Yadgiri | ಸಂಗೊಳ್ಳಿ ರಾಯಣ್ಣ ಅವರ ಶೌರ್ಯ ಯುವಕರಿಗೆ ಸ್ಫೂರ್ತಿ : ಶರಣಬಸಪ್ಪಗೌಡ ದರ್ಶನಾಪುರ
ದೋರನಹಳ್ಳಿಯಲ್ಲಿ ಸಂಗೋಳ್ಳಿ ರಾಯಣ್ಣನವರ ಮೂರ್ತಿ ಲೋಕಾರ್ಪಣೆ ಸಮಾರಂಭ

ಯಾದಗಿರಿ: ನಾಡಿಗೆ ಹಾಲುಮತ ಸಮಾಜದ ಕೊಡುಗೆ ಅಪಾರವಾಗಿದೆ. ಭಕ್ತ ಕನಕದಾಸರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನಂತಹ ಧೀಮಂತ ವ್ಯಕ್ತಿಗಳನ್ನು ನೀಡಿದ ಶ್ರೇಷ್ಠ ಸಮಾಜ ಹಾಲುಮತ ಸಮುದಾಯ ಎಂದು ಶಾಸಕ ಹಾಗೂ ಮಾಜಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.
ಶಹಾಪುರ ತಾಲೂಕಿನ ದೋರನಹಳ್ಳಿ ಪಟ್ಟಣದಲ್ಲಿ ನಡೆದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಗೊಳ್ಳಿ ರಾಯಣ್ಣ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ ಮಹಾನ್ ದೇಶಭಕ್ತರು. ಕಿತ್ತೂರು ಸಂಸ್ಥಾನದ ರಕ್ಷಣೆಗೆ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದ ಅವರ ಕೊಡುಗೆ ದೇಶದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅಜರಾಮರವಾಗಿದೆ ಎಂದು ಹೇಳಿದರು.
ದೋರನಹಳ್ಳಿಯ ಹಾಲುಮತ ಸಮುದಾಯ ಸರ್ವಧರ್ಮಗಳನ್ನು ಗೌರವಿಸುವ ಹೃದಯವಂತ ಸಮಾಜವಾಗಿದೆ. ಸಮುದಾಯದ ಬೇಡಿಕೆಯಂತೆ ದೋರನಹಳ್ಳಿಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
ಅಗತೀರ್ಥ ರೇವಣಸಿದ್ದೇಶ್ವರ ಮಠದ ಪೂಜ್ಯ ಶಾಂತಮಯ ಸ್ವಾಮೀಜಿ ಮಾತನಾಡಿ, ಹಾಲುಮತ ಸಮುದಾಯ ದೈವತ್ವದ ನೆಲೆಗಟ್ಟಿನಲ್ಲಿ ಬದುಕಿದ ಸಮಾಜವಾಗಿದ್ದು, ಮನುಷ್ಯ ಮಹಾದೇವನಾಗಬಹುದು, ನರ ನಾರಾಯಣನಾಗಬಹುದು ಎಂಬ ಸಂದೇಶವನ್ನು ಹಿಂದೂ ಸಂಸ್ಕೃತಿಯ ಮೂಲಕ ಸಾರಿದೆ ಎಂದು ಹೇಳಿದರು.
ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಮಾತನಾಡಿ, ಸಂಗೊಳ್ಳಿ ರಾಯಣ್ಣ ಅವರ ಶೌರ್ಯ, ತ್ಯಾಗ ಮತ್ತು ಆದರ್ಶದ ಬದುಕು ಇಂದಿನ ಯುವ ಸಮುದಾಯಕ್ಕೆ ದಾರಿದೀಪವಾಗಬೇಕು. ಹಾಲುಮತ ಸಮಾಜವು ತನ್ನದೇ ಆದ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ಸಮುದಾಯ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಮಹಾರಾಜ ದಿಗ್ಗಿ ಮಾತನಾಡಿ, ದೋರನಹಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಲೋಕಾರ್ಪಣೆ ಮಾಡಿರುವುದು ಶ್ಲಾಘನೀಯ. ಜಿಲ್ಲೆಯ ವಿವಿಧ ಕಡೆಗಳಲ್ಲೂ ಸಂಗೊಳ್ಳಿ ರಾಯಣ್ಣ ಅವರ ಪ್ರತಿಮೆ ಸ್ಥಾಪನೆಗೆ ಅಗತ್ಯ ನೆರವು ನೀಡುವುದಾಗಿ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ವಿಶಾಲ್ ಶಿಂಧೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿನೋದಗೌಡ ಮಾಲಿಪಾಟೀಲ್, ಹಣಮೇಗೌಡ ಬಿರನಕಲ್, ಮಲ್ಲಣ್ಣಗೌಡ ಐಕೂರು ಸೇರಿದಂತೆ ಹಲವು ಗಣ್ಯರು ಮಾತನಾಡಿದರು.
ಈ ಸಂದರ್ಭದಲ್ಲಿ ಗೋಲ್ಲಾಳಪ್ಪ ಗೋಲಗೇರಿ, ನಿಂಗಣ್ಣಗೌಡ ಮುರಲದೊಡ್ಡಿ, ಗಜೇಂದ್ರ ದೇಸಾಯಿ, ರಾಜಕುಮಾರ ಗಣೇರ್, ಬಸ್ಸುಗೌಡ ಬಿಳಾರ, ತಮ್ಮಣ್ಣಗೌಡ ಜೋಳದ, ದೇವಪ್ಪ ಮಾರಡಗಿ, ಬಸವರಾಜ ಕರೇಗಾರ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಲಾಯಿತು.
ಬೆಳಿಗ್ಗೆ ಸಿದ್ಧಾರೂಢ ಮಠದಿಂದ ಕಳಸ, ಡೊಳ್ಳು, ಭಜಂತ್ರಿ ಹಾಗೂ ಮಂಗಳವಾದ್ಯಗಳೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಗೊಳ್ಳಿ ರಾಯಣ್ಣ ಅವರ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಕನಕ ಗುರುಪೀಠ ತಿಂಥಣಿ ಬ್ರಿಡ್ಜ ಪೂಜ್ಯ ಲಿಂಗ ಭೀರದೇವರು,ಶಿವಲಿಂಗ ರಾಜೇಂದ್ರ ಶಿವಾಚಾರ್ಯರು, ಪೂಜ್ಯ ಅಭಿನವ ಮಹಾಂತೇಶ್ವರ ಶಿವಾಚಾರ್ಯರು,ಪೂಜ್ಯ ಭೀಮಾಶಂಕರಾನಂದ ಅವಧೂತರು, ಮಹೇಶರೆಡ್ಡಿಗೌಡ ಮುದ್ನಾಳ, ಜಟ್ಟೆಪ್ಪ ಹಿರೆಪೂಜಾರಿ, ಸಾಬಣ್ಣ ಮಲ್ಲಪ್ಪ ಟೋಕಾಪುರ, ಈಶ್ವರಪ್ಪಗೌಡ ಲಕ್ಕಶೇಟ್ಟಿ, ಸಾಬಣ್ಣ ಗೋಶಿ, ರಾಜುಗಣೇರ್, ನಿಜಗುಣಪೂಜಾರಿ, ಮೌನೇಶ ಕೊಂತಲ್, ಮಲ್ಲಿಕಾರ್ಜುನ ಪೂಜಾರಿ, ಮುಂತಾದವರು ಇದ್ದರು. ಯಮನಪ್ಪ ಮುಕುಡಿ ಸ್ವಾಗತಿಸಿದರು,ಮಲ್ಲು ಒಕಳೇರ್ ವಂದಿಸಿದರು.






