Yadgiri | ಜಿಲ್ಲೆಯ ಐವರು ರೌಡಿಶೀಟರ್ಗಳ ಗಡಿಪಾರು : ಎಸ್ಪಿ ಪೃಥ್ವಿಕ್ ಶಂಕರ್ ಆದೇಶ

ಯಾದಗಿರಿ: ವಿವಿಧ ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಜಿಲ್ಲೆಯ ಐವರು ರೌಡಿಶೀಟರ್ಗಳನ್ನು ಜಿಲ್ಲೆಯಿಂದ ಗಡಿಪಾರು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕೈಗೊಂಡಿರುವ ಮಹತ್ವದ ಕ್ರಮ ಇದಾಗಿದೆ.
ಗಡಿಪಾರುಗೊಂಡವರಲ್ಲಿ ಮುಂಡರಗಿಯ ಚಂದ್ರಶೇಖರ ಬಾವೂರ ಅವರನ್ನು ಧಾರವಾಡ ಜಿಲ್ಲೆಯ ವಿದ್ಯಾಗಿರಿ ಪೊಲೀಸ್ ಠಾಣೆ ವ್ಯಾಪ್ತಿಗೆ, ರಾಮಸಮುದ್ರದ ಶಿವರೆಡ್ಡಿ ಅವರನ್ನು ಬೆಂಗಳೂರು ನಗರದ ಬೈಯ್ಯಪ್ಪನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗೆ, ಯಾದಗಿರಿ ನಗರದ ಗಾಂಧಿನಗರ ತಾಂಡಾದ ರಮೇಶ್ ರಾಠೋಡ್ ಅವರನ್ನು ವಿಜಯಪುರ ಜಿಲ್ಲೆಯ ಗೋಲಗುಂಬಜ ಪೊಲೀಸ್ ಠಾಣೆ ವ್ಯಾಪ್ತಿಗೆ, ಹುಣಸಗಿ ತಾಲೂಕಿನ ಮುದನೂರಿನ ಮಕ್ಯೂಲ್ ಸಾಬ್ ಆಗತೀರ್ಥ ಅವರನ್ನು ಬೆಂಗಳೂರು ನಗರದ ಪೀಣ್ಯ ಪೊಲೀಸ್ ಠಾಣೆ ವ್ಯಾಪ್ತಿಗೆ ಹಾಗೂ ಬೈರಿಮಡ್ಡಿಯ ಅಂಬರೀಶ್ ಕೊಳ್ಳೂರ ಅವರನ್ನು ಬೆಂಗಳೂರು ನಗರದ ಯಲಹಂಕ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.
ಎಸ್ಪಿ ಆದೇಶದ ಪ್ರಕಾರ, ಶಿವರೆಡ್ಡಿ ಮತ್ತು ಮಕ್ಯೂಲ್ ಸಾಬ್ ವಿರುದ್ಧ ಅಕ್ರಮ ಮಟಕಾ ದಂಧೆ ಪ್ರಕರಣಗಳು ದಾಖಲಾಗಿದ್ದು, ಉಳಿದ ಮೂವರನ್ನು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಗಡಿಪಾರು ಮಾಡಲಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.




