ಯಾದಗಿರಿ | ಕರ್ನಾಟಕದ ಜನತೆಯ ಕಿವಿಗೆ ಹೂ ಇಡುವ ಬಜೆಟ್ : ಡಾ.ಶರಣಭೂಪಾಲರೆಡ್ಡಿ

ಯಾದಗಿರಿ : ರಾಜ್ಯವನ್ನು 1,16,000 ಕೋಟಿ ರೂ. ಸಾಲದ ಶೂಲಕ್ಕೆ ದೂಡಿರುವ ಸಿಎಂ ಸಿದ್ದರಾಮಯ್ಯ ನವರ ಹದಿನಾರನೇ ಬಜೆಟ್ ಕರ್ನಾಟಕವನ್ನು ಅಕ್ಷರಶಃ ಆರ್ಥಿಕ ದುಸ್ಥಿತಿಗೆ ದೂಡಲಿದೆ. ಪ್ರತಿ ಬಜೆಟ್ ನಲ್ಲಿ ಕೇಂದ್ರ ಸರ್ಕಾರವನ್ನು ದೂರುವುದನ್ನೇ ಅಭ್ಯಾಸ ಮಾಡಿಕೊಂಡಿರುವ ಸಿದ್ದರಾಮಯ್ಯ ನವರ ಬಜೆಟ್ ನಲ್ಲಿ 67,877 ಕೋಟಿ ರೂ. ಕೇಂದ್ರದ ಸ್ವೀಕೃತಿಯನ್ನು ತೋರಿಸಿರುವುದು ಗಮನಾರ್ಹ ಅಂಶ ಎಂದು ಯಾದಗಿರಿ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ತಿಳಿಸಿದ್ದಾರೆ.
ಗ್ಯಾರಂಟಿಯ ಹೆಸರಿನಲ್ಲಿ ಕರ್ನಾಟಕ ರಾಜ್ಯದ ಜನತೆಗೆ ಬೆಲೆ ಏರಿಕೆಯ ಬರೆ ಎಳೆದು, ಜನಸಾಮಾನ್ಯರಿಗೆ ರಾಜ್ಯ ಸರಕಾರವೇ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ನಿರೀಕ್ಷೆಯಂತೆ ಈ ಬಾರಿಯೂ ರಾಜ್ಯದ ಭ್ರಷ್ಟ ಕಾಂಗ್ರೆಸ್ ಸರಕಾರ ಬೋಗಸ್ ಬಜೆಟ್ ಮಂಡನೆ ಮಾಡಿ ಕರ್ನಾಟಕದ ಜನತೆಯ ಕಿವಿಗೆ ಹೂ ಇಡುವ ಪ್ರಯತ್ನ ಮಾಡಿದೆ. ಇಂತಹ ಸಂದರ್ಭದಲ್ಲಿ ಪ್ರತಿಯೊಬ್ಬ ಕನ್ನಡಿಗನ ಮೇಲೆ ಬರೋಬ್ಬರಿ 1 ಲಕ್ಷ ರೂ. ಸಾಲ ಹೊರೆಸಿವೆ ಎಂದು ಹೇಳಿದರು.
ಮುಸ್ಲಿಮ್ ಓಲೈಕೆಗಾಗಿ ಸಿಎಂ ಸಿದ್ದರಾಮಯ್ಯ ಅವರು, ಧರ್ಮಾಧಾರಿತ ಮೀಸಲಾತಿಯನ್ನು ನೀಡಿ, ಸಂವಿಧಾನ ವಿರೋಧಿ ಬಜೆಟ್ ಮಂಡನೆ ಮಾಡಿ ಬುದ್ಧ, ಬಸವ, ಗಾಂಧಿ, ಬಾಬಾ ಸಾಹೇಬರ ಆಶಯಗಳನ್ನು ನಾಶ ಮಾಡುವ ಪ್ರಯತ್ನ ಮಾಡಿದ್ದಾರೆ. ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





