ಯಾದಗಿರಿ | ಕೌಟುಂಬಿಕ ಕಲಹ ; ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಮಹಿಳೆ ಆತ್ಮಹತ್ಯೆ

ಸಾಂದರ್ಭಿಕ ಚಿತ್ರ
ವಡಗೇರಾ : ಕೌಟುಂಬಿಕ ಕಲಹದಿಂದ ನೊಂದ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಕಂಠಿ ತಾಂಡದಲ್ಲಿ ಮಂಗಳವಾರ ನಡೆದಿದೆ.
ನೀಲಾಬಾಯಿ ಶಂಕರ್ (35) ಪುತ್ರಿಯರಾದ ರಾಜೇಶ್ವರಿ (10) ನಿಶಾ (4) ಮೃತ ಪಟ್ಟವರು ಎಂದು ತಿಳಿದುಬಂದಿದೆ.
ಮೃತ ನೀಲಾಬಾಯಿಗೆ ನಾಲ್ವರು ಪುತ್ರಿಯರು ಹಾಗೂ ಓರ್ವ ಪುತ್ರ ಸೇರಿ ಒಟ್ಟು ಐದು ಜನ ಮಕ್ಕಳಿದ್ದು, ಬೇಬಿ (12) ಹಾಗೂ 11 ತಿಂಗಳ ಗಂಡು ಮಗು ಶೆವಾನನ್ನು ಮನೆಯಲ್ಲಿ ಬಿಟ್ಟು, ಇನ್ನುಳಿದ ಮೂವರು ಹೆಣ್ಣು ಮಕ್ಕಳನ್ನು ತನ್ನ ಜೊತೆಯಲ್ಲಿ ಕರೆದುಕೊಂಡು ತಾಂಡಾದ ಬಳಿ ಇರುವ ಬಾವಿಯ ಹತ್ತಿರ ಹೊಗಿದ್ದಳು. ಮೊದಲು ಇಬ್ಬರು ಹೆಣ್ಣು ಮಕ್ಕಳನ್ನು ಬಾವಿಗೆ ತಳ್ಳಿದ್ದಾಳೆ. ಇನ್ನೊಬ್ಬ ಮಗಳು ಸಂಜು (6) ವನ್ನು ಬಾವಿಗೆ ತಳ್ಳುವಾಗ ಬಾಲಕಿ ತಪ್ಪಿಸಿಕೊಂಡು ಓಡಿ ಹೋಗಿ ತಾಂಡಾದಲ್ಲಿ ಈ ವಿಷಯ ತಿಳಿಸಿದ್ದಾಳೆ. ಆದರೆ ಅಲ್ಲಿನ ನಿವಾಸಿಗಳು ಬಾವಿಯ ಹತ್ತಿರ ಬರುವಷ್ಟರಲ್ಲಿ ಮೂವರು ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿ ಶಂಕರ್, ಡಿವೈಎಸ್ಪಿ ಅರುಣ್ ಕುಮಾರ್, ತಹಶೀಲ್ದಾರ್ ಶ್ರೀನಿವಾಸ್ ಚಾಪೆಲ್ ಭೇಟಿ ನೀಡಿ, ಪರಿಶೀಲನೆ ನಡೆಸಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.