ಯಾದಗಿರಿ | ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ, ಡಿಎಸ್ಎಸ್ ಅರ್ಜಿ ತಿರಸ್ಕಾರ : ಜಿಲ್ಲಾಡಳಿತ ಕ್ರಮದ ವಿರುದ್ಧ ದಲಿತ ಮುಖಂಡರ ಆಕ್ರೋಶ

ಯಾದಗಿರಿ : ಸುರಪುರ ತಾಲೂಕಿನ ಕೆಂಭಾವಿ ಪಟ್ಟಣದಲ್ಲಿ ಆರೆಸ್ಸೆಸ್ ಪಥಸಂಚಲನಕ್ಕೆ ಜಿಲ್ಲಾಡಳಿತ ಅನುಮತಿ ನೀಡಿದೆ. ಅದೇ ವೇಳೆ ದಲಿತ ಸಂಘರ್ಷ ಸಮಿತಿ (DSS) ನೀಡಿದ್ದ ಭೀಮ ಪಥಸಂಚಲನ ಅರ್ಜಿಯನ್ನು ಜಿಲ್ಲಾಡಳಿತ ಪರಿಗಣಿಸಿಲ್ಲ ಎಂದು ದಲಿತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲಾಧಿಕಾರಿ ಹರ್ಷಲ್ ಬೋಯರ್ ಅವರ ನಡೆ ವಿರುದ್ಧ ಡಿಎಸ್ಎಸ್ ಜಿಲ್ಲಾ ಸಂಚಾಲಕ ಶಿವಶರಣ ಯಾಳಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಆರೆಸ್ಸೆಸ್ ಪಥಸಂಚಲನಕ್ಕೆ ಅನುಮತಿ ನೀಡಿದ್ದರೂ, ನಾವು ಸಲ್ಲಿಸಿದ್ದ ಭೀಮ ಪಥಸಂಚಲನದ ಅರ್ಜಿಯನ್ನು ಪರಿಗಣಿಸಿಲ್ಲ. ಯಾರ ಒತ್ತಡಕ್ಕೆ ಮಣಿದು ಆರೆಸ್ಸೆಸ್ ಗೆ ಅನುಮತಿ ನೀಡಲಾಗಿದೆ ಎಂಬುದು ತಿಳಿದಿಲ್ಲ. ಜಿಲ್ಲಾಡಳಿತ ಯಾವುದೇ ಸಭೆ ನಡೆಸಿಲ್ಲ, ನಮ್ಮ ಅಭಿಪ್ರಾಯ ಕೇಳಲಿಲ್ಲ,. ಆರೆಸ್ಸೆಸ್ ಪಥಸಂಚಲನಕ್ಕೆ ನಾವು ಅಡ್ಡಿ ತರುವವರಲ್ಲ. ಆದರೆ ನಮ್ಮ ಪಥಸಂಚಲನಕ್ಕೂ ಸಮಾನ ಹಕ್ಕು ಇರಬೇಕು. ಅಗತ್ಯವಾದಲ್ಲಿ ಹೈಕೋರ್ಟ್ ಮೊರೆ ಹೋಗುತ್ತೇವೆ" ಎಂದು ಹೇಳಿದರು.
ಇನ್ನೊಂದೆಡೆ, ಆರೆಸ್ಸೆಸ್ ಪಥಸಂಚಲನಕ್ಕೆ ಪಟ್ಟಣದಲ್ಲಿ ಸಕಲ ಸಿದ್ಧತೆ ನಡೆದಿದ್ದು, ಪೊಲೀಸರು ಭದ್ರತೆ ಬಿಗಿಗೊಳಿಸಿದ್ದಾರೆ. ಕೆಂಭಾವಿಯಲ್ಲಿ ದಿನಪೂರ್ತಿ ಚಟುವಟಿಕೆ ಹೆಚ್ಚಾಗಿರುವುದರಿಂದ ಪೊಲೀಸರು ಶಾಂತಿ ಕಾಪಾಡುವ ಕಾರ್ಯಕ್ಕೆ ತೊಡಗಿದ್ದಾರೆ.





