Yadgir | ಡಾ.ಅಂಬೇಡ್ಕರ್ ವ್ಯಕ್ತಿಯಲ್ಲ, ಜ್ಞಾನದ ಶಕ್ತಿ: ಭೀಮಾಶಂಕರ ದೊಡ್ಮನಿ

ಯಾದಗಿರಿ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ವ್ಯಕ್ತಿಯಲ್ಲ, ಜ್ಞಾನದ ಶಕ್ತಿ ಮತ್ತು ದೇಶದ ಜನರ ಆರಾಧ್ಯ ದೈವ ಎಂದು ಭಾರತಾಂಬೆ ಸಂಸ್ಥೆಯ ಮುಖ್ಯಸ್ಥ ಭೀಮಾಶಂಕರ ದೊಡ್ಮನಿ ಅಭಿಪ್ರಾಯಪಟ್ಟರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ನಗರಸಭೆ ಹಾಗೂ ಭಾರತಾಂಬೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ನಗರ ವಸತಿ ರಹಿತರ ಆಶ್ರಯ ಕೇಂದ್ರದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಅವರ 135ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಅವರು ಮಾತನಾಡಿದರು.
ಅಂಬೇಡ್ಕರ್ ಅವರ ಚಿಂತನೆಗಳನ್ನು ಗಂಭೀರವಾಗಿ ಅರ್ಥಮಾಡಿಕೊಳ್ಳಬೇಕು. ಅವರು ಬರೆದಿರುವ ಗ್ರಂಥಗಳು ಅಪಾರವಾಗಿದ್ದು, ಜೀವನಪೂರ್ತಿ ಓದಿದರೂ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಅವರು ಒಂದು ಸಮುದಾಯಕ್ಕೆ ಸೀಮಿತವಲ್ಲದೆ, ಎಲ್ಲರ ಹಿತಕ್ಕಾಗಿ ಶ್ರಮಿಸಿದ ಮಹಾನ್ ವ್ಯಕ್ತಿ ಎಂದು ಹೇಳಿದರು.
ನಿರಾಶ್ರಿತರ ಕೇಂದ್ರದ ವ್ಯವಸ್ಥಾಪಕ ಬೀರಲಿಂಗಪ್ಪ ಕಿಲ್ಲನಕೇರಾ ಮಾತನಾಡಿ, ಅಂಬೇಡ್ಕರ್ ಅವರನ್ನು ಮರೆತರೆ ಸಮಾಜದ ಪ್ರಗತಿ ಸಾಧ್ಯವಿಲ್ಲ. ಅವರ ಜಯಂತಿ ಆಚರಣೆಯ ಉದ್ದೇಶವೇ ಯುವಪೀಳಿಗೆಗೆ ಅವರ ತತ್ವ ಆದರ್ಶಗಳನ್ನು ಪರಿಚಯಿಸಿ, ರಾಷ್ಟ್ರಪ್ರಜ್ಞೆ ಹಾಗೂ ಸಮಾಜಪ್ರಜ್ಞೆಯನ್ನು ಬೆಳೆಸುವುದಾಗಿದೆ ಎಂದರು.
ಜಾತಿ ತಾರತಮ್ಯ ನಿವಾರಣೆಗೆ ಕಾನೂನುಗಳಿದ್ದರೂ, ಮನಸ್ಸಿನ ಬದಲಾವಣೆ ಅತ್ಯಂತ ಮುಖ್ಯ. ದಲಿತರು, ಶೂದ್ರರು ಮತ್ತು ಮಹಿಳೆಯರ ಪರವಾಗಿ ಧ್ವನಿ ಎತ್ತಿದ ಮಹಾನ್ ವ್ಯಕ್ತಿಗಳು ಅನೇಕ ಸಂಕಷ್ಟಗಳನ್ನು ಎದುರಿಸಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕೇರ್ ಟೇಕರಗಳಾದ ದೇವಮ್ಮ, ಕೃಷ್ಣ, ಸಿದ್ರಾಮ್, ಅಮೃತ ನಿರಾಶ್ರಿತರಾದ ಪಟೇಲ್ ಸಾಬ್, ಬಾಲಪ್ಪ, ಮುನ್ನಾ, ಭುವನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.






