ಯಾದಗಿರಿ | ಮಕ್ಕಳು ಚನ್ನಾಗಿ ಓದಿ ಉತ್ತಮ ಫಲಿತಾಂಶ ಪಡೆಯಬೇಕು : ಶಾಸಕ ಶರಣಗೌಡ ಕಂದಕೂರ

ಯಾದಗಿರಿ : ಕಳೆದ ವರ್ಷದ ಎಸೆಸೆಲ್ಸಿಯಲ್ಲಿ ಶೇ.91ರಷ್ಟು ಫಲಿತಾಂಶ ಪಡೆದ ಸುದ್ದಿ ತಿಳಿದು ತುಂಬಾ ಖುಷಿ ಆಯಿತು. ಈ ವರ್ಷದಲ್ಲಿ ಪ್ರತಿಶತ ನೂರರಷ್ಟು ಸಾಧನೆ ಮಾಡಬೇಕು ಎಂದು ಶಾಸಕ ಶರಣಗೌಡ ಕಂದಕೂರ ಅವರು ವಸತಿ ಶಾಲಾ ಮಕ್ಕಳಿಗೆ ಪ್ರೋತ್ಸಾಹಿಸಿದರು.
ಯಾದಗಿರಿ ತಾಲೂಕಿನ ಸೈದಾಪುರದ ಸಮೀಪ ಇರುವ ರಾಚನಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ನಿಲಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಗೂ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗಳಿಗೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಮಕ್ಕಳು ಚೆನ್ನಾಗಿ ಓದಿ ಉತ್ತಮ ಫಲಿತಾಂಶ ಪಡೆಯಬೇಕು ನಿಮಗೆ ಬೇಕಾದ ಅವಶ್ಯ ಸೌಲಭ್ಯಗಳನ್ನು ಒದಗಿಸಲು ನಾನು ಬದ್ಧನಾಗಿದ್ದೇನೆ. ಇದು ವಸತಿ ಶಾಲಾ ಆಗಿರುವ ಹಿನ್ನಲೆಯಲ್ಲಿ ಶಿಕ್ಷಕರು ಬೋಧನೆಯ ಜತೆಗೆ ಮಕ್ಕಳ ಯೋಗಕ್ಷೇಮವನ್ನು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ವೇಳೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸಿದ್ದಣ್ಣ ಅಣಬಿ, ನಿರ್ಮಿತಿ ಕೇಂದ್ರದ ಇಂಜಿನಿಯರ್ ಶಿವರಾಜ, ಪ್ರಾಂಶುಪಾಲರಾದ ಶ್ರೀಶೈಲ ಕೊರಳ್ಳಿ, ಜೆಡಿಎಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಶ್ಚಂದ್ರ ಕಟಕಟಿ, ಮುಖಂಡರಾದ ಬಸರಾಜಪ್ಪಗೌಡ ಗೊಂದಡಗಿ, ಚಂದ್ರುಗೌಡ ಸೈದಾಪುರ, ನರಸಪ್ಪ ಕವಡೆ ಬದ್ದೇಪಲ್ಲಿ, ಚನ್ನರೆಡ್ಡಿಗೌಡ ಸೈದಾಪುರ, ರಾಜು ಉಡುಪಿ, ಡಿ.ತಾಯಪ್ಪ, ಜಗದೀಶ ಕಲಾಲ, ಯಂಕೋಬ್ ತುರುಕಾನದೊಡ್ಡಿ, ವಿಶ್ವನಾಥ ಘಂಟಿ, ಲಕ್ಷ್ಮಣರೆಡ್ಡಿಗೌಡ, ಆನಂದ ವಾರದ, ಮಲ್ಲೇಶ ನಾಯಕ, ಲಕ್ಷ್ಮಣ ನಾಯಕ ಕೂಡ್ಲೂರ, ವಾರ್ಡನ್ ನಾಗಮ್ಮ ಅವಟೆ, ಶಿಕ್ಷಕರಾದ ಲಕ್ಷ್ಮಣ, ಮಹಿಬೂಬ ಪಟೇಲ್ ಜಿನಕೇರಾ, ವೀರೇಶ ಸೇಡಂ, ತಿಪ್ಪಣ್ಣ, ಮಲ್ಲಿಕಾರ್ಜುನ, ಸಿದ್ದಣ್ಣ, ಜಯಶ್ರೀ, ಸುಮಂಗಲ, ಭಾರತಿ, ಮರೆಮ್ಮ ಸೇರಿದಂತೆ ಮುಂತಾದವರಿದ್ದರು.
ವಿವಿಧ ಕಾಮಗಾರಿಗಳಿಗೆ ಶಾಸಕ ಕಂದಕೂರ ಅಡಿಗಲ್ಲು :
ಗುರುಮಠಕಲ್ ಮತಕ್ಷೇತ್ರದ ಸೈದಾಪುರ ಗ್ರಾಮದಲ್ಲಿ 40 ಲಕ್ಷ ರೂ. ವೆಚ್ಚದ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯ ಒಳಗಡೆ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, 60 ಲಕ್ಷ ರೂ. ಮೊತ್ತದಲ್ಲಿ ಸರಕಾರಿ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯಕ್ಕೆ 4 ಕೋಣೆಗಳ ನಿರ್ಮಾಣ, ಕ್ಯಾತನಾಳ ಇಂದಿರಾನಗರದಲ್ಲಿ 10 ಲಕ್ಷ ರೂ. ಮೊತ್ತದ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ಎಸ್ಟಿ ವಾರ್ಡನಲ್ಲಿ 10 ಲಕ್ಷ ರೂ. ಮೊತ್ತದ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ಶೆಟ್ಟಹಳ್ಳಿ ಗ್ರಾಮದಲ್ಲಿ 10 ಲಕ್ಷ ರೂ. ಮೊತ್ತದ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ಸೈದಾಪುರ ಸ್ಟೇಷನ್ ನ ಸೇವಾಲಾಲ್ ನಗರದಲ್ಲಿ 10 ಲಕ್ಷ ರೂ. ಮೊತ್ತದ ಸಿ.ಸಿ.ರಸ್ತೆ ಮತ್ತು ಚರಂಡಿ ನಿರ್ಮಾಣ, ಸೈದಾಪುರ ಸಮೀಪದ ರಾಚನಹಳ್ಳಿಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ 15 ಲಕ್ಷ ರೂ. ಮೊತ್ತದ ಶುದ್ಧ ನೀರಿನ ಕುಡಿಯುವ ಘಟಕ ನಿರ್ಮಾಣ, ಮುಖ್ಯರಸ್ತೆ ಯಿಂದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಗೆ 20 ಲಕ್ಷ ರೂ. ಮೊತ್ತದ ಅಡಿಗಲ್ಲು ಸಮಾರಂಭವನ್ನು ಮಂಗಳವಾರ ಶಾಸಕ ಶರಣಗೌಡ ಕಂದಕೂರ ಅವರು ನೆರವೇರಿಸಿದರು.
ಬಾಲ್ಯ ವಿವಾಹಕ್ಕೆ ಅವಕಾಶ ಕೊಡಬೇಡಿ :
ಬಾಲ್ಯವಿವಾಹ ಒಂದು ಸಾಮಾಜಿಕ ಪಿಡುಗು ಆಗಿದ್ದು, ಕಾನೂನಿನ ಪ್ರಕಾರ ಶಿಕ್ಷಾರ್ಹ ಅಪಾಧವಾಗಿದೆ. ಆದಾಗ್ಯೂ ಗ್ರಾಮೀಣ ಭಾಗದಲ್ಲಿ ವಯಸ್ಸಿಗೆ ಮುನ್ನ ಮದುವೆ ಪ್ರಕರಣಗಳು ಕಂಡುಬರುತ್ತಿರುವುದು ಅತ್ಯಂತ ನೋವಿನ ಸಂಗತಿ. ವಿದ್ಯಾವಂತ ಮಕ್ಕಳಾದ ನೀವು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿ, ಸಮಾಜದಲ್ಲಿ ಹೆಸರು ಪಡೆಯಬೇಕು. ಯಾವುದೇ ಕಾರಣಕ್ಕೂ ಬಾಲ್ಯ ವಿವಾಹಕ್ಕೆ ಅವಕಾಶ ಕೊಡಬೇಡಿ. ಚಿಕ್ಕ ವಯಸ್ಸಿನಲ್ಲಿ ವಿವಾಹ ಆಗುವುದರಿಂದ ಭವಿಷ್ಯದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಡುತ್ತವೆ ಇದರ ಬಗ್ಗೆ ಜಾಗೃತಿ ವಹಿಸಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಸೈದಾಪುರ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲಾ ಮಕ್ಕಳಿಗೆ ಕಿವಿ ಮಾತು ಹೇಳಿದರು.
ವಿದ್ಯಾರ್ಥಿಳೊಂದಿಗೆ ಶಾಸಕ ಕಂದಕೂರ ಭೋಜನ :
ಸೈದಾಪುರ ಸಮೀಪದ ರಾಚನಹಳ್ಳಿ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಮಂಗಳವಾರ ಆಗಮಿಸಿದ್ದ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು, ಮಕ್ಕಳೊಂದಿಗೆ ಪ್ರಾರ್ಥನೆ ಸಲ್ಲಿಸಿ. ಅವರ ಜೊತೆ ಕುಳಿತು ಮಧ್ಯಾಹ್ನದ ಊಟ ಸವಿದರು. ಇದೇ ವೇಳೆ ಪ್ರತಿನಿತ್ಯ ಮೆನು ಚಾರ್ಟ್ ಪ್ರಕಾರ ಊಟ, ತರಗತಿಗಳಲ್ಲಿ ಬೋಧನೆ ಒಳಗೊಂಡಂತೆ ಮೂಲ ಸೌಲಭ್ಯಗಳ ಪೂರೈಕೆ ಸಮರ್ಪಕವಾಗಿ ಮಾಡಲಾಗುತ್ತಿರುವ ಕುರಿತು ವಿದ್ಯಾರ್ಥಿಗಳ ಜತೆ ಚರ್ಚಿಸಿ ಮಾಹಿತಿ ಪಡೆದುಕೊಂಡರು.







