ಯಾದಗಿರಿ| ಯಡ್ಡಳ್ಳಿ ಗ್ರಾಮದಲ್ಲಿ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ

ಯಾದಗಿರಿ: ಪ್ರತಿಯೊಂದು ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅತ್ಯಂತ ಅಗತ್ಯವಾಗಿದ್ದು, ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡುವುದರ ಜೊತೆಗೆ ಕುಟುಂಬ, ಸಮಾಜದ ಪ್ರಗತಿಗೆ ಚಿಂತಿಸಬೇಕು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹೇಳಿದರು.
ತಾಲೂಕಿನ ಯಡ್ಡಳ್ಳಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶರಣಗೌಡ ಕಂದಕೂರ್, ಮಹರ್ಷಿ ವಾಲ್ಮೀಕಿ ಅವರ ಉಪದೇಶಗಳು, ಸಾಹಿತ್ಯದ ಮಹತ್ವ ಮತ್ತು ಸಂಸ್ಕೃತಿಯ ಪರಂಪರೆಯನ್ನು ಉಳಿಸುವ ಅಗತ್ಯವನ್ನು ವಿವರಿಸಿದರು. ಮಹರ್ಷಿ ವಾಲ್ಮೀಕಿ ಬರೆದಿರುವ ರಾಮಾಯಣವನ್ನು ಪ್ರತಿ ಯೊಬ್ಬರೂ ಓದಬೇಕು ಮತ್ತು ಅದರಲ್ಲಿರುವ ಪ್ರತಿಯೊಂದು ವಿಚಾರವನ್ನು ಅರಿತುಕೊಳ್ಳಬೇಕು. ಮುಂದಿನ ಪೀಳಿಗೆಯೂ ರಾಮಾಯಣವನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆ ಇಡೋಣ ಎಂದು ಹೇಳಿದರು. ಯಡ್ಡಳ್ಳಿ ಗ್ರಾಮದಲ್ಲಿ ಸಮುದಾಯ ಭವನ ನಿರ್ಮಿಸಲು 25 ಲಕ್ಷ ರೂ. ಅನುದಾನ ನೀಡಲಾಗುವುದು ಎಂದು ಇದೇ ವೇಳೆ ಅವರು ಭರವಸೆ ನೀಡಿದರು.
ಗೊಲ್ಲಂಪಲ್ಲಿ ಶ್ರೀ ವಾಲ್ಮೀಕಿ ವರದಾನಂದೇಶ್ವರ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿ ಮಾತನಾಡಿ, ಸಮಾಜದ ಏಳ್ಗೆಗೆ ವಾಲ್ಮೀಕಿ ಮಹರ್ಷಿಯ ಚಿಂತನೆಗಳು ಅತ್ಯವಶ್ಯಕವಾಗಿದ್ದು, ಪ್ರತಿಯೊಬ್ಬರೂ ವಾಲ್ಮೀಕಿ ರಾಮಾಯಣವನ್ನು ಓದಬೇಕು, ತಮ್ಮ ಮಕ್ಕಳಿಗೆ ವಾಲ್ಮೀಕಿ ರಾಮಾಯಣದಲ್ಲಿನ ತತ್ವಗಳು, ಆದರ್ಶಗಳು, ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಸಲಹೆ ನೀಡಬೇಕು ಎಂದು ಹೇಳಿದರು.
ಸಮಾಜದ ಹಿರಿಯ ಮುಖಂಡ ಹನುಮೇಗೌಡ ಬೀರನಕಲ್ ಮಾತನಾಡಿ, ಮಹರ್ಷಿ ವಾಲ್ಮೀಕಿ ಯವರು ಬರೆದಿರುವ ರಾಮಾಯಣವನ್ನು ನಾವೆಲ್ಲರೂ ಓದಬೇಕು. ಅದರಲ್ಲಿರುವ ಪ್ರತಿಯೊಂದು ವಿಚಾರಗಳನ್ನು ತಿಳಿದಿಕೊಳ್ಳಬೇಕು. ಸಮುದಾಯದ ಬಾಂಧವರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಹೇಳಿದರು.
ನಾಗಪ್ಪ ನಾಯಕ ಮಾನೆಗಾರ ಉಪನ್ಯಾಸ ನೀಡಿ, ವಾಲ್ಮೀಕಿ ಹಿನ್ನೆಲೆಯನ್ನು ಕುರಿತು ಸಾಕಷ್ಟು ಕಥೆಗಳು ಮತ್ತು ಪುರಾಣಗಳು ಸೃಷ್ಟಿಯಾಗಿರುವುದನ್ನು ನಾವುಗಳು ಕೇಳಿರುತ್ತೇವೆ. ಈಗಲೂ ಕೇಳುತ್ತಿದ್ದೇವೆ ಎಂದು ಹೇಳಿದರು.
ಈ ವೇಳೆ ಮರೆಪ್ಪ ನಾಯಕ ಮಗದಂಪೂರ, ಭೋಜನಗೌಡ ಯಡ್ಡಳ್ಳಿ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಸುಭಾಶ್ಚಂದ್ರ ಕಟಕಟಿ, ವಾಲ್ಮೀಕಿ ಸಮಾಜದ ಜಿಲ್ಲಾಧ್ಯಕ್ಷ ಗೌಡಪ್ಪಗೌಡ ಆಲ್ದಾಳ, ವಾಲ್ಮೀಕಿ ಸಮಾಜದ ತಾಲೂಕು ಅಧ್ಯಕ್ಷ ಸಾಹೇಬಗೌಡ ಗೌಡಗೇರಾ, ಎಸ್.ಎಸ್.ನಾಯಕ, ಸಿದ್ದಲಿಂಗಪ್ಪ ಬೆಳಗುಂದಿ, ಭೀಮಾಶಂಕರ ಇಬ್ರಾಹಿಂಪೂರ, ಬಸನಗೌಡ ಚಾಮನಳ್ಳಿ, ತಾಯಪ್ಪ ಬೆದ್ದೇಪಲ್ಲಿ, ಬಸವರಾಜ ಬಾಚವಾರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಯಡ್ಡಳ್ಳಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿಯ ಅನಾವರಣ ಕಾರ್ಯಕ್ರಮದ ವೇದಿಕೆವರೆಗೆ ಭಾಜಾ, ಭಜಂತ್ರಿಯೊಂದಿಗೆ ಮುತೈದೆಯರ ಕುಂಭ ಕಳಸದ ಮೆರವಣಿಗೆ ನಡೆಯಿತು.
ಯಡ್ಡಳ್ಳಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಮಹರ್ಷಿ ವಾಲ್ಮೀಕಿ ಪುತ್ಥಳಿಯ ಅನಾವರಣ ಕಾರ್ಯಕ್ರಮಕ್ಕೂ ಮುನ್ನ ಗೊಲ್ಲಂಪಲ್ಲಿ ಶ್ರೀ ವರದಾನಂದೇಶ್ವರ ಮಹಾಸ್ವಾಮಿಗಳು ಧ್ವಜಾರೋಹಣಗೈದರು.







