ತಿಳಿದು ಪೂಜಿಸಬೇಕು. ದಿನ ನಿತ್ಯ ಅವರ ಪಾದಗಳಿಗೆ ನಮಿಸಿ ಮುಂದಿನ ಕೆಲಸ ಆರಂಭಿಸಬೇಕು. ರಾಜಕಾರಣಿಗಳ, ಭೂತ ದೆವ್ವ ಬಿಡಿಸುವ ತಂತ್ರ ಮಂತ್ರಿಕರ ಹಾಗು ಡಂಬಿಚಾರಿಕ ಪೂಜಾರಿಗಳು ಹಾಗು ಸ್ವಾಮಿಜಿಗಳ ಮಾತು ಗಳಿಗೆ ಬಲಿ ಪಶು ಆಗಬೇಡಿ, ತಂದೆ -ತಾಯಿರನ್ನು ನಂಬಿ ಬೆಳೆಯಿರಿ ಅವರನ್ನು ಅನಾಥ ಆಶ್ರಮಗಳಲ್ಲಿ ಬಿಡಬೇಡಿ. ಇದು ನಮ್ಮ ಸಂಸ್ಕೃತಿ ಅಲ್ಲ, ಇದ್ದಾಗ ತಂದೆ ತಾಯಿರನ್ನು ನೋಡಿ ಕೊಳ್ಳದ್ದವ ಅವರು ಸತ್ತ ಮೇಲೆ ದೊಡ್ಡ ಸಮಾಧಿ ಕಟ್ಟಿ ಪೂಜಿಸಿದರು ಪ್ರಯೋಜನವಿಲ್ಲ ಎಂದು ಸ್ವಾಮೀಜಿಗಳು ಎಚ್ಚರಿಸಿದರು.
ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ಸಂಸ್ಥಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಮಾತನಾಡಿ, ನಾವು ಬದಲಾಗಬೇಕಿದೆ. ಪ್ರಕೃತಿ ಬದಲಾಗಿದೆ. ನಾವು ವೈಜ್ಞಾನಿಕವಾಗಿ ಜೀವನ ಸಾಗಿಸಬೇಕು ಎಂದು ಸಲಹೆ ನೀಡಿದರು.
ಪಾಲಕರು ಬದಲಾಗಬೇಕು, 5 ಸಿ ಗಳಿಂದ ಮಕ್ಕಳು ದಾರಿ ತಪ್ಪುತ್ತಿದೆ. ಸೆಲ್, ಚಾಟಿಂಗ್, ಸಿರಿಯಲ್, ಸಿನಿಮಾ, ಕ್ರಿಕೆಟ್ ತ್ಯಜಿಸಿ, ಮಕ್ಕಳಿಗೆ ಪಾಸಿಟೀವ್ ವಿಚಾರ ಕೊಡಬೇಕಿದೆ ಎಂದು ಒತ್ತಿ ಹೇಳಿದರು. 2026ರಲ್ಲಿ ಚಂದ್ರನ ಮೇಲೆ ಮನೆ ಮಾಡುತ್ತಿದ್ದೇವೆ. ಮನೆಯ ವಾಸ್ತು ಅಲ್ಲ ಮನಸ್ಸಿನ ವಾಸ್ತು ನೋಡಿ. ಪಂಚಾಂಗ ಅಲ್ಲ, ಪಂಚ ಅಂಗಗಳು ನೋಡಿ ಎಂದು ವೈಜ್ಞಾನಿಕ ವಿಚಾರಗಳನ್ನು ಹೇಳಿದರು.
ಕಾರ್ಯಕ್ರಮದ ನೇತೃತ್ವವಹಿಸಿ ಶ್ರೀ ಶಾಂತವೀರ ಗುರುಮುರುಘರಾಜೇಂದ್ರ ಸ್ವಾಮಿಗಳು ಆಶೀರ್ವಚನ ನೀಡಿದರು. ಪಿಎಸ್ಐ ಹಣಮಂತ ಬಂಕಲಗಿ ಮಾತನಾಡಿದರು.
ಈ ವೇಳೆ ಪುರಸಭೆ ಅಧ್ಯಕ್ಷೆ ಜಯಶ್ರೀ ಪೊಲೀಸ್ ಪಾಟೀಲ್, ವಿಶ್ವಾರಾಧ್ಯ ಸತ್ಯಂಪೇಟ, ವಾಸುದೇವ ಪತ್ರಕರ್ತರು, ಶಿಕ್ಷಣ ಸಂಯೋಜಕರು ರವೀಂದ್ರ ಚೌವ್ಹಾಣ್, ಸೂರ್ಯಕಾಂತ್ ಎನ್. ಘಂಟಿ, ಪಿಎಸ್ಐ ದೀನೇಶ ವೇದಿಕೆಯಲ್ಲಿದ್ದರು.
ಅಧ್ಯಕ್ಷತೆಯನ್ನು ವಿದ್ಯಾರ್ಥಿನಿ ಬೃಂದಾ ತಂಬಾಕೆ ವಹಿಸಿದ್ದರು. ನಿರೂಪಣೆಯನ್ನು ಮಧುಶ್ರೀ ಮತ್ತು ವಿಶಾಲ್, ಸ್ವಾಗತ ಭಾಷಣ ವಿಹಾನ್ ಸೇಡಂಕರ್, ಕುಮಾರಿ ಭಾಗ್ಯಶ್ರೀ ನಾಗರೆಡ್ಡಿ, ವಂದನಾರ್ಪಣೆ ನೆರವೇರಿಸಿದರು. ಸಂಸ್ಥೆಯ ಅಧ್ಯಕ್ಷ ರಮೇಶ ಅನಸೂರ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.







