ಯಾದಗಿರಿ | ಮೂಢನಂಬಿಕೆಗಳಿಗೆ ವಿಜ್ಞಾನವೇ ಉತ್ತರ : ಸಚಿವ ದರ್ಶನಾಪುರ

ಯಾದಗಿರಿ: ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತ ವಿಶ್ವಮಟ್ಟದಲ್ಲಿ ಮುನ್ನಡೆ ಸಾಧಿಸಿದ್ದರೂ ಸಮಾಜದಲ್ಲಿ ಇನ್ನೂ ಮೂಢನಂಬಿಕೆಗಳು ಆಳವಾಗಿ ಬೇರೂರಿರುವುದು ಆತಂಕಕಾರಿ ಸಂಗತಿಯಾಗಿದೆ ಎಂದು ಸಣ್ಣ ಕೈಗಾರಿಕೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದ್ದಾರೆ.
ಯಾದಗಿರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ನಡೆಯುತ್ತಿರುವ ಮೂರು ದಿನಗಳ ರಾಜ್ಯ ಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನದ ಸಮಾರಂಭವನ್ನು ಉದ್ಘಾಟಿಸಿದ ಬಳಿಕ ಸಚಿವರು ಮಾತನಾಡಿದರು.
ಇಂದು ಗುಡಿ–ಗುಂಡಾರಗಳ ಹೆಸರಿನಲ್ಲಿ ಜನರನ್ನು ಭಯಪಡಿಸಿ, ಬಡವರಿಂದ ಅನಗತ್ಯವಾಗಿ ಹಣ ಖರ್ಚು ಮಾಡಿಸುವ ಪ್ರವೃತ್ತಿ ಇಂದಿಗೂ ಮುಂದುವರಿದಿದೆ. ಯಾವುದೇ ದೇವರು ಮನುಷ್ಯನಿಗೆ ಕೆಡುಕನ್ನು ಮಾಡುವುದಿಲ್ಲ. ಮನುಷ್ಯನೇ ಮನುಷ್ಯನಿಗೆ ಕೆಡುಕನ್ನು ಮಾಡುತ್ತಾನೆ, ವೇಗವಾಗಿ ಎಲ್ಲವನ್ನೂ ಮೆಟ್ಟಿ ನಿಲ್ಲುವ ಶಕ್ತಿ ವಿಜ್ಞಾನ ಮತ್ತು ತಂತ್ರಜ್ಞಾನಕ್ಕಿದೆ. ಜನರ ಮನಸನ್ನು ಬೇರೆಕಡೆಗೆ ಸೆಳೆಯುವ ಶಕ್ತಿಗಳನ್ನು ವೈಜ್ಞಾನಿಕವಾಗಿ ಮಟ್ಟಹಾಕಬೇಕಾಗಿದೆ ಎಂದು ತಿಳಿಸಿದರು.
ಇಂದಿನ ದಿನಗಳಲ್ಲಿ ವೈಜ್ಞಾನಿಕ ಸಮ್ಮೇಳನಗಳನ್ನು ಆಯೋಜಿಸುವುದು ಸುಲಭದ ಕೆಲಸವಲ್ಲ. ಸರ್ಕಾರದ ನೆರವಿಲ್ಲದೆ ಇಂತಹ ಅದ್ದೂರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿರುವುದು ಶ್ಲಾಘನೀಯ, ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಸಮಾರಂಭದ ಸಾನಿಧ್ಯ ವಹಿಸಿದ್ದ ಗುರುಮಠಕಲ್ ಖಾಸಮಠದ ಶಾಂತವೀರ ಗುರುಮುರುಘಾ ರಾಜೇಂದ್ರ ಮಹಾಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಮೂಢನಂಬಿಕೆಗಳು ಮತ್ತು ಅಂಧಶ್ರದ್ಧೆಗಳು ನಿನ್ನೆ ಮೊನ್ನೆ ಹುಟ್ಟಿಕೊಂಡಿದ್ದಲ್ಲ, ಸಾವಿರಾರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ದುರುಪಾಯಗಳಾಗಿವೆ ಎಂದು ಹೇಳಿದರು.
ಅಂಧ ನಂಬಿಕೆಗಳನ್ನು ಒಂದೇ ಬಾರಿ ಸಂಪೂರ್ಣವಾಗಿ ಅಳಿಸಿ ಹಾಕುವುದು ಕಷ್ಟವಾದರೂ, ವೈಜ್ಞಾನಿಕ ಚಿಂತನೆ ಮತ್ತು ಜಾಗೃತಿಯ ಮೂಲಕ ಸಮಾಜಕ್ಕೆ ಬೆಳಕು ಚೆಲ್ಲುವ ಕೆಲಸವನ್ನು ವೈಜ್ಞಾನಿಕ ಸಮ್ಮೇಳನಗಳು ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ಯಾದಗಿರಿಯಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನವು ಅರ್ಥಪೂರ್ಣವಾಗಿದೆ. ಮೂಢನಂಬಿಕೆ ಮುಕ್ತ ಸಮಾಜ ನಿರ್ಮಾಣಕ್ಕೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ರಾಜ್ಯದಲ್ಲಿ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ನಡೆಸುತ್ತಿರುವ ವೈಜ್ಞಾನಿಕ ಸಮ್ಮೇಳನಗಳಿಗೆ ಬಜೆಟ್ ನಲ್ಲಿ ಅಗತ್ಯ ಅನುದಾನ ದೊರಕಿಸಲು ಮುಖ್ಯಮಂತ್ರಿಯವರಲ್ಲಿ ಪ್ರಯತ್ನಿಸಲಾಗುವುದು ಎಂದು ಹೇಳಿದರು.
ಖ್ಯಾತ ವಿಚಾರವಾದಿ ಡಾ.ಹುಲಿಕಲ್ ನಟರಾಜ್ ಅವರ ಆರು ಸಂಪುಟಗಳನ್ನು ಬಿಡುಗಡೆ ಮಾಡಿದ ಬಳಿಕ ಮಾತನಾಡಿದ ಸಚಿವರು, ರಾಜ್ಯದ ವಿವಿಧೆಡೆ ಈಗಾಗಲೇ 4 ವೈಜ್ಞಾನಿಕ ಸಮ್ಮೇಳನಗಳು ಯಶಸ್ವಿಯಾಗಿ ನಡೆದಿದ್ದು, ಈಗ ಯಾದಗಿರಿಯ ಸಮ್ಮೇಳನವೂ ನಮ್ಮ ನಡೆ-ವಿಜ್ಞಾನ ಕಡೆ ಧ್ಯೇಯವಾಕ್ಯದಡಿ ನಡೆಯುತ್ತಿದೆ ಎಂದರು.
12ನೇ ಶತಮಾತನದ ಬಸವಣ್ಣವರ ಹೋರಾಟ, ಬುದ್ಧನ ತತ್ತ್ವಗಳು, ಡಾ. ಬಿ.ಆರ್.ಅಂಬೇಡ್ಕರ್ ಅವರ ಸಂವಿಧಾನಾತ್ಮಕ ಹೋರಾಟ ಒಂದೇ ದಾರಿಯ ಹೋರಾಟಗಳಾಗಿವೆ. ಇಂದು ವಿಚಾರವಾದಿ ಹುಲಿಕಲ್ ನಟರಾಜ್ ಅವರ ಮೌಡ್ಯದ ವಿರುದ್ಧದ ಹೋರಾಟ ಅದೇ ದಾರಿಯಲ್ಲಿ ಸಾಗುತ್ತಿದೆ. ಹಾಲು ಸುರಿಸುವುದು, ದೀಪ ಹಚ್ಚುವುದು, ರಕ್ತ ಹರಿಸುವಂತೆ ತೋರಿಸುವ ಮೋಸಗಳನ್ನು ವೈಜ್ಞಾನಿಕ ದೃಷ್ಟಿಯಿಂದ ಪ್ರಶ್ನಿಸಬೇಕು ಎಂದು ಹೇಳಿದರು.
ಬೆಳಗಾವಿಯಲ್ಲಿ ಮುಂದಿನ ವೈಜ್ಞಾನಿಕ ಸಮ್ಮೇಳನಕ್ಕೆ ಮನವಿ :
ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನಿಂದ ಕಳೆದ ನಾಲ್ಕು ವರ್ಷಗಳಲ್ಲಿ ನಡೆದಂತಹ ಸಮ್ಮೇಳನಗಳು ಅತ್ಯಂತ ಯಶಸ್ವಿಯಾಗಿವೆ. ಲಿಂಗಸಗೂರಿನಲ್ಲಿ ನಡೆದಂತಹ ಸಮ್ಮೇಳನದ ಸರ್ವಾಧ್ಯಕ್ಷತೆಯನ್ನು ವಹಿಸಿದ್ದು, ಮುಂದಿನ ವೈಜ್ಞಾನಿಕ ಸಮ್ಮೇಳನವನ್ನು ಬೆಳಗಾವಿಯಲ್ಲಿ ಆಯೋಜಿಸಬೇಕೆನ್ನುವುದು ನಮ್ಮೆಲ್ಲರ ಆಶಯವಾಗಿದೆ. ಅದಕ್ಕೆ ಪರಿಷತ್ತಿನ ಸಂಸ್ಥಾಪಕರಾದ ಡಾ.ಹುಲಿಕಲ್ ನಟರಾಜ್ರವರು ಒಪ್ಪಬೇಕು. ಸಮ್ಮೇಳನಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಸಚಿವರು ಇದೇ ವೇಳೆ ಹೇಳಿದರು.
ಸಮ್ಮೇಳನಾಧ್ಯಕ್ಷ, ಶರಣ ಸಾಹಿತಿ ವಿಶ್ವಾರಾಧ್ಯ ಸತ್ಯಂಪೇಟೆ ಅವರು ಮಾತನಾಡಿ, ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಮೌಢ್ಯತೆ, ಅಂಧನಂಬಿಕೆ, ಜಾತಿ, ತಾರತಮ್ಯಗಳ ಅಂಧಕಾರ ಇನ್ನೂ ಆವರಿಸಿಕೊಂಡಿದ್ದು, ಇವೆಲ್ಲವೂ ದೂರವಾಗುವವರೆಗೂ ಬೆಳವಣಿಗೆ ಅಸಾಧ್ಯ ಎಂದು ಹೇಳಿದರು.
ವಿಜ್ಞಾನ ಸಾಕಷ್ಟು ಮುಂದುವರೆದಿದೆ. ಆದರೂ, ಜನರು ಮಾತ್ರ ಇನ್ನೂ ಕಂದಚಾರಗಳಿಂದ ಮುಕ್ತಗೊಂಡಿಲ್ಲ. 21ನೇ ಶತಮಾನದಲ್ಲಿ ಇಸ್ರೋ, ಡಿಆರ್ಡಿಒ ಮುಂತಾದ ವೈಜ್ಞಾನಿಕ ಸಾಧನೆಗಳು ಮನೆ ಬಾಗಿಲುಗಳಿಗೆ ಬಂದಿದ್ದರೂ, ನಮ್ಮ ಮನಸ್ಸು ಮಾತ್ರ ಮೌಢ್ಯತೆಯಲ್ಲಿ ಕೊಳೆಯುತ್ತಿದೆ. ಯಾರಾದರೂ ಆಶೀರ್ವಾದದಿಂದ ಅಥವಾ ಪವಾಡದಿಂದ ಸಮಸ್ಯೆಗಳು ಪರಿಹಾರ ಆಗುತ್ತವೇ ಎಂದರೆ ಅದು ಬರೀ ಭ್ರಮೆ. ಇದರಿಂದ ಜನರು ಹೊರಬರಬೇಕು ಎಂದು ಹೇಳಿದರು.
ಯಾವುದೇ ನಂಬಿಕೆಗಳು, ಪವಾಡಗಳು ನಮ್ಮನ್ನೆಂದು ಉದ್ದಾರ ಮಾಡುವುದಿಲ್ಲ. ನಮ್ಮ ಕಣ್ಣಿನೊಳಗಿನ ಕಟ್ಟಿಗೆಯನ್ನು ನಾವೇ ಮುರಿಯಬೇಕು, ಕಾಲಿನೊಳಗಿನ ಮುಳ್ಳನ್ನು ನಾವೇ ತೆಗೆಯಬೇಕು. ಬಾಯಾರಿದರೆ ನೀರನ್ನು ನಾವೇ ಕುಡಿಯಬೇಕು. ನಮ್ಮ ಬದುಕಿನ ಹೊಣೆಗಾರಿಕೆಯನ್ನು ಬೇರೆ ಯಾರ ಮೇಲೂ ಹಾಕಬಾರದು. ವೈಚಾರಿಕತೆ ಬೆಳೆಯುತ್ತಿದೆ. ವಿಜ್ಞಾನ ಮುಂದುವರೆಯುತ್ತಿದೆ. ಜನರು ಆ ದಿಕ್ಕಿನಲ್ಲಿ ಸಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ವಿಜ್ಞಾನಗಿರಿ ಸ್ಮರಣ ಸಂಚಿಕೆಯನ್ನು ಖ್ಯಾತ ವಿಜ್ಞಾನಿ, ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಮಹಾಪೋಷಕರಾದ ಡಾ.ಎಸ. ಕಿರಣ್ ಕುಮಾರ್ ಬಿಡುಗಡೆ ಮಾಡಿದರು. 2026ರ ಕ್ಯಾಲೆಂಡರ್ನ್ನು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, 2026ರ ದಿನಚರಿಯನ್ನು ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ ಬಿಡುಗಡೆ ಮಾಡಿದರು.
ಇದಕ್ಕೂ ಮುನ್ನ ವಿಜ್ಞಾನ ವಸ್ತು ಪ್ರದರ್ಶನದ ಉದ್ಘಾಟನೆಯನ್ನು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ನೆರವೇರಿಸಿದರು. ಯಾದಗಿರಿ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಮತ್ತಿತರರು ಉಪಸ್ಥಿತರಿದ್ದರು.
ಜೀವಮಾನ ಸಾಧನಾ ಪ್ರಶಸ್ತಿ :
ಸಮ್ಮೇಳನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕಕರಿಗೆ ಜೀವಮಾನ ಸಾಧನಾ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಪಾಂಡವಪುರದ ಪುಸ್ತಕ ಮನೆಯ ಅಂಕೇಗೌಡ, ರಾಜ್ಯ ಮತ್ತು ರಾಷ್ಟ್ರ, ಪ್ರಶಸ್ತಿ ಪುರಸ್ಕೃತ ಡಾ.ಕೆ.ಎಸ್.ರಾಜಣ್ಣ, ರಾಷ್ಟ್ರ ಪ್ರಶಸ್ತಿ ವಿಜೇತ ಡಾ.ನಂದೀಶ್ ಮತ್ತು ಕೆಎಸ್ ಎಸ್ ಐಡಿಸಿ ಮಾಜಿ ನಿರ್ದೇಶಕ ಎಸ್.ಸಿ.ಪಾಟೀಲ್ ಅವರಿಗೆ ಜೀವಮಾನ ಸಾಧನಾ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.
ವಿಶಿಷ್ಟ ಸೇವಾ ಪುರಸ್ಕಾರ :
ಇದೇ ವೇಳೆ, ವಿವಿಧ ಸಾಧಕರಿಗೆ ವಿಶಿಷ್ಟ ಸೇವಾ ಪ್ರಶಸ್ತಿ ಪುರಸ್ಕಾರ ಮಾಡಲಾಯಿತು. ಸಂಘಟನೆ ಕ್ಷೇತ್ರದಲ್ಲಿ ದಾನಿ ಬಾಬುರಾವ್, ಸಿ.ಶಿವಲಿಂಗಯ್ಯ, ಪುಷ್ಪಲತಾ ಪುಟ್ಟಸ್ವಾಮಿ, ಮಹಾದೇವ ಎನ್.ಮೋಕ್ಷ ಗುಂಡ, ಶಾಂತಗೌಡ, ಸಾಹಿತ್ಯ ವಿ.ಟಿ.ಸ್ವಾಮಿ, ವೈಜ್ಞಾನಿಕತೆ ಎ.ಎಸ್.ಗೋಪಾಲಕೃಷ್ಣ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಆರ್.ಎಚ್.ಎಂ.ಚನ್ನಬಸವಸ್ವಾಮಿ ಅವರಿಗೆ ವಿಶಿಷ್ಟ ಸೇವಾ ಪ್ರಶಸ್ತಿ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷರಾದ, ಖ್ಯಾತ ವಿಚಾರವಾದಿ ಡಾ.ಹುಲಿಕಲ್ ನಟರಾಜ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ವೈದ್ಯ ಡಾ.ಆಂಜನಪ್ಪ ಮಾತನಾಡಿದರು.
ಪ್ರತಿಷ್ಠಿತ ಡಿಡಿಯು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಭೀಮಣ್ಣ ಮೇಟಿ ಸಂವಿಧಾನ ಪೀಠಿಕೆ ಓದುವ ಮೂಲಕ ಪ್ರತಿಜ್ಞಾವಿಧಿ ಬೋಧಿಸಿದರು.
ಕಾರ್ಯಕ್ರಮದಲ್ಲಿ ನಿಷ್ಕಲಮಠದ ನಿಜಗುಣಾನಂದ ಸ್ವಾಮೀಜಿ, ಗುರುಮಠಕಲ್ ನ ಶಾಂತವೀರಗುರು ಮುರುಘಾರಾಜೇಂದ್ರ ಸ್ವಾಮೀಜಿ, ಚಿಗರಹಳ್ಳಿಯ ಮಠದ ಸಿದ್ದಬಸವ ಕಬೀರಾನಂದ ಸ್ವಾಮೀಜಿಯವರು ಸಾನಿಧ್ಯ ವಹಿಸಿದ್ದರು.
ಮಾಜಿ ಸಚಿವ ಬಾಬುರಾವ್ ಚಿಂಚನಸೂರ್, ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲದಪುರ, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ್ ಕಾಡ್ಲೂರ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ, ಹಿರಿಯ ಕಾಂಗ್ರೆಸ್ ಮುಖಂಡ ಎ.ಸಿ. ಕಾಡ್ಲೂರು, ಬಿಜೆಪಿ ಮುಖಂಡ ಮಹೇಶರೆಡ್ಡಿ ಮುದ್ನಾಳ್, ಮುಖಂಡ ಹನುಮೇಗೌಡ ಬೀರನಕಲ್ಲು, ಜಿಲ್ಲಾ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೊಸಂಬಿ, ಮಾಜಿ ಅಧ್ಯಕ್ಷ ಬಸವರಾಜಪ್ಪ ಜೈನ್, ಮುಖಂಡರಾದ ಸುದರ್ಶನ ನಾಯಕ, ಡಾ.ಶಫಿ ತುನ್ನೂರು, ಹನುಮೇಗೌಡ ಮರಕಲ್ ಮಾನವ ಬಂಧುತ್ವ ವೇದಿಕೆಯ ಸಂತೋಷ್, ಸುನೀಲ್ ಮನ್ಪಾಡೆ, ನಿಂಗಪ್ಪ, ಯಾದಗಿರಿಯ ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ, ಡಿಡಿಪಿಐ ಚನ್ನಬಸಪ್ಪ ಮುಧೋಳ್, ಪರಿಷತ್ತಿನ ರಾಜ್ಯ ಹಾಗೂ ಜಿಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಸರ್ಕಾರ ಅನೇಕ ಕಾರ್ಯಕ್ರಮಗಳಿಗೆ ಬಜೆಟ್ ನಲ್ಲಿ ಹಣ ಮೀಸಲಿಡುತ್ತದೆ. ಮೌಢ್ಯತೆಯನ್ನು ಜನರಿಂದ ದೂರಮಾಡಲು ವೈಜ್ಞಾನಿಕ ಸಮ್ಮೇಳನಗಳನ್ನು ನಡೆಸಲಾಗುತ್ತಿದೆ. ಹಾಗಾಗಿ, ಸರ್ಕಾರ, ಈ ವರ್ಷದ ಬಜೆಟ್ನಲ್ಲಿ ಒಂದಿಷ್ಟು ಅನುದಾನವನ್ನು ಮೀಸಲಿಡಬೇಕು. ಇದಕ್ಕೆ ಎಲ್ಲರ ಸಹಕಾರ ಅಗತ್ಯ.
-ಡಾ.ಹುಲಿಕಲ್ ನಟರಾಜ್, ಸಂಸ್ಥಾಪಕ ಅಧ್ಯಕ್ಷರು ಹಾಗೂ ಖ್ಯಾತ ವಿಚಾರವಾದಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು.
ರಾಜ್ಯದ ಎಲ್ಲ ಮಕ್ಕಳಿಗೆ ವಿಜ್ಞಾನದ ವಿಚಾರಗಳನ್ನು ತಲುಪಿಸುವುದು ಅವಶ್ಯವಿದೆ. ಭಾರತ ಜಗತ್ತಿನ ಮೊದಲ ಸ್ಥಾನದಲ್ಲಿ ಬರಬೇಕಾದರೆ ವಿಜ್ಞಾನದ ಬೆಳೆವಣಿಗೆ ಅಗತ್ಯವಾಗಿದೆ. ವೈಜ್ಞಾನಿಕ ಚಿಂತನೆಗಳನ್ನು ಮಕ್ಕಳಿಂದ ಹಿಡಿದು ದೊಡ್ಡವರಿಗೆ ತಿಳಿಸುವಂತಹ ಕಾರ್ಯಕ್ರಮಗಳಿಗೆ ಸರ್ಕಾರ 5 ಕೋಟಿ ರೂ. ಅನುದಾನ ಮೀಸಲಿಡಬೇಕು.
- ಡಾ.ಎ.ಎಸ್.ಕಿರಣ್ ಕುಮಾರ್, ಖ್ಯಾತ ವಿಜ್ಞಾನಿ ಹಾಗೂ ಪರಿಷತ್ತಿನ ಮಹಾ ಪೋಷಕರು
ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು ರಾಜ್ಯದ ಮೂಲೆ ಮೂಲೆಗಳಲ್ಲಿ ವಿದ್ಯಾರ್ಥಿಗಳಿಗೆ ವಿಜ್ಞಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿಕೊಂಡು ಬರುತ್ತಿದೆ. ಕಳೆದ ಐದು ವರ್ಷಗಳಿಂದ ವೈಜ್ಞಾನಿಕ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದೆ. ಯಾದಗಿರಿ ಸಮ್ಮೇಳನವೂ ಎಲ್ಲರ ಸಹಕಾರದಿಂದ ಸಾಕಾರಗೊಂಡಿದೆ.
-ಗುಂಡಪ್ಪ ಕಲಬುರಗಿ, ಜಿಲ್ಲಾಧ್ಯಕ್ಷರು ಕರಾವೈಸಂಪ







