Yadgir | ಕೆಂಭಾವಿ ಪುರಸಭೆ ಅಧ್ಯಕ್ಷೆ ಪ್ರಿಯಾ ರಾಮನಗೌಡ ಪದಚ್ಯುತ

ಕೆಂಭಾವಿ: ಹಲವು ದಿನಗಳಿಂದ ರಾಜಕೀಯ ಕುತೂಹಲಕ್ಕೆ ಕಾರಣವಾಗಿದ್ದ ಕೆಂಭಾವಿ ಪುರಸಭೆ ಅಧ್ಯಕ್ಷೆ ಪ್ರಿಯಾ ರಾಮನಗೌಡ ಪೊಲೀಸ್ ಪಾಟೀಲ ಅವರ ವಿರುದ್ಧದ ಅವಿಶ್ವಾಸ ನಿರ್ಣಯ ಸೋಮವಾರ ನಡೆದ ವಿಶೇಷ ಸಭೆಯಲ್ಲಿ ಭಾರಿ ಬಹುಮತದಿಂದ ಅಂಗೀಕಾರಗೊಂಡಿದ್ದು, ಅಧ್ಯಕ್ಷೆ ತಮ್ಮ ಸ್ಥಾನ ಕಳೆದುಕೊಂಡಿದ್ದಾರೆ.
ಯಾದಗಿರಿ ಉಪ ವಿಭಾಗಾಧಿಕಾರಿ (ಸಹಾಯಕ ಆಯುಕ್ತ) ಶ್ರೀಧರ ಗೋಟೂರ ಅವರ ಅಧ್ಯಕ್ಷತೆಯಲ್ಲಿ ಕೆಂಭಾವಿ ಪುರಸಭೆ ಸಭಾಂಗಣದಲ್ಲಿ ನಡೆದ ವಿಶೇಷ ಸಭೆಯಲ್ಲಿ ಒಟ್ಟು 20 ಸದಸ್ಯರು ಹಾಜರಿದ್ದರು. ಇವರಲ್ಲಿ 18 ಸದಸ್ಯರು ಅವಿಶ್ವಾಸ ನಿರ್ಣಯದ ಪರವಾಗಿ, ಒಬ್ಬ ಸದಸ್ಯರು ವಿರೋಧವಾಗಿ ಮತ ಚಲಾಯಿಸಿದರೆ, ಮತ್ತೊಬ್ಬ ಸದಸ್ಯರು ತಟಸ್ಥರಾಗಿದ್ದರು.
ಮತದಾನದ ಬಳಿಕ ಅವಿಶ್ವಾಸ ನಿರ್ಣಯ ಅಂಗೀಕಾರಗೊಂಡಿರುವುದಾಗಿ ಘೋಷಿಸಿದ ಸಹಾಯಕ ಆಯುಕ್ತ ಶ್ರೀಧರ ಗೋಟೂರ, "ಇಂದಿನಿಂದ ಜಾರಿಗೆ ಬರುವಂತೆ ಕೆಂಭಾವಿ ಪುರಸಭೆ ಅಧ್ಯಕ್ಷರ ಸ್ಥಾನ ತೆರವಾಗಿದೆ" ಎಂದು ಅಧಿಕೃತವಾಗಿ ಪ್ರಕಟಿಸಿದರು.
ಕೆಂಭಾವಿ ಪುರಸಭೆಯಲ್ಲಿ ಅಧ್ಯಕ್ಷ ಸ್ಥಾನ ಹಂಚಿಕೆ ಕುರಿತ ಒಳಒಪ್ಪಂದದ ವಿಚಾರದಿಂದಲೇ ಕಳೆದ ಕೆಲ ವಾರಗಳಿಂದ ರಾಜಕೀಯ ಬೆಳವಣಿಗೆಗಳು ತೀವ್ರಗೊಂಡಿದ್ದವು. ಒಪ್ಪಂದದಂತೆ ಅಧಿಕಾರಾವಧಿ ಪೂರ್ಣಗೊಂಡ ಬಳಿಕ ಅಧ್ಯಕ್ಷರು ರಾಜೀನಾಮೆ ನೀಡಬೇಕೆಂಬ ಒಪ್ಪಂದವಿದ್ದರೂ, ರಾಜೀನಾಮೆ ಸಲ್ಲಿಸಿ ನಂತರ ಹಿಂಪಡೆದ ಬೆಳವಣಿಗೆ ಕಾಂಗ್ರೆಸ್ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿತ್ತು. ಬಳಿಕ 16 ಸದಸ್ಯರು ಅಧ್ಯಕ್ಷೆ ವಿರುದ್ಧ ಅವಿಶ್ವಾಸ ನಿರ್ಣಯದ ಮನವಿ ಸಲ್ಲಿಸಿದ್ದರು.
ಮನವಿಯನ್ನು ಆಧರಿಸಿ ಸಹಾಯಕ ಆಯುಕ್ತರು ವಿಶೇಷ ಸಭೆ ಕರೆದು ಮತದಾನ ನಡೆಸಿದ್ದು, ಭಾರಿ ಬಹುಮತದಿಂದ ಅವಿಶ್ವಾಸ ನಿರ್ಣಯ ಅಂಗೀಕಾರಗೊಂಡಿದೆ.
ಅಧ್ಯಕ್ಷ ಸ್ಥಾನ ತೆರವಾದ ಹಿನ್ನೆಲೆಯಲ್ಲಿ, ಕರ್ನಾಟಕ ಪುರಸಭೆಗಳ ಕಾಯ್ದೆ ಮತ್ತು ನಿಯಮಗಳ ಪ್ರಕಾರ ಮುಂದಿನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಆರಂಭಿಸುವ ಸಾಧ್ಯತೆ ಇದೆ. ಈಗ ಕೆಂಭಾವಿ ಪುರಸಭೆಯ ಮುಂದಿನ ಅಧ್ಯಕ್ಷ ಯಾರು ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಸಭೆಯಲ್ಲಿ ಸುರಪುರ ತಹಸಿಲ್ದಾರ್ ಹುಸೇನಸಾಬ್ ಸರ್ಕವಾಸ್ , ಪುರಸಭೆ ಮುಖ್ಯಾಧಿಕಾರಿ ಪ್ರಕಾಶ್ ಬಾಗ್ಲಿ ಇದ್ದರು.






