ವಿಲಿಯರ್ಸ್ ಔಟಾಗಿದ್ದು ಸೋಲಿಗೆ ಕಾರಣ: ವಿರಾಟ್ ಕೊಹ್ಲಿ
ಬೆಂಗಳೂರು, ಮೇ 30: ಐಪಿಎಲ್ ಫೈನಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಸೋತಿರುವುದಕ್ಕೆ ಬೇಸರ ವ್ಯಕ್ತಪಡಿಸಿರುವ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ‘‘ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ ಎಬಿ ಡಿವಿಲಿಯರ್ಸ್ ಬೇಗನೆ ಔಟಾಗಿರುವುದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿತು’’ ಎಂದರು.
‘‘ಈ ವರ್ಷ ನಮ್ಮ ತಂಡ ಆಡಿರುವ ರೀತಿ ಖಂಡಿತವಾಗಿಯೂ ಹೆಮ್ಮೆ ತಂದಿದೆ. ಬೆಂಗಳೂರಿನ ಅಭಿಮಾನಿಗಳಿಂದ ಇದು ಸಾಧ್ಯವಾಗಿದೆ. ಅವರು ನಾವು ಐಪಿಎಲ್ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಾಗಲೂ ಬೆಂಬಲಿಸಿದ್ದರು. ನಾನು ಹಾಗೂ ಎಬಿಡಿ ಒಟ್ಟಿಗೆ ಔಟಾಗಿದ್ದು ದೊಡ್ಡ ಹಿನ್ನಡೆ. ನಾನು ಎಬಿಡಿಯೊಂದಿಗೆ ಇನ್ನಷ್ಟು ಸಮಯ ಕ್ರೀಸ್ನಲ್ಲಿರಬೇಕಾಗಿತ್ತು. ನಾವಿಬ್ಬರೂ ಜೊತೆಯಾಗಿ ಆಡಿದ್ದರೆ ಪಂದ್ಯದ ಚಿತ್ರಣವೇ ಬೇರೆಯಾಗುತ್ತಿತ್ತು’’ಎಂದು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಹ್ಲಿ ಹೇಳಿದ್ದಾರೆ.
ಈ ವರ್ಷ 973 ರನ್ ಗಳಿಸಿ, ಗರಿಷ್ಠ ಸ್ಕೋರರ್ ನೀಡುವ ಆರೆಂಜ್ ಕ್ಯಾಪ್ ಗೆದ್ದುಕೊಂಡಿರುವ ಬಗ್ಗೆ ಮಾತನಾಡಿದ ಕೊಹ್ಲಿ, ‘‘ಇದೊಂದು ಸ್ಮರಣೀಯ ಅನುಭವ. ಆದರೆ, ತಂಡ ಫೈನಲ್ನಲ್ಲಿ ಸೋತಿರುವುದು ಬೇಸರ ತಂದಿದೆ. ಸನ್ರೈಸರ್ಸ್ ಬಲಿಷ್ಠ ಬೌಲಿಂಗ್ ದಾಳಿ ಹೊಂದಿದ್ದರಿಂದ ಪಂದ್ಯವನ್ನು ಜಯಿಸಿತ್ತು. ಐಪಿಎಲ್ನಲ್ಲಿ ನಾಲ್ಕು ಶತಕ ಬಾರಿಸಿ ದಾಖಲೆ ನಿರ್ಮಿಸಿರುವುದು ಸ್ವತಹ ನನಗೆ ಆಶ್ಚರ್ಯವಾಗಿದೆ’’ ಎಂದರು.
ಭುವನೇಶ್ವರ ಕುಮಾರ್ ಕೂಟದಲ್ಲಿ ಒಟ್ಟು 23 ವಿಕೆಟ್ಗಳನ್ನು ಪಡೆದು ಗರಿಷ್ಠ ವಿಕೆಟ್ ಪಡೆದವರಿಗೆ ನೀಡುವ ಪರ್ಪಲ್ ಕ್ಯಾಪ್ ಜಯಿಸಿದರು.