ವಿಷ್ಣು ರೂಪದ ಫೋಟೊದಲ್ಲಿ ಕಾಣಿಸಿಕೊಂಡ ಧೋನಿಗೆ ಜಾಮೀನುರಹಿತ ವಾರಂಟ್
ಹೊಸದಿಲ್ಲಿ, ಜ.8: ಪತ್ರಿಕೆಯೊಂದರಲ್ಲಿ ಪ್ರಕಟಗೊಂಡ ಜಾಹೀರಾತಿನ ಫೋಟೊದಲ್ಲಿ ಭಗವಾನ್ ವಿಷ್ಣು ರೂಪದಲ್ಲಿ ಕಾಣಿಸಿಕೊಂಡು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಆರೋಪ ಎದುರಿಸುತ್ತಿದ್ದ ಭಾರತದ ಸೀಮಿತ ಓವರ್ಗಳ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಅನಂತಪುರದ ಸ್ಥಳೀಯ ನ್ಯಾಯಾಲಯ ಇಂದು ಜಾಮೀನುರಹಿತ ವಾರಂಟ್ ಹೊರಡಿಸಿದೆ.
ಧೋನಿ ಫೆ.25ರ ಮೊದಲು ಹಾಜರಾಗದಿದ್ದರೆ ಅವರನ್ನು ಬಂಧಿಸುವಂತೆ ನ್ಯಾಯಾಲಯ ಆದೇಶ ನೀಡಿದೆ.
2013 ಎಪ್ರಿಲ್ನಲ್ಲಿ ‘ಬ್ಯುಸಿನೆಸ್ ಟುಡೆ’ ನಿಯತಕಾಲಿಕದಲ್ಲಿ ಪ್ರಕಟಗೊಂಡ ಜಾಹೀರಾತೊಂದರ ಫೋಟೊದಲ್ಲಿ ಲಾರ್ಡ್ ವಿಷ್ಣುವಿನಂತೆ ಧೋನಿಯನ್ನು ಚಿತ್ರಿಸಲಾಗಿತ್ತು. ಚಿತ್ರದಲ್ಲಿ ವಿಷ್ಣುವಾಗಿ ಧೋನಿ ಕೈಯಲ್ಲಿ ಶೂ ಮತ್ತಿತರ ಉತ್ಪನ್ನಗಳನ್ನು ಹಿಡಿದಿರುವುದು ವಿವಾದಕ್ಕೆ ಕಾರಣವಾಗಿತ್ತು.
ಇದರೊಂದಿಗೆ ಧೋನಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಾರೆಂದು ಆರೋಪಿಸಿ ಅವರ ವಿರುದ್ಧ ಸ್ಥಳೀಯ ವಿಎಚ್ಪಿ ಧುರೀಣ ಶ್ಯಾಮ್ ಸುಂದರ್ ಆಂಧ್ರಪ್ರದೇಶದ ಅನಂತಪುರ ಜಿಲ್ಲಾ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯವು 2014 ಜೂನ್ನಲ್ಲಿ ಧೋನಿ ಮತ್ತು ಬ್ಯುಸಿನೆಸ್ ಟುಡೆ ಸಂಪಾದಕ ಚೈತನ್ಯ ಕಲ್ಬಾಗ್ ವಿರುದ್ಧ ಹಾಜರಾಗಲು ವಾರಂಟ್ ಹೊರಡಿಸಿತ್ತು. ಬ್ಯುಸಿನೆಸ್ ಟುಡೆ ಪರ ವಕೀಲರೊಬ್ಬರು ನ್ಯಾಯಾಲಯಕ್ಕೆ ಹಾಜರಾಗಿ ದ್ದರು.
2015ರಲ್ಲಿ ಈ ಪ್ರಕರಣವನ್ನು ಹೆಚ್ಚುವರಿ ಪ್ರಥಮ ದರ್ಜೆ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ಕಳೆದ ನವೆಂಬರ್ನಲ್ಲಿ ಧೋನಿ ಮತ್ತು ಕಲ್ಬಾಗ್ ಅವರಿಗೆ ಹಾಜರಾಗಲು ಸಮನ್ಸ್ ಜಾರಿ ಮಾಡಿತ್ತು. ಆದರೆ ಧೋನಿ ಗೈರು ಹಾಜರಾಗಿದ್ದರು.