ಯಾದಗಿರಿ | ಎಸ್ಸಿಪಿ, ಟಿಎಸ್ಪಿ ಅನುದಾನವನ್ನು ಅನ್ಯ ಯೋಜನೆಗಳಿಗೆ ಬಳಕೆ : ಡಿ.17ರಂದು ಬೆಳಗಾವಿ ಸುವರ್ಣ ಸೌಧದ ಬಳಿ ಪ್ರತಿಭಟನೆ

ಯಾದಗಿರಿ : ದಲಿತರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಎಸ್ಸಿಪಿ, ಟಿಎಸ್ಪಿ ಅನುದಾನವನ್ನು ಅನ್ಯ ಯೋಜನೆಗಳಿಗೆ ಬಳಸಿ ಈ ರಾಜ್ಯ ಕಾಂಗ್ರೆಸ್ ಸರಕಾರ ದಲಿತರಿಗೆ ಅನ್ಯಾಯ ಮಾಡುತ್ತಿದೆ ಈ ಅನ್ಯಾಯವನ್ನು ಆಗ್ರಹಿಸಿ ಡಿ.17ರಂದು ನಡೆಯುವ ಬೆಳಗಾವಿ ಅಧಿವೇಶನದಲ್ಲಿ ಸುವರ್ಣ ಸೌದ ಬಳಿ ವಿವಿಧ ಬೇಡಿಕೆಯ ಈಡೇರಿಕ್ಕಾಗಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಭೀಮವಾದ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಭೀಮರಾಯ ಸಿಂದಗೇರಿ ಹೇಳಿದ್ದಾರೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಅಭಿವೃದ್ಧಿಗಾಗಿ ಬಳಸಬೇಕಾದ ಹಣವನ್ನು ಈ ಸರಕಾರ ಬೇರೆ ರೀತಿಯ ಯೋಜನೆಗಳಿಗೆ ಬಳಸಿ ನಮ್ಮ ಹಣವನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ ಮತ್ತು ಕೆಲವು ನಿರ್ಲಕ್ಷ್ಯ ತೋರುವ ಅಧಿಕಾರಗಳ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು. ಈಗಾಗಲೇ ಅನ್ಯ ಯೋಜನೆಗಳಿಗೆ ಬಳಸಿರುವ ಅನುದಾನವನ್ನು ಕೂಡಲೇ ವಾಪಸು ತರಬೇಕು. ಕಲಬುರಗಿ ಜಿಲ್ಲೆ ಸನ್ನತಿ ಅಭಿವೃದ್ಧಿ ಪ್ರಾಧಿಕಾರದ ಯೋಜನೆಯನ್ನು ಆಂಧ್ರದ ಬುದ್ಧವನ ಮಾದರಿಯಲ್ಲಿ ಸುಮಾರು 200 ಎಕರೆ ಪ್ರದೇಶದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಿ ಜಾಗತಿಕ ಮಟ್ಟದ ಪ್ರವಾಸಿ ತಾಣವನ್ನಾಗಿ ಮಾಡಲು 500 ಕೋಟಿ ರೂ. ಅನುದಾನ ಬಿಡುಗಡೆ ಮಾಡಬೇಕು ಎಂದು ವಿವಿಧ ಬೇಡಿಕೆಗಳನ್ನು ಮುಂದಿಟ್ಟಕೊಂಡು ಪ್ರತಿಭಟನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿ ಸದಸ್ಯ ಶಿವಶರಣಪ್ಪ ವಾಡಿ, ರಾಜ್ಯ ಮಹಿಳಾ ಸಮಿತಿ ಸದಸ್ಯೆ ಮಂಜುಳಾ ಜಿಲ್ಲಾ ಸಂಚಾಲಕ ಶರಣು ಎಸ್.ನಾಟೇಕರ್, ಭೀಮರಾಯ್ ಕಾಗಿ, ತಾಲ್ಲೂಕು ಸಂಚಾಲಕ ಶರಣು, ಮಮ್ಮದರ್, ಸಾಬಣ್ಣ ಬೇಗರ್, ನಗರ ಸಂಚಾಲಕ ಗಿರೀಶ್ ಎಮ್ ಚಟ್ಟೇರಕರ್, ಸುರಪುರ ತಾಲೂಕು ಸಂಚಾಲಕ ಬನ್ನಪ್ಪ ಗೋನಾಳ, ವಾಸೀಮ್ ಸಂಗ್ರಿ, ಬಸವರಾಜ್ ಯಮನೂರು, ಯಮನಪ್ಪ ಬಾವಿಮನಿ, ಇದ್ದರು.







