ಯಾದಗಿರಿ | ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಅವಶ್ಯಕ ಸಿದ್ಧತೆಗಳನ್ನು ಮಾಡಿಕೊಳ್ಳಿ : ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ್

ಯಾದಗಿರಿ : ಡಿಸೆಂಬರ್ ಮೊದಲ ವಾರದಲ್ಲಿ ಯಾದಗಿರಿ ನಗರದಲ್ಲಿ ನಡೆಯುವ ರಾಜ್ಯ ಮಟ್ಟದ ಯುವಜನೋತ್ಸವಕ್ಕೆ ಸಿದ್ಧತೆಗಳನ್ನು ಅಚ್ಚುಕಟ್ಟಾಗಿ ಮಾಡುವಂತೆ ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ್ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಜ್ಯಮಟ್ಟದ ಯುವಜನೋತ್ಸವ ಹಾಗೂ ಮುಖ್ಯಮಂತ್ರಿಗಳ ಆಗಮನದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ಅಧ್ಯಕ್ಷತೆ ವಹಿಸಿ ರಮೇಶ್ ಕೋಲಾರ್ ಮಾತನಾಡಿದರು.
ಡಿಸೆಂಬರ್ ಮೊದಲ ವಾರದಲ್ಲಿ ರಾಜ್ಯ ಮಟ್ಟದ ಯುವಜನೋತ್ಸವ ನಡೆಯಲಿದೆ. ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಆಗಮಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವ ಜೊತೆಗೆ ಯಾವುದೇ ರೀತಿಯ ಲೋಪ ಆಗದಂತೆ ಎಚ್ಚರಿಕೆ ವಹಿಸುವಂತೆ ಅವರು ಸೂಚಿಸಿದರು.
ಯುವಜನೋತ್ಸವ ನಡೆಯುವ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸುಮಾರು 10 ಸಾವಿರ ಜನ ಸೇರುವ ಸಾಧ್ಯತೆ ಇದೆ. ಆದ್ದರಿಂದ ಅವಶ್ಯಕ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಬೇಕು. ಶಿಷ್ಟಾಚಾರದಂತೆ ಅತಿಥಿ ಗಣ್ಯರನ್ನು ಆಹ್ವಾನಿಸುವ ಜೊತೆಗೆ ವೇದಿಕೆ ಸಿದ್ಧತೆ, ಶಾಮಿಯಾನ, ಕುಡಿಯುವ ನೀರು , ಆಸನಗಳ ವ್ಯವಸ್ಥೆ ಸೇರಿದಂತೆ ಅವಶ್ಯಕ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅವರು ಸೂಚಿಸಿದರು.
ಈ ಯುವಜನೋತ್ಸವ ಅಂಗವಾಗಿ ಸುಮಾರು 900ಕ್ಕೂ ಹೆಚ್ಚು ಸ್ಪರ್ಧಾಳುಗಳು, 40ಕ್ಕೂ ಹೆಚ್ಚು ನಿರ್ಣಾಯಕರು, ಕ್ರೀಡಾ ಇಲಾಖೆ ಅಧಿಕಾರಿಗಳು, ವಿವಿಧ ತಂಡಗಳ ವ್ಯವಸ್ಥಾಪಕರು ಆಗಮಿಸಲಿದ್ದು ನಗರದ ಇನ್ನಿತರ 6 ವೇದಿಕೆಗಳಲ್ಲಿ ವಿವಿಧ ಕಲಾ ಪ್ರಕಾರಗಳಲ್ಲಿ ನಡೆಯುವ ಸ್ಪರ್ಧೆಗಳಿಗೆ ಅವಶ್ಯಕ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಬರುವ ಎಲ್ಲ ಸ್ಪರ್ಧಾಳುಗಳಿಗೆ, ಅತಿಥಿ, ಗಣ್ಯರಿಗೆ ವಾಸ್ತವ್ಯಕ್ಕೆ ವಿವಿಧ ವಸತಿ ನಿಲಯ, ವಸತಿ ಶಾಲೆ, ಹೋಟಲ್ಗಳನ್ನು ಗುರುತಿಸಿ ಇಟ್ಟುಕೊಳ್ಳಬೇಕು. ವಸತಿ , ಊಟದ ವ್ಯವಸ್ಥೆ, ಸಾರಿಗೆ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಬೇಕು. ಈಗಾಗಲೇ ರಚಿಸಲಾಗಿರುವ ಆಯಾ ಸಮಿತಿಗಳ ಮುಖ್ಯಸ್ಥರು, ಆಯಾ ವಸತಿನಿಲಯಗಳು ಮತ್ತು ವೇದಿಕೆವಾರು ನಿಯೋಜಿಸಿರುವ ವಿವಿಧ ನೋಡಲ್ ಅಧಿಕಾರಿಗಳು ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.
ಈಗಾಗಲೇ ರಚಿಸಲಾದ ನೋಂದಣಿ ಸಮಿತಿ, ವಸತಿ ಸಮಿತಿ, ಸಾರಿಗೆ ಸಮಿತಿ, ಹಣಕಾಸು, ಶಿಷ್ಟಾಚಾರ ಸಮಿತಿ, ವೇದಿಕೆ ನಿರ್ಮಾಣ, ಅಲಂಕಾರ ಸಮಿತಿ, ತೀರ್ಪುಗಾರರು, ರಕ್ಷಣಾ ಸಮಿತಿ, ಆರೋಗ್ಯ ಸಮಿತಿ, ಪ್ರಚಾರ ಸಮಿತಿ, ವಿಜ್ಞಾನ ಮತ್ತು ವಸ್ತುಪ್ರದರ್ಶನ ಸಮಿತಿ, ಸ್ವಯಂಸೇವಕರು, ಸ್ವಾಗತ ಸಮಿತಿ ಮುಖ್ಯಸ್ಥರು ಅವಶ್ಯಕ ಕ್ರಮಗಳನ್ನು ಕೈಗೊಳ್ಳುವಂತೆ ಅವರು ಸೂಚಿಸಿದರು.
ಜಾನಪದ ಗೀತೆ ಸ್ಪರ್ದೆ ನಡೆಯುವ ಸರ್ಕಾರಿ ಪದವಿ ಕಾಲೇಜು ಸಭಾಂಗಣ,ಕವಿತೆ ಬರೆಯುವ ಸ್ಪರ್ಧೆ ನಡೆಯುವ ಸರಕಾರಿ ಪದವಿ ಕಾಲೇಜು ಚಿತ್ತಾಪುರ ರಸ್ತೆ, ಘೋಷಣೆ ಸ್ಪರ್ಧೆ ನಡೆಯುವ ಕನ್ನಡ ಸಾಹಿತ್ಯ ಪರಿಷತ್ ಭವನ, ವಿಜ್ಞಾನ ಮೇಳ ನಡೆಯುವ ಕ.ವಿದ್ಯುತ್ ಪ್ರಸರಣ ನಿಗಮದ ಸಭಾ ಭವನ, ಹೊಸಳ್ಳಿ ರಸ್ತೆ, ಕಥೆ ಬರೆಯುವ ಸ್ಪರ್ಧೆ ನಡೆಯುವ ಕನ್ನಡ ಭವನ , ಚಿತ್ತಾಪುರ ರಸ್ತೆ, ಚಿತ್ರ ಕಲೆ ನಡೆಯುವ ವಿದ್ಯಾ ಮಂಗಲ ಕಾರ್ಯಾಲಯಗಳನ್ನು ಎಲ್ಲ ರೀತಿಯಲ್ಲೂ ಸಿದ್ದವಾಗಿರುವಂತೆ ನೋಡಿಕೊಳ್ಳಲು ಅವರು ಸೂಚಿಸಿದರು.
ಈ ವೇಳೆ ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿ ರಾಜು ಬಾವಿ ಹಳ್ಳಿ ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.







