ಯಾದಗಿರಿ | ಕಳಪೆ ಬೀಜ ರಸಗೊಬ್ಬರ ಮಾರಾಟದ ಕಡಿವಾಣಕ್ಕೆ ಮನವಿ

ಸುರಪುರ: ತಾಲೂಕಿನಾದ್ಯಂತ ಎಲ್ಲಾ ರಸಗೊಬ್ಬರಗಳಲ್ಲಿ ಯಾವುದೇ ಕಳಪೆ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟ ಆಗದಂತೆ ಕ್ರಮ ಕೈಗೊಳ್ಳಲು ಆಗ್ರಹಿಸಿ ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಮುಂದೆ ಕರ್ನಾಟಕ ಪ್ರಾಂತ ರೈತ ಸಂಘದ ತಾಲೂಕು ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಚೆನ್ನಪ್ಪ ಆನೆಗುಂದಿ ಮಾತನಾಡಿ, ಈಗಾಗಲೇ ರೈತರು ಸರಿಯಾದ ಬೆಳೆ ಕೈಗೆ ಬಾರದೆ ತುಂಬಾ ತೊಂದರೆಯಲ್ಲಿದ್ದಾರೆ, ಪ್ರತಿ ವರ್ಷವೂ ಕೂಡ ಎಲ್ಲ ಕಡೆಗಳಲ್ಲಿ ಕಳಪೆ ಬೀಜ, ರಸಗೊಬ್ಬರ ಮತ್ತು ಕ್ರಿಮಿ ನಾಶಕ ಮಾರಾಟ ಮಾಡುವ ಪ್ರಕರಣಗಳು ಕಂಡುಬರುತ್ತವೆ. ಇದರಿಂದ ರೈತರು ಮತ್ತಷ್ಟು ನಷ್ಟ ಅನುಭವಿಸಿ ಆತ್ಮಹತ್ಯೆಯ ಹಾದಿ ಹಿಡಿಯುವಂತಾಗಿದೆ. ತಾಲೂಕಿನಲ್ಲಿರುವ ಯಾವುದೇ ಅಂಗಡಿಗಳಲ್ಲಿ ಕಳಪೆ ಬೀಜ, ರಸಗೊಬ್ಬರ ಮತ್ತು ಕ್ರಿಮಿನಾಶಕ ಮಾರಾಟ ಮಾಡಿರೋದು ಕಂಡು ಬಂದರೆ ಅಂತಹ ಅಂಗಡಿಗಳ ಲೈಸೆನ್ಸ್ ರದ್ದುಗೊಳಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ನಂತರ ಸಹಾಯಕ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಧರ್ಮಣ್ಣ ದೊರೆ, ಪ್ರಧಾನ ಕಾರ್ಯದರ್ಶಿ ರಾಮಯ್ಯ ಆಲ್ಹಾಳ, ಸಿದ್ದು ನಾಯ್ಕೋಡಿ,ಅಮರಪ್ಪ ಗೌಡ,ಸುಗ್ರೀವ ಬಾದ್ಯಾಪುರ, ಭೀಮರಾಯ ಸೇರಿದಂತೆ ಅನೇಕರು ಭಾಗವಹಿಸಿದ್ದರು.





