ತಮಿಳುನಾಡು | ತಮಿಳು ಭಾಷೆ ತಿಳಿಯದಿರುವುದಕ್ಕೆ ಬಿಜೆಪಿ ಕಾರ್ಯಕರ್ತರ ಕ್ಷಮೆಯಾಚಿಸಿದ ಅಮಿತ್ ಶಾ
Photo : x/AmitShah
ಮಧುರೈ: ʼತಮಿಳು ಭಾರತದ ಶ್ರೇಷ್ಠ ಭಾಷೆಗಳಲ್ಲೊಂದಾಗಿದೆʼ ಎಂದು ಹೇಳಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾನು ಈ ಸಂದೇಶವನ್ನು ತಮಿಳು ಭಾಷೆಯಲ್ಲಿ ತಿಳಿಸಲು ಸಾಧ್ಯವಾಗದಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ ಎಂದು ಹೇಳಿದರು.
ಮಧುರೈನಲ್ಲಿ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, “ಭಾರತದ ಶ್ರೇಷ್ಠ ಭಾಷೆಗಳಲ್ಲೊಂದಾದ ತಮಿಳನ್ನು ಮಾತನಾಡಲು ಸಾಧ್ಯವಾಗದಿರುವುದಕ್ಕೆ ನಾನು ತಮಿಳುನಾಡಿನ ಪಕ್ಷದ ಕಾರ್ಯಕರ್ತರಲ್ಲಿ ಕ್ಷಮೆ ಕೋರುತ್ತೇನೆ” ಎಂದು ಹೇಳಿದರು.
2026ರ ಚುನಾವಣೆಯಲ್ಲಿ ಡಿಎಂಕೆಯನ್ನು ಸೋಲಿಸಿ ತಮಿಳುನಾಡಿನಲ್ಲಿ ಬಿಜೆಪಿ-ಎಐಎಡಿಎಂಕೆ ಮೈತ್ರಿಕೂಟದ ಎನ್ಡಿಎ ಸರಕಾರ ರಚನೆಯಾಗಲಿದೆ ಎಂದು ಅವರು ಬಿಜೆಪಿ ಕಾರ್ಯಕರ್ತರಿಗೆ ಭರವಸೆ ನೀಡಿದರು.
“2026ರಲ್ಲಿ ಎಐಎಡಿಎಂಕೆ-ಬಿಜೆಪಿ ಮೈತ್ರಿಕೂಟದ ಎನ್ಡಿಎ ಸರಕಾರ ರಚನೆಯಾಗಲಿದೆ. ನಾನು ದಿಲ್ಲಿಯಲ್ಲಿ ವಾಸಿಸುತ್ತಿದ್ದರೂ, ನನ್ನ ಕಿವಿ ಮಾತ್ರ ಯಾವಾಗಲೂ ತಮಿಳುನಾಡಿನಲ್ಲಿದೆ. ಡಿಎಂಕೆಯನ್ನು ಪರಾಭವಗೊಳಿಸಲು ಅಮಿತ್ ಶಾರಿಂದ ಸಾಧ್ಯವಿಲ್ಲ ಎಂದು ಎಂ.ಕೆ.ಸ್ಟಾಲಿನ್ ಹೇಳುತ್ತಿದ್ದಾರೆ. ಅದು ನಿಜ ಕೂಡಾ. ಆದರೆ, ತಮಿಳುನಾಡಿನ ಜನತೆ ನಿಮ್ಮನ್ನು ಪರಾಭವಗೊಳಿಸಲಿದ್ದಾರೆ” ಎಂದು ಅವರು ಸವಾಲು ಹಾಕಿದರು.
ಎಂ.ಕೆ.ಸ್ಟಾಲಿನ್ ನೇತೃತ್ವದ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ನಡುವಿನ ಭಾಷಾ ಸಮರದ ಮಧ್ಯೆ ಅಮಿತ್ ಶಾ ಅವರ ಈ ಹೇಳಿಕೆ ಹೊರಬಿದ್ದಿದೆ.