ಯಾದಗಿರಿ | ಸಾಲ ಮರು ಪಾವತಿಸದ್ದಕ್ಕೆ ಯುವಕನ ಹತ್ಯೆ

ಖಾಸೀಂ ಮೃತ ವ್ಯಕ್ತಿ, ಯಾಸೀನ್ ಹತ್ಯೆ ಆರೋಪಿ
ಯಾದಗಿರಿ : ಕೊಟ್ಟ ಸಾಲ ಮರು ಪಾವತಿಸದ್ದಕ್ಕೆ ಯುವಕನನ್ನು ಹತ್ಯೆ ಮಾಡಿರುವ ಘಟನೆ ಯಾದಗಿರಿ ನಗರದ ಲಾಡಿಸ್ಗಲ್ಲಿಯಲ್ಲಿ ನಡೆದಿದೆ
ಖಾಸೀಂ ಅಲಿಯಾಸ್ ಬಿಲ್ಲಿ (28) ಮೃತ ವ್ಯಕ್ತಿ ಎಂದು ತಿಳಿದುಬಂದಿದೆ.
30 ಸಾವಿರ ರೂ. ಸಾಲ ಮರು ಪಾವತಿ ತಡವಾಗಿದ್ದಕ್ಕೆ ಖಾಸಿಂ ಮೇಲೆ ಯಾಸೀನ್ ಎಂಬಾತ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.
ಜ.19ರಂದು ಸಾಲ ಮರುಪಾವತಿಸುವಂತೆ ಖಾಸೀಂನನ್ನು ಯಾಸೀನ್ ಕೇಳಿದ್ದ. ಆದರೆ, ಸ್ವಲ್ಪ ದಿನ ಸಮಯ ನೀಡುವಂತೆ ಖಾಸೀಂ ವಿನಂತಿ ಮಾಡಿದ್ದನು. ಆದರೆ, ಖಾಸೀಂ ಮೇಲೆ ಯಾಸೀನ್ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬಳಿಕ ಖಾಸೀಂನನ್ನು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ರವಾನಿಸಲಾಗಿತ್ತು. ಕಲಬುರಗಿ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಖಾಸೀಂ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಕುರಿತು ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್, ʼಯಾಸೀನ್ ಬಳಿ ಖಾಸೀಂ 30 ಸಾವಿರ ರೂ. ಸಾಲ ಪಡೆದಿದ್ದ. ಆದರೆ, ಹಿಂತಿರುಗಿಸಿಲ್ಲ. ಈ ಕಾರಣಕ್ಕೆ ಹಲ್ಲೆ ನಡೆದಿದೆ. ಪ್ರಕರಣ ಸಂಬಂಧ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ. ನಾಲ್ಕು ದಿನಗಳ ನಂತರ ಖಾಸೀಂ ಮೃತಪಟ್ಟಿದ್ದಾನೆʼ ಎಂದು ತಿಳಿಸಿದರು.
ಆರೋಪಿ ಯಾಸೀನ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







