Yadgiri | ಮುಷ್ಠೂರಿನಲ್ಲಿ ಭಾವೈಕ್ಯತೆಯ ಮೊಹರಂ ಸಡಗರ : ವೈಭವದ ಸವಾರಿ

ಯಾದಗಿರಿ: ತಾಲೂಕಿನ ಮುಷ್ಠೂರು ಗ್ರಾಮದಲ್ಲಿ ಮೊಹರಂ ಹಬ್ಬವನ್ನು ಅತ್ಯಂತ ಭಕ್ತಿಭಾವ ಹಾಗೂ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ನಡೆದ ಅಕ್ಬರ್ ಅಲಿ ಹಾಗೂ ಚಾಂದ್ ಸಾಬ್ ಸವಾರಿಯು ಗ್ರಾಮದಲ್ಲಿ ವೈಭವದಿಂದ ಸಂಚರಿಸಿ ಸಾವಿರಾರು ಭಕ್ತರ ಗಮನ ಸೆಳೆಯಿತು.
ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸ ಹೊಂದಿರುವ ಮುಷ್ಠೂರು ಗ್ರಾಮದ ಮೊಹರಂ ಹಬ್ಬವು ಸರ್ವಧರ್ಮೀಯರ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ಜರುಗಿತು. ಹತ್ತು ದಿನಗಳ ಕಾಲ ವಿವಿಧ ಧಾರ್ಮಿಕ ಆಚರಣೆಗಳೊಂದಿಗೆ ನಡೆದ ಹಬ್ಬದಲ್ಲಿ ಮುಸ್ಲಿಂ ಸಮುದಾಯದವರ ಜೊತೆಗೆ ಹಿಂದೂ ಸಮುದಾಯದವರೂ ಉತ್ಸಾಹದಿಂದ ಭಾಗವಹಿಸಿ ಸೌಹಾರ್ದತೆಯ ಸಂದೇಶ ಸಾರಿದರು.
ಹಿರಿಯರ ಕಾಲದಿಂದಲೂ ನಡೆದುಕೊಂಡು ಬಂದಿರುವ ಈ ಪರಂಪರೆಯಲ್ಲಿ ಗ್ರಾಮಸ್ಥರು ಭಕ್ತಿಭಾವದಿಂದ ಪಾಲ್ಗೊಳ್ಳುತ್ತಿದ್ದು, ಧರ್ಮಗಳ ನಡುವೆ ಪ್ರೀತಿ, ನಂಬಿಕೆ ಮತ್ತು ಸಹೋದರತ್ವವನ್ನು ಸಾರುವ ಮೊಹರಂ ಹಬ್ಬ ಮತ್ತೊಮ್ಮೆ ಎಲ್ಲರ ಗಮನ ಸೆಳೆಯಿತು.
ಗ್ರಾಮದ ದರ್ಗಾದಲ್ಲಿ ಅಕ್ಬರ್ ಅಲಿ ಹಾಗೂ ಚಾಂದ್ ಸಾಬ್ ಅವರ ಸವಾರಿಯ ವೈಭವವನ್ನು ಕಣ್ತುಂಬಿಕೊಳ್ಳಲು ನೂರಾರು ಭಕ್ತರು ಆಗಮಿಸಿದ್ದರು. ಈ ಹಬ್ಬವು ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿರದೆ, ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಅಪೂರ್ವ ಭಾವೈಕ್ಯತೆ ಹಾಗೂ ಸಹೋದರತೆಗೆ ಸಾಕ್ಷಿಯಾಗಿದೆ.
ಶ್ರೀಮಂತ-ಬಡವ, ಮೇಲು-ಕೀಳು ಎಂಬ ಯಾವುದೇ ಭೇದಭಾವವಿಲ್ಲದೆ ಸರ್ವಧರ್ಮೀಯರು ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದು ಇಲ್ಲಿನ ವಿಶೇಷತೆಯಾಗಿದೆ. ಹಬ್ಬದ ಅಂಗವಾಗಿ ಗ್ರಾಮಸ್ಥರು ತಮ್ಮ ಮನೆಗಳನ್ನು ಸುಣ್ಣ-ಬಣ್ಣಗಳಿಂದ ಅಲಂಕರಿಸಿ, ತಳಿರು ತೋರಣಗಳಿಂದ ಸಿಂಗರಿಸಿ ಸಂಭ್ರಮದಿಂದ ಆಚರಿಸಿದರು.
ಸವಾರಿಯ ಸಂದರ್ಭದಲ್ಲಿ ಭಕ್ತರು ಉತ್ತಮ ಮಳೆ-ಬೆಳೆ, ಅತಿವೃಷ್ಟಿ ಹಾಗೂ ಅನಾವೃಷ್ಟಿ ನಿವಾರಣೆ, ಸಂತಾನ ಪ್ರಾಪ್ತಿ ಹಾಗೂ ಕುಟುಂಬದ ಆರ್ಥಿಕ ಮತ್ತು ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕಾಗಿ ಹರಕೆಗಳನ್ನು ಸಲ್ಲಿಸಿದರು. ಜಯಘೋಷಗಳ ನಡುವೆ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.






