ಯಾದಗಿರಿ | ಪ್ರತಿಯೊಬ್ಬರು ವಿಮೆ ಮಾಡಿಸಿ : ಜಿಪಂ ಸಿಇಓ ಲವೀಶ್ ಓರಡಿಯಾ

ಯಾದಗಿರಿ: ಪ್ರತಿಯೊಬ್ಬರು ತಪ್ಪದೇ ವಿಮೆ ಮಾಡಿಸಬೇಕು. ಇದು ಸರಕಾರದ ಮಹತ್ವದ ಯೋಜನೆಯಾಗಿದ್ದು, ಇಲ್ಲಿ ಅತಂತ್ಯ ಕಡಿಮೆ ಹಣದಿಂದ ವಿಮೆ ಮಾಡಿಕೊಳ್ಳಲಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರಡಿಯಾ ಹೇಳಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಜಿಲ್ಲಾ ಪಂಚಾಯತ್ ಯಾದಗಿರಿ, ತಾಲೂಕು ಪಂಚಾಯತ್ ಯಾದಗಿರಿ ವತಿಯಿಂದ ಗ್ರಾಮ ಪಂಚಾಯತ್ ಕಾರ್ಯಾಲಯ ರಾಮಸಮುದ್ರ ಗ್ರಾಮದ ಹೊರವಲಯದಲ್ಲಿ ಮಂಗಳವಾರ ನರೇಗಾ ಯೋಜನೆಯ ಕೂಲಿ ಕಾರ್ಮಿಕರಿಗೆ ಮತ್ತು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕರಿಗೆ ಪಿಎಂಜೆಜೆವೈ, ಪಿಎಂಎಸ್ ಬಿವೈ, ಎಪಿವೈ ಮತ್ತು ಪಿಎಂಜೆಡಿವೈ ಅಡಿಯಲ್ಲಿ ವಿಮೆ ಮಾಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಂದು ನೀವು ಮಾಡಿಸುವ ವಿಮೆ ಮುಂದೆ ಬಹಳ ಅನುಕೂಲವಾಗಲಿದೆ. ಖಾಸಗಿ ಕಂಪನಿಗಳಲ್ಲಿ ವಿಮೆಗೆ ಹೆಚ್ಚಿಗೆ ಹಣವಿದ್ದರೇ ಈ ಸರ್ಕಾರದ ವಿವಿಧ ಯೋಜನೆಗಳಲ್ಲಿ ಅತ್ಯಂತ ಕಡಿಮೆ ಹಣದಲ್ಲಿ ವಿಮೆ ಪಾಲಿಸಿ ಮಾಡಿಕೊಳ್ಳಬಹುದು ಎಂದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಭೀಮರಾವ ಪಂಚಾಳ ಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಮ ಸಮುದ್ರ ಗ್ರಾಮ ಪಂಚಾಯತ್ ಅಧ್ಯಕ್ಷೆ ಆನಂದಮ್ಮ, ಮಲ್ಲಿಕಾರ್ಜುನ ಜಲ್ಲನೋರ್, ಜಿಲ್ಲಾ ಪಂಚಾಯತಿಯ ಯೋಜನೆ ನಿರ್ದೇಶಕರಾದ ಸಿ.ಬಿ ದೇವರಮನಿ, ಮುಖ್ಯ ಲೆಕ್ಕಾಧಿಕಾರಿಗಳು ವೆಂಕಟೇಶ್ ಚಟ್ನಳ್ಳಿ, ಪ್ರಾದೇಶಿಕ ವ್ಯವಸ್ಥಾಪಕರಾದ ಸಂಜಯ್ಯ ಕುಮಾರ್, ಕೆಜಿಪಿ ಪ್ರಾದೇಶಿಕ ವ್ಯವಸ್ಥಾಪಕರಾದ ಗುರುಪಾದಪ್ಪ ಕಡ್ಡಿ, ಗ್ರಾಮ ಪಂಚಾಯತ್ ಸದಸ್ಯರು, ಕೂಲಿಕಾರ್ಮಿಕರು ಇದ್ದರು.
ಸಿಇಓ ಲವೀಶ್ ಒರಡಿಯಾ ಅವರು ವಿಮೆ ಅರ್ಜಿ ವಿತರಣೆ ಮಾಡಿದರು. ಭರ್ತಿ ಮಾಡಿದ ಅರ್ಜಿಗಳನ್ನು ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಸ್ವೀಕಾರ ಮಾಡಿದರು.







