ಯಾದಗಿರಿ | ನಿರಾಶ್ರಿತರಿಗೆ ಆಶ್ರಯ ಒದಗಿಸುವುದು ನಮ್ಮ ಕರ್ತವ್ಯ: ಪೌರಾಯುಕ್ತ ಉಮೇಶ ಚವ್ಹಾಣ

ಯಾದಗಿರಿ: ನಗರದಲ್ಲಿ ವಸತಿ ರಹಿತರಿಗೆ ಇರುವ ಉಚಿತ ಆಶ್ರಯ ಕೇಂದ್ರವು ನಿರಾಶ್ರಿತರಿಗೆ ಬಹಳ ಅನುಕೂಲವಾಗಿದ್ದು, ನಿರಾಶ್ರಿತರಿಗೆ ಆಶ್ರಯ ಒದಗಿಸುವುದು ನಮ್ಮ ಕರ್ತವ್ಯವಾಗಿದೆ ಎಂದು ಪೌರಾಯುಕ್ತರಾದ ಉಮೇಶ ಚವ್ಹಾಣ ಅವರು ತಿಳಿಸಿದ್ದಾರೆ.
ನಗರಸಭೆ, ಜಿಲ್ಲಾ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಹಾಗೂ ಡೇ- ನಲ್ಮಾ ಅಭಿಯಾನದಡಿ ಮತ್ತು ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಗರದ ನಗರಸಭೆಯ ಕಾರ್ಯಾಲಯದಲ್ಲಿ ನಡೆದ ʼನಗರ ವಸತಿ ರಹಿತರ ಆಶ್ರಯ ಕೇಂದ್ರದ ಆಶ್ರಯ ನಿರ್ವಹಣಾ ಸಮಿತಿಯ ಸಭೆʼಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ಆರೋಗ್ಯ ತಪಾಸಣೆ, ಯೋಗ, ಧ್ಯಾನ ಶಿಬಿರ, ಸ್ವಚ್ಚತೆ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸೂಚನೆ ನೀಡಿದ ಅವರು, ವಸತಿ ರಹಿತರ ಆಶ್ರಯ ಕೇಂದ್ರಕ್ಕೆ ಬೇಕಾದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಪ್ರಸ್ತಾವನೆ ಸಲ್ಲಿಸಿ ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ಇರುವ ನಿರಾಶ್ರಿತರಿಗೆ ತೊಂದರೆಯಾದಾಗ ಪೊಲೀಸ್ ಇಲಾಖೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. ತಕ್ಷಣ ಸ್ಪಂದಿಸಿದ ಇಲಾಖೆಯವರು ಯಾವುದೇ ತೊಂದರೆಗಳಿಗೆ ಸ್ಪಂದಿಸಲು ಪೋಲಿಸ್ ಸಹಾಯವಾಣಿ 112 ಯಾವಾಗಲೂ ಸಿದ್ದವಿದೆ ಎಂದರು.
ಕೌಶಲ್ಯಾಭಿವೃದ್ದಿ ಇಲಾಖೆಯ ಅಭಿಯಾನ ವ್ಯವಸ್ಥಾಪಕ ವಿಜಯಕುಮಾರ ಪಾಟೀಲ ಮಾತನಾಡಿ, ನಗರದಲ್ಲಿ ಕಾರ್ಮಿಕರಾಗಿದ್ದು ವಸತಿ ಇಲ್ಲದವರಿಗೆ ತಾತ್ಕಾಲಿಕವಾಗಿ ಆಶ್ರಯ ನೀಡುವ ಉದ್ದೇಶದಿಂದ ಈ ಆಶ್ರಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಲ್ಲಿ ವಾಸ್ತವ್ಯ ಇರುವವರಿಗೆ ಊಟ, ತಿಂಡಿಯ ಅಗತ್ಯವಿಲ್ಲದಿದ್ದರೂ, ಮಾನವೀಯ ದೃಷ್ಟಿಯಿಂದ ಕಾರ್ಯ ನಿರ್ವಹಿಸುತ್ತಿರುವ ಭಾರತಾಂಬೆ ಸಂಸ್ಥೆಯವರು ಒದಗಿಸುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ನಗರಸಭೆಯ ಸಮುದಾಯ ಸಂಘಟನಾಧಿಕಾರಿ ಭೀಮಣ್ಣ ಕೆ.ವೈದ್ಯ, ನಗರ ಪೊಲೀಸ್ ಠಾಣೆಯ ಸಿಬ್ಬಂದಿ ರವಿ ರಾಠೋಡ್, ಕಿರಿಯ ಅಭಿಯಂತರರಾದ ಲೋಕೇಶ್ವರಿ, ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥ ಭೀಮಾಶಂಕರ ದೊಡ್ಮನಿ, ನಗರಸಭೆಯ ಕಿರಿಯ ಆರೋಗ್ಯ ನಿರೀಕ್ಷಕರಾದ ಮಂಜುನಾಥ, ಸಿಆರ್ಪಿಗಳಾದ ಸಾಬಮ್ಮ, ಅವ್ವಮ್ಮ, ಪ್ರೇಮಾ, ಆಶ್ರಯ ಕೇಂದ್ರದ ವ್ಯವಸ್ಥಾಪಕ ಬೀರಲಿಂಗಪ್ಪ ಕಿಲ್ಲನಕೇರಾ, ಕೇರ್ ಟೇಕರ್ ಗಳಾದ ದೇವಮ್ಮ, ಸಿದ್ರಾಮ್, ವಸತಿ ರಹಿತರಾದ ರಾಘವೇಂದ್ರ, ಪಟೇಲಸಾಬ್, ಈರಪ್ಪ, ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







