Yadgir | 5 ಕೋಟಿ ರೂ. ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಚಾಲನೆ

ಯಾದಗಿರಿ: ನಗರದ ಹಾಗೂ ಗ್ರಾಮೀಣ ಭಾಗದಲ್ಲಿ ವಿವಿಧ ಇಲಾಖೆಗಳ ಮೂಲಕ ಕೈಗೆತ್ತಿಕೊಳ್ಳಲಾಗುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಜನಸಾಮಾನ್ಯರ ಸಂಚಾರಕ್ಕೆ ಅನುಕೂಲವಾಗುವುದರ ಜೊತೆಗೆ ನಗರದ ಅಭಿವೃದ್ಧಿಗೂ ಪೂರಕವಾಗಲಿವೆ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಹೇಳಿದರು.
ನಗರದ ಹತ್ತಿಕುಣಿ ಕ್ರಾಸ್ನಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಕೆಕೆಆರ್ಡಿಬಿ ಮೈಕ್ರೋ ಎಸ್ಸಿಪಿ ಯೋಜನೆಯಡಿ 5 ಕೋಟಿ ರೂ. ವೆಚ್ಚದಲ್ಲಿ ಕ್ರಾಸ್ ಮುಖ್ಯರಸ್ತೆಯಿಂದ ಗಂಗಾನಗರದವರೆಗೆ ರಸ್ತೆ ಅಗಲೀಕರಣ, ಸಿಸಿ ಚರಂಡಿ, ಎರಡೂ ಬದಿಗಳಲ್ಲಿ ಸ್ಟ್ರೀಟ್ಲೈಟ್ ಅಳವಡಿಕೆ ಹಾಗೂ ರಸ್ತೆ ವಿಭಜಕ ನಿರ್ಮಾಣ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಹತ್ತಿಕುಣಿ ಕ್ರಾಸ್ ನಗರದ ಪ್ರಮುಖ ವಾಣಿಜ್ಯ ಕೇಂದ್ರವಾಗಿದ್ದು, ಇಲ್ಲಿ ತರಕಾರಿ ಮಾರುಕಟ್ಟೆ, ವಿವಿಧ ಅಂಗಡಿಗಳು ಹಾಗೂ ವಾರದ ಸಂತೆಗೆ ಸಾವಿರಾರು ಜನರು ಆಗಮಿಸುತ್ತಾರೆ. ಜನಸಂದಣಿ ಮತ್ತು ವಾಹನಗಳ ದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಈ ರಸ್ತೆ ನಿರ್ಮಾಣದಿಂದ ಹೊಸ ಜಿಲ್ಲಾ ನ್ಯಾಯಾಲಯಕ್ಕೆ ತೆರಳುವ ಸಾರ್ವಜನಿಕರು ಹಾಗೂ ಸೇಡಂ ಭಾಗದ ಸಿಮೆಂಟ್ ಕಾರ್ಖಾನೆಗಳ ವಾಹನಗಳ ಸಂಚಾರಕ್ಕೂ ಅನುಕೂಲವಾಗಲಿದೆ. ಕಾಮಗಾರಿಯನ್ನು ನಿಗದಿತ ಅವಧಿಯೊಳಗೆ ಗುಣಮಟ್ಟದಿಂದ ಪೂರ್ಣಗೊಳಿಸುವಂತೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಸೂಚಿಸಿದರು.
ನಗರದ ಹಳ್ಳಗಳಿಗೆ ತ್ಯಾಜ್ಯ ಸುರಿಯುವುದನ್ನು ತಡೆಗಟ್ಟಲು ನಗರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ರಸ್ತೆ ಬದಿಯಲ್ಲಿ ವಾಹನಗಳ ಅಸ್ತವ್ಯಸ್ತ ನಿಲುಗಡೆಯಿಂದ ಉಂಟಾಗುತ್ತಿರುವ ಸಂಚಾರ ದಟ್ಟಣೆಯನ್ನು ನಿವಾರಿಸಲು ಸಂಚಾರಿ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ವೇದಿಕೆ ಮೇಲೆ ಯುಡಾ ಅಧ್ಯಕ್ಷ ಬಾಬುರಾವ ಕಾಡ್ಲೂರ, ಲೋಕೋಪಯೋಗಿ ಇಲಾಖೆ ಸಹಾಯಕ ಇಂಜನೀಯರ್ ಹನುಮಂತ ನಾಯಕ ಬಸವಂತಪುರ, ನಗರಸಭೆ ಸಹಾಯಕ ಇಂಜನೀಯ್ ರಾಕೇಶ ರೆಡ್ಡಿ, ಗುತ್ತಿಗೆದಾರ ಮೋಹನ್ ರಾಠೋಡ ಅಶೋಕ ನಗರ ತಾಂಡಾ, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಈಟೇ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸಾಯಿಬಣ್ಣ ಕೆಂಗೂರಿ, ಸಲೀಂ ಹುಂಡೇಕಾರ್, ಶರಣಗೌಡ ಬಲಕಲ್, ಖಮರ್ ಇಸ್ಲಾಂ, ರಿಯಾನ್ ಅಲಿ ತುಮಕೂರಿ ಸೇರಿದಂತೆ ಹಲವಾರು ಉಪಸ್ಥಿತರಿದ್ದರು.






