×
Ad

ಆಂಧ್ರಪ್ರದೇಶ | ಶ್ರೀಶೈಲಂ ದೇವಸ್ಥಾನದ ಪ್ರಸಾದದಲ್ಲಿ ಜಿರಳೆ ಪತ್ತೆ, ಭಕ್ತನ ಆರೋಪ ನಿರಾಕರಿಸಿದ ದೇವಳದ ಅಧಿಕಾರಿ

Update: 2025-06-30 19:34 IST

Photo Courtesy: X/@teluguscribe

ಹೊಸದಿಲ್ಲಿ: ಆಂಧ್ರಪ್ರದೇಶದ ಶ್ರೀಶೈಲಂ ದೇವಸ್ಥಾನದಲ್ಲಿ ರವಿವಾರ ವಿತರಿಸಲಾದ ‘ಲಡ್ಡು’ ಪ್ರಸಾದದಲ್ಲಿ ಜಿರಳೆ ಪತ್ತೆಯಾಗಿದೆ ಎಂದು ಭಕ್ತರೋರ್ವರು ಹೇಳಿಕೊಂಡಿದ್ದು, ಇದು ತೀವ್ರ ಆಕ್ರೋಶವನ್ನು ಸೃಷ್ಟಿಸಿದೆ. ಶರಶ್ಚಂದ್ರ ಕೆ.ಎನ್ನುವವರು ಲಡ್ಡು ನಡುವೆ ಸತ್ತ ಜಿರಳೆ ಇರುವುದನ್ನು ತೋರಿಸುವ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ. ಆದರೆ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಆರೋಪವನ್ನು ನಿರಾಕರಿಸಿದ್ದಾರೆ.

ಜಿರಳೆ ಪತ್ತೆಯಾದ ತಕ್ಷಣ ಶರಶ್ಚಂದ್ರ ಅವರು ಕಾರ್ಯ ನಿರ್ವಹಣಾಧಿಕಾರಿಗೆ ದೂರು ಸಲ್ಲಿಸಿದ್ದು, ದೇವಸ್ಥಾನದ ಸಿಬ್ಬಂದಿ ಲಡ್ಡು ತಯಾರಿಕೆಯಲ್ಲಿ ಎಚ್ಚರಿಕೆ ವಹಿಸಿರಲಿಲ್ಲ ಎಂದು ಹೇಳಿದ್ದಾರೆ.

‘ಜೂ.29ರಂದು ನಾನು ಶ್ರೀಶೈಲಂ ದೇವಸ್ಥಾನಕ್ಕೆ ಭೇಟಿ ನೀಡಿದ್ದೆ. ನನಗೆ ನೀಡಲಾಗಿದ್ದ ಲಡ್ಡು ಪ್ರಸಾದದಲ್ಲಿ ಜಿರಳೆ ಪತ್ತೆಯಾಗಿದೆ. ಪ್ರಸಾದವನ್ನು ತಯಾರಿಸುವಾಗ ಸಿಬ್ಬಂದಿ ನಿರ್ಲಕ್ಷ್ಯ ತೋರಿಸಿದ್ದಾರೆ. ದಯವಿಟ್ಟು ಇದನ್ನು ಗಮನಿಸಿ ಮತ್ತು ಸಮಸ್ಯೆಯನ್ನು ಬಗೆಹರಿಸಿ’ ಎಂದು ಶರಶ್ಚಂದ್ರ ದೂರಿನಲ್ಲಿ ಕೋರಿದ್ದಾರೆ.

ಆದರೆ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಶ್ರೀನಿವಾಸ ರಾವ್ ಇದನ್ನು ನಿರಾಕರಿಸಿದ್ದಾರೆ.

ಸಿಬ್ಬಂದಿಗಳ ನಿರಂತರ ಮೇಲ್ವಿಚಾರಣೆಯಡಿ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಯ್ದುಕೊಂಡು ಲಡ್ಡುಗಳನ್ನು ತಯಾರಿಸಲಾಗುತ್ತದೆ. ಅದರಲ್ಲಿ ಜಿರಳೆ ಸಿಗುವ ಸಾಧ್ಯತೆಯಿಲ್ಲ ಎಂದು ಅವರು ಹೇಳಿದರು.

ಪ್ರಸಾದದ ಬಗ್ಗೆ ಚಿಂತೆ ಬೇಡ ಎಂದು ಅವರು ಭಕ್ತರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News