ಯಾದಗಿರಿ | ಸಾವಿರಾರು ಕಾರ್ಯಕರ್ತರು ಕಾಂಗ್ರೆಸ್ ಸೇರಲಿದ್ದಾರೆ : ಶರಣಪ್ಪ ಮಾನೇಗಾರ

ಯಾದಗಿರಿ : ನಾವು ಕಾರ್ಯಕರ್ತರ ಸಂಕಷ್ಟಗಳಿಗೆ ಸದಾ ಸ್ಪಂದಿಸುವ ಮೂಲಕ ಗಟ್ಟಿಯಾಗಿ ಪಕ್ಷವನ್ನು ಕಟ್ಟುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ನಾನಾ ಭಾಗಗಳಿಂದ 20 ಸಾವಿರಕ್ಕೂ ಅನ್ಯ ಪಕ್ಷದ ಕಾರ್ಯಕರ್ತರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳಲಿದ್ದಾರೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಯರಗೋಳ ಅವರು ಹೇಳಿದ್ದಾರೆ.
ಗುರುಮಿಠಕಲ್ ಮತಕ್ಷೇತ್ರದ ಅಲ್ಲಿಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗುರುಮಿಠಕಲ್ ಕ್ಷೇತ್ರದಲ್ಲಿ ಶಾಸಕರು ನಮ್ಮ ಕೆಲ ಕಾರ್ಯಕರ್ತರಿಗೆ ಆಮಿಷಗಳನ್ನು ಒಡ್ಡುವ ಮೂಲಕ ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಕೈ ನಾಯಕರೆಲ್ಲರೂ ಒಗ್ಗಟ್ಟಾಗಿ ಕಾಂಗ್ರೆಸ್ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸುವ ಮೂಲಕ ಜಾಗೃತಿ ಮೂಡಿಸಿ ಜೆಡಿಎಸ್-ಬಿಜೆಪಿ ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೂಲಕ ತಿರುಗೇಟು ನೀಡುತ್ತಿದ್ದೇವೆ. ನೀವು ಯಾವುದೇ ಕಾರಣಕ್ಕೂ ಬೆದರಿಕೆಗಳಿಗೆ ಹೆದರದೇ ಪಕ್ಷ ಸಂಘಟನೆಗೆ ನಿಮ್ಮ ಕೊಡುಗೆ ನೀಡಿ ಎಂದು ಮನವಿ ಮಾಡಿದರು.
ಜೆಡಿಎಸ್ ಶಾಸಕರು ಕೇವಲ ಕಾಮಗಾರಿಗಳಲ್ಲಿ ಹೆಚ್ಚಿನ ಪರ್ಸಂಟೇಜ್ ಲಂಚ ಪಡೆಯುವಲ್ಲಿ ನಿರತರಾಗಿದ್ದಾರೆ. ಹಣ ನೀಡದ ಕೆಲ ಅಧಿಕಾರಿಗಳನ್ನು ಬೆದರಿಸುತ್ತಿದ್ದಾರೆ ಎಂದು ಟೀಕಿಸಿದರು.
ನಾನಾ ಕಾರಣಗಳಿಂದ ಎರಡು ವಿಧಾನಸಭಾ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿ ಪರಾಜಯಗೊಂಡರು. ಆದರೂ ಕ್ಷೇತ್ರದಲ್ಲಿರುವ ಎಲ್ಲಾ ನಾಯಕರು, ಕಾರ್ಯಕರ್ತರು ಒಗ್ಗಟ್ಟಾಗಿ ಕೂಡಿ ಮುಂದಿನ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವುದೇ ನಮ್ಮ ಮುಂದಿನ ಗುರಿ ಎಂದು ಜಿಲ್ಲಾ ಅಧ್ಯಕ್ಷ ಬಸರೆಡ್ಡಿ ಎಂ ಪಾಟೀಲ ಅನಪುರ ಅವರು ಹೇಳಿದರು.
ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಮಾತನಾಡಿ, ನಾನು ಹುಟ್ಟಿರುವುದೇ ಜನರ ಸೇವೆಗಾಗಿ. 10 ವರ್ಷಗಳ ಕಾಲ ಅಭಿವೃದ್ಧಿ ಕಾರ್ಯ ಮಾಡಿದರೂ, ವಿರೋಧ ಪಕ್ಷದ ನಾಯಕರ ಸುಳ್ಳು ಆರೋಪಗಳನ್ನು ನಂಬಿ, ನಾನಾ ಕಾರಣಗಳಿಂದ ನನ್ನನ್ನು ಸೋಲಿಸಿದರು. ನಾನು ಎಂದೂ ಎದೆಗುಂದುವುದಿಲ್ಲ. ಕಾರ್ಯಕರ್ತರ ಹಾಗೂ ಮತದಾರರ ಸಮಸ್ಯೆಗಳಿಗೆ ಸದಾ ದ್ವನಿಯಾಗಿ ಸ್ಪಂದಿಸುವೆ ಎಂದು ಹೇಳಿದರು.
ರಾಜಗೋಪಾಲರೆಡ್ಡಿ ಮುದಿರಾಜ್, ಸಾಯಿಬಣ್ಣ ಬೋರಬಂಡ ಹಾಗೂ ನ್ಯಾಯವಾದಿ ಚಂದ್ರಶೇಖರ ಅಲ್ಲಿಪೂರ ಮಾತನಾಡಿದರು.
ಇದೇ ಸಂದರ್ಭದಲ್ಲಿ 30 ಕ್ಕೂ ಹೆಚ್ಚು ಜೆಡಿಎಸ್-ಬಿಜೆಪಿ ಪಕ್ಷಗಳ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆಗೊಂಡರು.
ವೇದಿಕೆ ಮೇಲೆ ಕೆಪಿಸಿಸಿ ಸದಸ್ಯ ಚಂದ್ರಶೇಖರ ವಾರದ, ಜಿಲ್ಲಾ ಪಂಚ ಗ್ಯಾರಂಟಿಗಳ ಯೋಜನೆ ಅಧ್ಯಕ್ಷ ಶರಣಿಕ್ ಕುಮಾರ ದೋಕಾ, ಬಸವರಾಜಪ್ಪ ಬಾಗ್ಲಿ, ಆಶಪ್ಪ ಗಾಜರಕೋಟ್, ಅನಿಲಕುಮರ ಹೆಡಗಿಮದ್ರಿ, ರಾಜುಗೌಡ ಅರಕೇರಾ ಬಿ., ಬಾಷು ರಾಠೋಡ, ಸುಭಾಶ್ ಗುತ್ತೇದಾರ, ಚನ್ನಬಸ್ಸಪ್ಪ ಪೂಜಾರಿ, ಬಸವರಾಜ ಬಾಚವಾರ, ಪರಶುರಾಮ್ ಚವ್ಹಾಣ, ಹಣಮಂತ ಖಾನಳ್ಳಿ, ವಿಜಯ ಕಂದಳ್ಳಿ, ಸುರೇಶ ಅಲ್ಲಿಪೂರ, ಹಣಮಂತ ಅಚ್ಚೋಲಾ, ಆಂಜನೇಯ ರಾಂಪೂರ, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಕೃಷ್ಣಾ ಚಪೇಟ್ಲಾ ಸ್ವಾಗತಿಸಿದರು.






