ಯಾದಗಿರಿ: ಕೆಂಭಾವಿ ಕಂದಾಯ ನಿರೀಕ್ಷಕರ ವಿರುದ್ಧ ಕ್ರಮಕ್ಕೆ ಕ್ರಾಂತಿಕಾರಿ ಬಣ ಮನವಿ

ಸುರಪುರ: ಏವೂರ ಗ್ರಾಮದ ರೈತರ ಜಮೀನಿನ ಪಹಣಿಯಲ್ಲಿ ಬೇರೊಬ್ಬರ ಹೆಸರು ಸೇರ್ಪಡೆ ಮಾಡಿರುವ ಗ್ರಾಮಲೇಖಪಾಲಕ ಹಾಗೂ ಕೆಂಭಾವಿ ಕಂದಾಯ ನಿರೀಕ್ಷಕರ ಮೇಲೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಆಗ್ರಹಿಸಿದರು.
ನಗರದ ತಹಸಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮಾತನಾಡಿ,ಏವೂರ ಗ್ರಾಮದ ಸರ್ವೇ ನಂಬರ್ 167/2 ರ 34 ಎಕರೆ 7 ಗುಂಟೆ ಜಮೀನು ಕಳೆದ 50 ವರ್ಷಗಳಿಗಿಂತ ಹೆಚ್ಚು ಕಾಲ ದಿಂದ ದಲಿತ ಸಮುದಾಯದ ರೈತರು ಉಳಿಮೆ ಮಾಡಿಕೊಂಡು ಬರುತ್ತಿದ್ದಾರೆ.ಆದರೆ ಈಗ ಪಹಣಿಯ ಕಾಲಂ ನಂಬರ್ 11 ಮತ್ತು 12 ರಲ್ಲಿರುವ ಸಾಗುವಳಿದಾರರ ಹೆಸರನ್ನು ತೆಗೆದು ಹಾಕಿರುವ ಕೆಂಭಾವಿ ಕಂದಾಯ ನಿರೀಕ್ಷಕರು ಹಾಗೂ ಏವೂರ ಗ್ರಾಮ ಲೇಖಪಾಲಕರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಮತ್ತು ಜಾತಿ ನಿಂದನೆ ಮತ್ತು ವಂಚನೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.
ಒಂದು ವೇಳೆ ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ಮೇ 28 ರಂದು ತಹಸಿಲ್ದಾರ್ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ಆರಂಭಿಸಲಾಗುವುದು ಎಂದು ಎಚ್ಚರಿಸಿದರು. ನಂತರ ತಹಸಿಲ್ದಾರ್ ಹುಸೇನಸಾಬ್ ಎ.ಸರಕಾವಸ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಿಕಾರ್ಜುನ ತಳ್ಳಳ್ಳಿ,ವೀರಭದ್ರಪ್ಪ ತಳವಾರಗೇರಾ,ಅಜೀಜಸಾಬ್ ಐಕೂರ,ತಾ.ಸಂಚಾಲಕ ಬಸವರಾಜ ದೊಡ್ಮನಿ,ಶಿವಶಂಕರ ಬೊಮ್ಮನಹಳ್ಳಿ,ರಾಮಣ್ಣ ಶೆಳ್ಳಗಿ,ಖಾಜಾಹುಸೇನ ಗುಡಗುಂಟಿ,ಮಹೇಶ ಯಾದಗಿರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.