Yadgiri | ಸತ್ತವರ ಕುಣಿ ಅಗೆಯಲು ನಿರಾಕರಣೆ : ದಲಿತರ ಮೇಲೆ ಹಲ್ಲೆ, ಬಹಿಷ್ಕಾರದ ಬೆದರಿಕೆ !

ಸುರಪುರ : ಮೃತರ ಅಂತ್ಯಕ್ರಿಯೆಗಾಗಿ ಕುಣಿ(ಗುಂಡಿ) ಅಗೆಯುವ ಕಾಯಕ ನಿರ್ವಹಿಸಲು ನಿರಾಕರಿಸಿದ ಕಾರಣಕ್ಕೆ ದಲಿತ ಸಮುದಾಯದವರ ಮೇಲೆ ಹಲ್ಲೆ ನಡೆಸಿ, ಗ್ರಾಮದಿಂದಲೇ ಬಹಿಷ್ಕಾರ ಹಾಕುವುದಾಗಿ ಬೆದರಿಕೆ ಹಾಕಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ಹೊಸ ಹೊಸ ಕಾನೂನುಗಳು ಎಷ್ಟೇ ಜಾರಿಗೆ ಬಂದರೂ ಜಾತೀಯತೆ, ಅಸ್ಪೃಶ್ಯತೆ, ಶೋಷಣೆ, ದಬ್ಬಾಳಿಕೆ ಹಾಗೂ ಸಾಮಾಜಿಕ ಬಹಿಷ್ಕಾರದಂತಹ ಅನಿಷ್ಟ ಪದ್ದತಿಗಳು ಇನ್ನೂ ಜೀವಂತ ಉಳಿದಿರುವುದಕ್ಕೆ ಇಂತಹ ಗ್ರಾಮಗಳೇ ಸಾಕ್ಷಿಯಾಗಿದೆ.
ಸುರಪುರ ತಾಲೂಕಿನ ಶಖಾಪುರ ಗ್ರಾಮದಲ್ಲಿ ಈ ಘಟನೆ ನಡದಿದ್ದು, ಮೃತರ ಅಂತ್ಯಕ್ರಿಯೆದಲ್ಲಿ ಸಾಂಪ್ರದಾಯಿಕವಾಗಿ ಕುಣಿ ಅಗಿಯುವ ಕಾಯಕವನ್ನು ದಲಿತ ಸಮುದಾಯದವರು ಮಾಡುತ್ತಿದ್ದರು. ಈ ಕಾಯಕವನ್ನು ಮುಂದುವರಿಸುವಂತೆ ಮೇಲ್ವರ್ಗದವರು ಬಲವಂತವಾಗಿ ಒತ್ತಡ ಹಾಕಲಾಗುತ್ತಿದ್ದು ನಾವು ಕುಣಿ ಅಗೆಯುವ ುದಿಲ್ಲ ಎಂದು ನಿರಾಕರಿಸಿದ್ದಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ನಾಲ್ಕು ದಿನಗಳ ಹಿಂದೆ ಗ್ರಾಮದಲ್ಲಿ ಮೇಲ್ವರ್ಗದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದರು. ಅಂತ್ಯಕ್ರಿಯೆಗಾಗಿ ಸಮುದಾಯದ ಸಂಪ್ರದಾಯದಂತೆ ಕುಣಿ (ಸಮಾಧಿ) ಒಡೆಯಲು ದಲಿತ ಸಮುದಾಯದ ಕೆಲವರನ್ನು ಕರೆಯಲಾಗಿತ್ತು ಎನ್ನಲಾಗಿದೆ.
ಬಹಿಷ್ಕಾರದ ಬೆದರಿಕೆ :
ಗ್ರಾಮದಲ್ಲಿ ಯಾರೇ ಮೃತಪಟ್ಟರೂ ನೀವು ಕುಣಿ ಹೊಡೆಯಲೇಬೇಕು. ಇಲ್ಲದಿದ್ದರೆ ಗ್ರಾಮದಲ್ಲಿ ಇರಲು ಅವಕಾಶವಿಲ್ಲ. ನಮ್ಮ ಮಾತು ಕೇಳದಿದ್ದರೆ ಬಹಿಷ್ಕಾರ ಹಾಕುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ ಎಂದು ದಲಿತ ಸಮುದಾಯದವರು ಆರೋಪಿಸಿದ್ದಾರೆ.
ಕುಡಿಯುವ ನೀರು, ಜಮೀನಿನ ದಾರಿಗೂ ತಡೆ ಆರೋಪ :
ಗ್ರಾಮದ ಬಾವಿಯಿಂದ ಕುಡಿಯುವ ನೀರು ತೆಗೆದುಕೊಳ್ಳಲು ಅವಕಾಶ ನೀಡದೆ ತಡೆಯುವುದು, ಜಮೀನಿಗೆ ಹೋಗುವ ದಾರಿಯಲ್ಲಿ ಅಡ್ಡಿಪಡಿಸುವುದು, ದಲಿತ ಓಣಿಯಲ್ಲಿ ಕಾರ್ಯಕ್ರಮ ನಡೆದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದು ಹಾಗೂ ಮಹಿಳೆಯರನ್ನು ಅಶ್ಲೀಲ ಪದಗಳಿಂದ ನಿಂದಿಸುವಂತಹ ಘಟನೆಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.
ಸಮಾಜವೇ ತಲೆತಗ್ಗಿಸುವಂತಹ ಘಟನೆಗಳು ನಡೆಯುತ್ತಿರುವುದು ದುರದೃಷ್ಟಕರ. ಸಂವಿಧಾನ ಎಲ್ಲರಿಗೂ ಸಮಾನವಾಗಿ ಬದುಕುವ ಹಕ್ಕು ನೀಡಿದೆ. ಜಾತೀಯ ಮನೋಭಾವದಿಂದ ಇಂತಹ ಘಟನೆಗಳು ನಡೆಯುತ್ತಿವೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಮಾತನಾಡಿ, ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ.
-ಪ್ರಿಯಾಂಕ್ ಖರ್ಗೆ, ಗೃಹ ಸಚಿವ
ಘಟನೆ ನಮ್ಮ ಗಮನಕ್ಕೆ ಬಂದಿದೆ. ಗ್ರಾಮದಲ್ಲಿ ಬಹಿಷ್ಕಾರ, ಜಾತಿ ನಿಂದನೆ ಸೇರಿದಂತೆ ಯಾವುದೇ ಕಾನೂನುಬಾಹಿರ ಚಟುವಟಿಕೆಗಳಿಗೆ ಅವಕಾಶ ನೀಡುವುದಿಲ್ಲ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದು, ಸಮಗ್ರ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು.
-ಪೃಥ್ವಿಕ್ ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಯಾದಗಿರಿ
ಗ್ರಾಮೀಣ ಪ್ರದೇಶಗಳಲ್ಲಿ ನಮ್ಮ ಸಮಾಜ ಇಂದಿಗೂ ತುಳಿತ, ದೌರ್ಜನ್ಯ ಹಾಗೂ ತಾರತಮ್ಯಕ್ಕೆ ಒಳಗಾಗುತ್ತಿದೆ. ಬಲವಂತವಾಗಿ ಕುಣಿ ಹೊಡೆಯಲೇಬೇಕು, ಇಲ್ಲದಿದ್ದರೆ ಊರು ಬಿಡಬೇಕು ಎನ್ನುವ ಬೆದರಿಕೆಗಳು ಸಂವಿಧಾನದ ಮೌಲ್ಯಗಳಿಗೆ ವಿರುದ್ಧವಾಗಿವೆ.
-ಮಲ್ಲಿಕಾರ್ಜುನ ಕ್ರಾಂತಿ, ರಾಜ್ಯ ಸಂಘಟನಾ ಸಂಚಾಲಕ, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ
ನಮಗೆ ಬಹಳ ದಿನಗಳಿಂದ ತೊಂದರೆ ನೀಡಲಾಗುತ್ತಿದೆ. ನಾವು ಅವರ ಮಾತು ಕೇಳದಿದ್ದರೆ ದೌರ್ಜನ್ಯ ನಡೆಸುತ್ತಾರೆ. ಕುಡಿಯುವ ನೀರು, ಜಮೀನಿನ ದಾರಿ ಸೇರಿದಂತೆ ಹಲವು ವಿಚಾರಗಳಲ್ಲಿ ತಾರತಮ್ಯ ಮಾಡಲಾಗುತ್ತಿದೆ. ನಮ್ಮ ಮಹಿಳೆಯರನ್ನು ಅವಮಾನಿಸಲಾಗುತ್ತಿದೆ.
-ಗೋಪಾಲ ದೊಡ್ಡಮನಿ, ಶಖಾಪುರ ನಿವಾಸಿ






