ಯಾದಗಿರಿ | ʼಜೈಲ್ ಭರೋʼ ಚಳವಳಿ; ಮುಖ್ಯ ರಸ್ತೆ ತಡೆದ ಪ್ರತಿಭಟನಾಕಾರರು

ಯಾದಗಿರಿ: ವಿವಿಧ ಒಂಬತ್ತು ಬೇಡಿಕೆಗಳಿಗೆ ಆಗ್ರಹಿಸಿ ಸೋಮವಾರ ಇಲ್ಲಿನ ಡಿಸಿ ಕಚೇರಿ ಎದುರುಗಡೆ ಜೈಲ್ ಬರೋ ಚಳುವಳಿ ಮಾಡುತ್ತಿದ್ದ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.
ಸಂಯುಕ್ತ ಹೋರಾಟ ಕರ್ನಾಟಕ, ಜಂಟಿ ಕಾರ್ಮಿಕ ಸಂಘಟನೆ ಜಿಲ್ಲಾ ಸಮಿತಿ ಸೇರಿದಂತೆಯೇ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಡಿಸಿ ಕಚೇರಿ ಮುಂದಿನ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ಕೆಪಿಆರ್ ಎಸ್ ಜಿಲ್ಲಾಧ್ಯಕ್ಷ ಚನ್ನಪ್ಪ ಆನೆಗುಂದಿ, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸಬೇಕು.ಪರಿಷ್ಕತ ವೇತನ ಕನಿಷ್ಠ 36000 ರೂ. ಜಾರಿ ಮಾಡಿ ಒಳಗುತ್ತಿಗೆ, ಹೊರಗುತ್ತಿಗೆ ಪದ್ದತ್ತಿಯನ್ನು ರದ್ದುಪಡೆಸಿ ಎಲ್ಲಾ ಕಾರ್ಮಿಕರನ್ನು ಖಾಯಂ ಮಾಡಬೇಕು. ವಿಬಿ ಗ್ರಾಮ್ ಜಿ ಕಾಯ್ದೆ ರದ್ದುಗೊಳಿಸಿ, ನರೇಗಾ ಯೋಜನೆ ಮೊದಲಿನಂತೆ ಸಮರ್ಪಕ ಜಾರಿ ಮಾಡಿ ಭ್ರಷ್ಟಾಚಾರ ತಡೆಗಟ್ಟಿ 200 ದಿನಗಳ ಕೆಲಸ ಒದಗಿಸಿ ದಿನಕ್ಕೆ 600 ರೂಪಾಯಿ ಕೂಲಿ ಹೆಚ್ಚಿಸಬೇಕೆಂದರು.
ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ನಿಯಂತ್ರಿಸಬೇಕು.
ಡಾ. ಸ್ವಾಮಿನಾಥನ್ ವರದಿ ಜಾರಿ ಮಾಡಿ ರೈತರಿಗೆ ಬೆಂಬಲ ಬೆಲೆ ಖಾತರಿ ಪಡಿಸಬೇಕು. ರೈತರ ಆತ್ಮಹತ್ಯೆ ತಡೆಯಲು ಋಣ ಮುಕ್ತ ಕಾಯ್ದೆ ಜಾರಿ ತಂದು ಸಂಪೂರ್ಣ ಸಾಲಮನ್ನಾ ಮಾಡಬೇಕು. ಜಿಲ್ಲೆಯನ್ನು ಬರಗಾಲವೆಂದು ಘೋಷಿಸಿ, ಪ್ರತಿ ಎಕರೆಗೆ 50000 ರೂ. ಪರಿಹಾರ ಹಣ ನೀಡಬೇಕು. ಶಹಾಪುರ ತಾಲೂಕ ಕೇಂದ್ರವು ನಾಗಲೋಟದಲ್ಲಿ ಬೆಳೆಯುತ್ತಿರುವರಿಂದ ನಗರ ಸಂಚಾರಿ ಪೋಲಿಸ್ ಠಾಣೆ ಪ್ರಾರಂಭಿಸಬೇಕು ಮತ್ತು ಶಹಾಪುರ ನಗರದಲ್ಲಿ ಸಹಾಯಕ ಆಯುಕ್ತರ ಕಛೇರಿ ಕೂಡಲೇ ಪ್ರಾರಂಭಿಸಬೇಕೆಂದು ಆನೆಗುಂದಿ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಐಕೆಕೆಎಂ ಜಿಲ್ಲಾಧ್ಯಕ್ಷ ಶರಣಗೌಡ ಗೂಗಲ್, ಎಐಎಡಬ್ಲೂಡಿ ಜಿಲ್ಲಾಧ್ಯಕ್ಷ ದಾವಲಸಾಬ್ ನದಾಫ್, ಜಿಲ್ಲಾ ಕಾರ್ಯದರ್ಶಿ ಕೆಪಿಆರ್ ಎಸ್ ಭೀಮರಾಯ ಪೂಜಾರಿ, ಜಿಲ್ಲಾ ಕಾರ್ಯದರ್ಶಿ ಭೀಮರೆಡ್ಡಿ ಕಾರ್ಮಿಕ ನಾಯಕಿ ಬಿ. ಉಮಾದೇವಿ ಸೇರಿದಂತೆಯೇ ಇತರರಿದ್ದರು.






