ಯಾದಗಿರಿ | ವಿದ್ಯಾರ್ಥಿಗಳು ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಿ : ಮುದ್ನಾಳ್

ಯಾದಗಿರಿ: ಹತ್ತನೇ ತರಗತಿ ವಿದ್ಯಾರ್ಥಿಗಳ ಜೀವನದಲ್ಲಿ ಮಹತ್ವದ ತಿರುವು ತರುವ ಹಂತವಾಗಿದ್ದು, ಅವರ ಭವಿಷ್ಯ ರೂಪಿಸುವ ಪ್ರಮುಖ ಘಟ್ಟವಾಗಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಮಹೇಶ್ ರೆಡ್ಡಿ ಗೌಡ ಮುದ್ನಾಳ್ ಹೇಳಿದರು.
ನಗರದ ಎಂಆರ್ಎಂ ಪ್ರೌಢ ಶಾಲೆಯ ಆವರಣದಲ್ಲಿ ಸ್ಪರ್ಶ ಚ್ಯಾರಿಟೇಬಲ್ ಟ್ರಸ್ಟ್ ವತಿಯಿಂದ ಎಸೆಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಾಮಗ್ರಿ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಏಕಾಗ್ರತೆಯಿಂದ ವಿದ್ಯಾಭ್ಯಾಸ ಮಾಡಬೇಕು. ಪರೀಕ್ಷೆಯನ್ನು ಸವಾಲಾಗಿ ಭಯಪಡುವ ಬದಲು ಶಾಂತ ಮನೋಭಾವದಿಂದ ಸಿದ್ಧತೆ ನಡೆಸಿದರೆ ಯಶಸ್ಸು ಸಾಧಿಸಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಈ ವೇಳೆ ಮಾತನಾಡಿದ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಚೆನ್ನಬಸಪ್ಪ ಮುದೋಳ್, ಹತ್ತನೇ ತರಗತಿ ವಿದ್ಯಾರ್ಥಿಗಳು ಕನಿಷ್ಠ 20 ಅಂಕಗಳನ್ನು ಪಡೆದರೂ ಉತ್ತೀರ್ಣರಾಗಬಹುದು ಎಂದು ತಿಳಿಸಿ ಪರೀಕ್ಷೆಯ ಭಯವನ್ನು ದೂರ ಮಾಡುವಂತೆ ವಿದ್ಯಾರ್ಥಿಗಳಿಗೆ ಧೈರ್ಯ ತುಂಬಿದರು.
ಪರೀಕ್ಷಾ ಸಿದ್ಧತೆಗೆ ರಾಜ್ಯ ಮಟ್ಟದ ಮಾದರಿ ಪ್ರಶ್ನೆಪತ್ರಿಕೆಗಳನ್ನು ನೀಡಲಾಗಿದ್ದು, ಮೂರು ಹಂತದ ಮಾದರಿ ಪರೀಕ್ಷೆಗಳು ಈಗಾಗಲೇ ನಡೆದಿವೆ. ಶೇಕಡಾ 60ರಷ್ಟು ಶಾಲೆಗಳಲ್ಲಿ ರಾತ್ರಿ ವಿದ್ಯಾಭ್ಯಾಸ ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ “ತೆರೆದ ಗ್ರಂಥಾಲಯ” ಯೋಜನೆಯಡಿ ವಿದ್ಯಾರ್ಥಿಗಳಿಗೆ ಓದಲು ಅನುಕೂಲವಾಗುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಂಆರ್ಎಂ ಪ್ರೌಢ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಪ್ಯಾಡ್, ಪೆನ್, ಕಂಪಾಸ್ ಬಾಕ್ಸ್ ಸೇರಿದಂತೆ ವಿವಿಧ ಪರೀಕ್ಷಾ ಸಾಮಗ್ರಿಗಳನ್ನು ಸ್ಪರ್ಶ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಪ್ಪ ಎಸ್.ಹೊಟ್ಟಿ, ಉದ್ಯಮಿಗಳಾದ ಪ್ರಶಾಂತ ಆಯರಕರ್, ಮುಖ್ಯ ಗುರುಗಳಾದ ಶರಣಗೌಡ ಬಿಮನಹಳ್ಳಿ, ನೂರಂದಪ್ಪ ಲೇವಡಿ, ನಾಗೇಂದ್ರ ಜಾಜಿ, ಸಾಬಣ್ಣ, ಚನ್ನವೀರಯ್ಯ ಸ್ವಾಮಿ, ಮಹೇಶ ಮಲ್ಲು ಹಳಕಟ್ಟಿ ಇದ್ದರು.







