ಯಾದಗಿರಿ | ಚಿಕ್ಕನಳ್ಳಿ ಸರಕಾರಿ ಶಾಲೆಯ ಗಣಿತ ಶಿಕ್ಷಕರನ್ನು ಬೇರೆಡೆಗೆ ನಿಯೋಜನೆ

ಯಾದಗಿರಿ: ಜಿಲ್ಲೆಯ ಸುರಪುರ ತಾಲ್ಲೂಕಿನ ಚಿಕ್ಕನಳ್ಳಿ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗಣಿತ ಶಿಕ್ಷಕರನ್ನು ಬೇರೆಡೆಗೆ ನಿಯೋಜನೆ ಮಾಡಿರುವುದನ್ನು ಖಂಡಿಸಿ ಶಾಲೆಗೆ ಬೀಗ ಹಾಕಿ ಮಕ್ಕಳ ಸಮೇತ ಪಾಲಕರ ಧರಣಿ ಸತ್ಯಾಗ್ರಹ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕನಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದರಿಂದ - ಏಳನೇ ತರಗತಿಯವರೆಗೆ ಒಟ್ಟು 255 ಜನ ಮಕ್ಕಳ ದಾಖಲಾತಿ ಇದ್ದು. ಮೂವರು ಸರಕಾರಿ ಶಿಕ್ಷಕರು ಹಾಗೂ 6 ಮಂದಿ ಅತಿಥಿ ಶಿಕ್ಷಕರಿದ್ದಾರೆ, ಒಂದರಿಂದ ಏಳನೇ ತರಗತಿಯವರೆಗೆ 255 ಮಕ್ಕಳಿಗೆ ಒಬ್ಬರೇ ಗಣಿತ ಶಿಕ್ಷಕರಿದ್ದು, ಅದೇ ಗಣಿತ ಶಿಕ್ಷಕರನ್ನೇ ಬೋನ್ಹಾಳ ಶಾಲೆಗೆ ಮೂರು ದಿನ ಹಾಗೂ ಚಿಕ್ಕನಹಳ್ಳಿ ಶಾಲೆಯಲ್ಲಿ ಮೂರು ದಿನ ಕರ್ತವ್ಯ ನಿರ್ವಹಿಸುವಂತೆ ನಿಯೋಜನೆ ಮಾಡಿ ಶಿಕ್ಷಣ ಇಲಾಖೆಯ ಅಧಿಕಾರಿಗಳು ಅದೇಶಿಸಿದ್ದಾರೆ. ಇದರಿಂದ ನಮ್ಮ ಮಕ್ಕಳ ಭವಿಷ್ಯಕ್ಕೆ ತೊಂದರೆಯಾಗಲಿದೆ ಎಂದು ಪಾಲಕರು ಬೇಸರ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಮುಖಂಡ ಬಸನಗೌಡ ಮಾತನಾಡಿ, ನಮ್ಮ ಶಾಲೆಯ ಶಿಕ್ಷಕರನ್ನು ಬೇರೆಡಗೆ ನಿಯೋಜನೆ ಮಾಡದಂತೆ ಈಗಾಗಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮನಕ್ಕೂ ತಂದರೂ, ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಶಿಕ್ಷಕರನ್ನು ನಮ್ಮೂರ ಶಾಲೆಯಲ್ಲಿ ಖಾಯಂ ಗೊಳಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.





