ಯಾದಗಿರಿ | ನಾಗರಬಂಡ ಗ್ರಾಮದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ

ಯಾದಗಿರಿ : ಸಮಾಜದ ಒಳತಿಗಾಗಿ ಶ್ರಮಿಸಿದ ಮಹಾತ್ಮರು ಯಾವುದೇ ಒಂದು ಜಾತಿಗೆ ಸೀಮಿತವಲ್ಲ. ಬದಲಿಗೆ ಅವರು ಎಲ್ಲಾ ಜನಾಂಗಕ್ಕೂ ಆದರ್ಶವಾಗಿದ್ದಾರೆ ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಅಭಿಪ್ರಾಯ ಪಟ್ಟರು.
ತಾಲೂಕಿನ ನಾಗರಬಂಡ ಗ್ರಾಮದಲ್ಲಿ ಮಹರ್ಷಿ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಮಹಾತ್ಮರ ಪುತ್ಥಳಿಗಳ ಪ್ರತಿಷ್ಠಾಪನೆ ಎಲ್ಲೆಡೆ ನಡೆಯುತ್ತಿದ್ದು, ಅದರಂತೆ ಅವರ ತತ್ವಾದರ್ಶಗಳನ್ನು ಪಾಲನೆ ಮಾಡುವ ಅಗತ್ಯವಿದೆ. ದೇವರ ಹೆಸರಲ್ಲಿ ದುಂದುವೆಚ್ಚ ಮಾಡಿ ಸಾಲಗಾರರಾಗದೆ ಮಕ್ಕಳಿಗೆ ಶಿಕ್ಷಣ ಕೊಡುವತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಹೊಟ್ಟೆಪಾಡಿಗಾಗಿ ಬೆಂಗಳೂರು, ಹೈದರಾಬಾದ್, ಮುಂಬಯಿಯಂತಹ ಮಹಾನಗರಗಳಿಗೆ ಹೋಗಿ ದುಡಿಯುವ ಶ್ರಮಿಕರು ಸಹ ಲಕ್ಷಾಂತರ ರೂಪಾಯಿಗಳನ್ನು ದೇವರ ಹೆಸರಲ್ಲಿ ಖರ್ಚು ಮಾಡುತ್ತಿರುವುದು ಅತ್ಯಂತ ಬೇಸರದ ಸಂಗತಿ. ದೇವರ ಆರಾಧನೆ ಮಾಡಿ. ಆದರೆ, ಸಾಲ ಶೂಲ ಮಾಡಿಕೊಂಡು ಕುಟುಂಬವನ್ನು ಆರ್ಥಿಕವಾಗಿ ಹಾಳು ಮಾಡಿಕೊಳ್ಳದೆ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಬಳಸಿಕೊಳ್ಳಬೇಕು ಎಂದು ತಿಳಿ ಹೇಳಿದರು.
ಯುವಕರು ಜೀವನ ರೂಪಿಸಿಕೊಳ್ಳಬೇಕಾದ ವಯಸ್ಸಲ್ಲಿ ದುಶ್ಚಟಗಳಿಗೆ ಒಳಗಾಗಿ ಜೀವನ ಹಾಳು ಮಾಡಿಕೊಳ್ಳದೆ ಭವಿಷ್ಯ ರೂಪಿಸಿಕೊಳ್ಳುವತ್ತ ಗಮನ ಹರಿಸಬೇಕು ಎಂದು ಹೇಳಿದರು.
ಪತ್ರಕರ್ತ ಎಸ್.ಎಸ್ ನಾಯಕ ಅವರು ಮಾತನಾಡಿ, ದೇವರ ಹೆಸರಲ್ಲಿ ಪ್ರಾಣಿ ಬಲಿ ಸಂಸ್ಕೃತಿಯನ್ನು ಬಿಟ್ಟು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುವಲ್ಲಿ ಗಮನಹರಿಸಬೇಕು. ಇದಲ್ಲದೆ ನಮ್ಮ ಸಮಾಜ ಬಂಧುಗಳು ಕುಡಿತಕ್ಕೆ ದಾಸರಾಗದೇ ಸಾಂಸಾರಿಕ ಸುಧಾರಣೆಯತ್ತ ಸಾಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೊಲ್ಲಪಲ್ಲಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ವರದಾನಂದೇಶ್ವರ ಸ್ವಾಮಿಜಿ, ಹಣಮೇಗೌಡ ಬೀರನಕಲ್, ಸುದರ್ಶನ ನಾಯಕ ವರ್ಕನಳ್ಳಿ, ಮರೆಪ್ಪ ನಾಯಕ ಮಗ್ದಂಪುರ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ ಭೀಮರಾಯ ಠಾಣಗುಂದಿ, ರವಿಗೌಡ ಕಾರಡ್ಡಿ ಮಲ್ಹಾರ, ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ, ಮಹಿಪಾಲರಡ್ಡಿ ಮಲ್ಹಾರ, ಸಿದ್ದಲಿಂಗರೆಡ್ಡಿಗೌಡ, ಸುಭಾಷ ನಾಯಕ ಹೆಡಗಿಮದ್ರಾ, ಮಲ್ಲಮ್ಮ ಕೋಮಾರ, ಪಿಎಸ್ಐ ಭೀಮರಾಯ ನಾಯಕ, ಭೀಮರಾಯ ಹೊಸಮನಿ, ದೇವಿಂದ್ರ ನಾಯಕ ಕೂಡ್ಲೂರು, ಬಸರೆಡ್ಡಿಗೌಡ ಹೆಗ್ಗಣಗೇರಾ, ರವೀಂದ್ರ ಮಲ್ಲೋರ, ಲಕ್ಷ್ಮಣ ನಾಯಕ ಕೂಡ್ಲೂರು, ಮಲ್ಲೇಶ ನಾಯಕ, ಸಾಹೇಬಗೌಡ ಗೌಡಗೇರಾ, ಆಂಜನೇಯ ಮಲ್ಹಾರ ಸೇರಿದಂತೆ ಇತರರಿದ್ದರು.
ವಾಲ್ಮೀಕಿ ಆದರ್ಶ ಪಾಲಿಸಿ :
ಜಗತ್ತಿಗೆ ಶ್ರೀರಾಮನನ್ನು ಪರಿಚಯಿಸಿದ ಶ್ರೇಷ್ಠ ಗುರು ವಾಲ್ಮೀಕಿ ಮಹರ್ಷಿ ಅವರಾಗಿದ್ದು, ಅವರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಾತಿನಲ್ಲಿ ಬದಲಾವಣೆ ಆಗದೆ ಕೃತಿಯಲ್ಲಿ ಬದಲಾಗಬೇಕು, ಶಿಕ್ಷಣ ಪಡೆದು ವಿದ್ಯಾವಂತರಾಗಿ ವಿಚಾರಶೀಲರಾಗಬೇಕು, ಸರ್ವ ಸಮಾಜದ ಬಂಧುಗಳ ಜತೆಗೆ ಸಹಬಾಳ್ವೆ ಜೀವನ ಸಾಗಿಸಿ, ಎಲ್ಲರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳಬೇಕು. ಯಾರನ್ನು ವೈಯಕ್ತಿಕವಾಗಿ ವಿರೋಧಿಸಬೇಡಿ ಎಂದು ಗೊಲ್ಲಪಲ್ಲಿ ವಾಲ್ಮೀಕಿ ಗುರುಪೀಠದ ಪೀಠಾಧಿಪತಿ ವರದಾನಂದೇಶ್ವರ ಸ್ವಾಮಿಜಿ ಸಲಹೆ ನೀಡಿದರು.
ಮಹರ್ಷಿ ವಾಲ್ಮೀಕಿ ಅವರ ಚಿಂತನೆಗಳು ನಮಗೆಲ್ಲ ಸ್ಪೂರ್ತಿಯಾಗಿದ್ದು, ಅವರ ಮಾರ್ಗದರ್ಶನದಲ್ಲಿ ನಾವೆಲ್ಲ ನಡೆಯೋಣ. ಸೈದಾಪುರದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಬದ್ಧನಾಗಿರುವೆ, ಸಮಾಜದ ಮುಖಂಡರು ನಿವೇಶನ ಕಲ್ಪಿಸಿಕೊಡಬೇಕು.
- ಶರಣಗೌಡ ಕಂದಕೂರ ಶಾಸಕರು, ಗುರುಮಠಕಲ್







