ಯಾದಗಿರಿ | ಉತ್ತಮ ಬೇಸಾಯ ಕ್ರಮಗಳ ವಾರ್ಷಿಕ ಸಮ್ಮೇಳನ

ಯಾದಗಿರಿ: ಕಲಿಕೆ–ಟಾಟಾ ಟ್ರಸ್ಟ್–ಟೆಸ್ಕೋ ಕೃಷಿ ಜೀವನೋಪಾಯ ಕಾರ್ಯಕ್ರಮದ ಆಶ್ರಯದಲ್ಲಿ ಉತ್ತಮ ಬೇಸಾಯ ಕ್ರಮಗಳ ವಾರ್ಷಿಕ ಸಮ್ಮೇಳನ ಹಾಗೂ ಗಿರಿನಾಡು ರೈತ ಉತ್ಪಾದಕ ಕಂಪೆನಿ ಲಿಮಿಟೆಡ್ನ ವಾರ್ಷಿಕ ಸರ್ವ ಸದಸ್ಯರ ಸಾಮಾನ್ಯ ಸಭೆ ಮಂಗಳವಾರ ನಗರದಲ್ಲಿನ ಎಸ್.ಡಿ.ಎನ್ ಸಭಾಂಗಣದಲ್ಲಿ ನಡೆಯಿತು.
ಸಭೆಯಲ್ಲಿ ಈಗಿನ ಆಹಾರ ಪದ್ಧತಿ ಮತ್ತು ಹಳೆಯ ಆಹಾರ ಪದ್ಧತಿಗಳಲ್ಲಿ ದೊಡ್ಡ ವ್ಯತ್ಯಾಸ ಬಂದಿದೆ. ರಾಸಾಯನಿಕ ಬಳಕೆ ಹೆಚ್ಚಾದಂತೆ ಮನುಷ್ಯರ ಆಯುಸ್ಸು ಕೂಡ ಕುಸಿಯುತ್ತಿದೆ. ನಮ್ಮ ಭಾಗದ ಮಣ್ಣಿನಲ್ಲಿ ಕ್ಯಾಲ್ಸಿಯಂ ಸೇರಿದಂತೆ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿದ್ದು, ತೊಗರಿ ಹಾಗೂ ಇತರ ಆಹಾರ ಧಾನ್ಯಗಳಲ್ಲಿ ಉತ್ತಮ ಗುಣಮಟ್ಟ ಕಂಡುಬರುತ್ತಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಯಾದಗಿರಿ ಜಂಟಿ ಕೃಷಿ ನಿರ್ದೇಶಕ ಡಾ.ರಾಚೇಂದ್ರ ಸೂಗೂರು, ತೋಟಗಾರಿಕೆ ಸಹಾಯಕ ನಿರ್ದೇಶಕ ಡಾ. ರವಿ ಪೊಲೀಸ್ ಪಾಟೀಲ್, ಕೃಷಿ ವಿಜ್ಞಾನ ಕೇಂದ್ರ ಕವಡಿಮಟ್ಟಿ ಮುಖ್ಯಸ್ಥ ಡಾ. ಜಯಪ್ರಕಾಶ್ ನಾರಾಯಣ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಮುಖ್ಯಸ್ಥೆ ಡಾ. ಶಶಿಕಲಾ ಸೇರಿದಂತೆ ಗಣ್ಯರು ಭಾಗವಹಿಸಿ ರೈತರಿಗೆ ಮಾರ್ಗದರ್ಶನ ನೀಡಿದರು.
ಅದೇ ವೇಳೆ ಕಲಿಕೆ ಕಾರ್ಯಕ್ರಮಾಧಿಕಾರಿ ಸಾಯಿ ಶ್ರೀಕಾಂತ್ ರೆಡ್ಡಿ, ಗಿರಿನಾಡು ಎಫ್ಪಿಒ ನಿರ್ದೇಶಕ ಶರಣಗೌಡ, ಕೃಷಿ ಅಧಿಕಾರಿ ಗಣಪತಿ ಮಾತನಾಡಿ ಯೋಜನೆಗಳ ಕುರಿತಂತೆ ಮಾಹಿತಿ ನೀಡಿದರು.
ಈ ವೇಳೆ ಕಲಿಕೆ ಸಂಸ್ಥೆಯ ಹಿರಿಯ ಕಾರ್ಯಕ್ರಮ ಸಂಯೋಜಕರಾದ ಶಾಂತುಗೌಡ ಬಿರಾದಾರ, ಕಿರಣ್ ಕುಮಾರ್, ಮಂಜುನಾಥ್ ಹಾಗೂ ಸಂಯೋಜಕರಾದ ಸುಧಾರಾಣಿ, ಅನುರಾಧ, ಸಂಪತ್ ಕುಮಾರ್, ಅರುಣ್, ಹಸನ್ ರಝಾಕ್, ಕ್ಷೇತ್ರ ಸಹಾಯಕರಾದ ಕುಮಾರ್ ಎಸ್. ತೆಳಿಗೇರಿ, ರಫೀಕ್ ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ 350ಕ್ಕೂ ಹೆಚ್ಚು ರೈತರು ಹಾಜರಿದ್ದರು.







