ಯಾದಗಿರಿ | ಜಗದ ಕವಿ, ಯುಗ ಕಂಡ ಶ್ರೇಷ್ಠ ಕವಿ ಕುವೆಂಪು : ಗುರುಮಠಕಲ್ ಶ್ರೀ

ಯಾದಗಿರಿ : ಕನ್ನಡ ಸಾಹಿತ್ಯ ಲೋಕಕ್ಕೆ ಪ್ರಥಮ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಕನ್ನಡದ ಶ್ರೇಷ್ಠ ಕವಿ, ಜಗದ ಕವಿ, ಯುಗದ ಕವಿ ಕುವೆಂಪು ಎಂದು ಗುರುಮಠಕಲ್ ಖಾಸಾಮಠದ ಪೂಜ್ಯ ಶ್ರೀ ಶಾಂತವೀರ ಮುರುಘ ರಾಜೇಂದ್ರ ಸ್ವಾಮಿಗಳು ಹೇಳಿದರು.
ಇಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಆಯೋಜಿಸಿದ್ದ ರಾಷ್ಟ್ರ ಕವಿ ಕುವೆಂಪು ಅವರ ಜನ್ಮ ದಿನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ರಾಮಾಯಣ ದರ್ಶನಂ ಎಂಬ ಮಹಾಕಾವ್ಯವನ್ನು ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿ ಕನ್ನಡದ ಹಿರಿಮೆಯನ್ನು ವಿಶ್ವಕ್ಕೆ ಪರಿಚಯಿಸಿದ ವಿಶ್ವಮಾನವ ಸಂದೇಶದ ಮೂಲಕ ಸರ್ವರ ಗಮನ ಸೇಳೆದ ಸಮಾನತೆಯ ಕವಿ ಎಂದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾಧ್ಯಕ್ಷರಾದ ಶ್ರೀ ಸಿದ್ದಪ್ಪ ಹೊಟ್ಟಿ ಮಾತನಾಡಿ, ಕುವೆಂಪು ಅವರು ಅಧ್ಯಾಪಕರಾಗಿ, ಪ್ರಾಧ್ಯಾಪಕರಾಗಿ, ಕುಲಪತಿಗಳಾಗಿ, ಕನ್ನಡದ ಶ್ರೇಷ್ಟ ಕವಿ, ಕಾದಂಬರಿಕಾರ, ಲೇಖಕ, ಬರಹಗಾರರಾಗಿ ಅವರು ಮಾಡಿದ ಸೇವೆ ಅಮೋಘ ಮತ್ತು ಅಪಾರ. ಕುವೆಂಪು ಅವರ ಕವಿ ಶೈಲ ಕನ್ನಡದ ಪ್ರಸಿದ್ಧ ಸಾಹಿತಿಕ ತಾಣವಾಗಿ ನಮ್ಮ ಮುಂದೆ ಇದೆ, ಕಾರಣ ಕುವೆಂಪು ಅವರ ಸಾಹಿತ್ಯ ಪ್ರೇಮ ಸರ್ವರಿಗೂ ಪ್ರೇರಣೆಯಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಗರನಾಡು ಸೇವಾ ಪ್ರತಿಷ್ಠಾನ ಅಧ್ಯಕ್ಷರಾದ ಪ್ರಕಾಶ ಅಂಗಡಿ ಕನ್ನೆಳ್ಳಿ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಾ.ಭೀಮರಾಯ ಲಿಂಗೇರಿ, ಡಾ.ಎಸ್.ಎಸ್.ನಾಯಕ, ಸಿ.ಎಂ. ಪಟ್ಟೆದಾರ, ಆರ್.ಮಾಹಾದೇವಪ್ಪಗೌಡ ಅಬ್ಬೆತುಮಕೂರ, ಸೋಮಶೇಖರ ಮಣ್ಣೂರ, ದೇವರಾಜ್ ವರ್ಕನಳ್ಳಿ, ದುರ್ಗಪ್ಪ ಪೂಜಾರಿ, ಸಿದ್ದಪ್ರಸಾದ ಪಾಟೀಲ್ ಸೇರಿದಂತೆ ಇತರರಿದ್ದರು.







