ಕಾಶ್ಮೀರದಲ್ಲಿ ಭಾರತ ಜನಮತಗಣನೆ ನಡೆಸಬೇಕು: ನವಾಝ್ ಶರೀಫ್
ಇಸ್ಲಾಮಾಬಾದ್, ಜು. 20: ಕಾಶ್ಮೀರ ಭಾರತದ ಆಂತರಿಕ ವಿಷಯವಲ್ಲ ಎಂದು ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಬುಧವಾರ ಹೇಳಿದ್ದಾರೆ ಹಾಗೂ ಕಾಶ್ಮೀರಿಗಳ ಹಕ್ಕುಗಳನ್ನು ಗೌರವಿಸಲು ಅಲ್ಲಿ ಜನಮತಗಣನೆ ನಡೆಸಬೇಕು ಎಂದು ಅವರು ಭಾರತವನ್ನು ಒತ್ತಾಯಿಸಿದ್ದಾರೆ.
ಕಾಶ್ಮೀರ ಕಣಿವೆಯ ಜನರಿಗೆ ಬೆಂಬಲ ವ್ಯಕ್ತಪಡಿಸಲು ಬುಧವಾರ ಆಚರಿಸಲಾದ ‘‘ಕಪ್ಪು ದಿನ’’ದ ಸಂದರ್ಭದಲ್ಲಿ ಅವರು ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
‘‘ಕಾಶ್ಮೀರಿಗಳಿಗೆ ಬೆಂಬಲ ಸೂಚಿಸುವುದಕ್ಕಾಗಿ ನಾವಿಂದು ಕಪ್ಪು ದಿನವನ್ನು ಆಚರಿಸುತ್ತಿದ್ದೇವೆ ಹಾಗು ತಮ್ಮ ಹಕ್ಕುಗಳನ್ನು ಪಡೆಯುವ ಕಾಶ್ಮೀರಿಗಳ ಹೋರಾಟದಲ್ಲಿ ಪಾಕಿಸ್ತಾನೀಯರು ಅವರೊಂದಿಗೆ ಇದ್ದಾರೆ ಎಂಬ ಸಂದೇಶವನ್ನು ನಾವು ಜಗತ್ತಿಗೆ ನೀಡುತ್ತಿದ್ದೇವೆ’’ ಎಂದು ತನ್ನ ಸಂದೇಶದಲ್ಲಿ ಶರೀಫ್ ಹೇಳಿದರು.
‘‘ಭಾರತ ಬಲಪ್ರಯೋಗ ನಡೆಸಿ ಕಾಶ್ಮೀರಿಗಳ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ಅವರು ತಡವಾಗಿಯಾದರು ಸ್ವಾತಂತ್ರ ಪಡೆಯುತ್ತಾರೆ. ಕಾಶ್ಮೀರ ವಿವಾದಿತ ಪ್ರದೇಶ ಎಂಬುದಾಗಿ ವಿಶ್ವಸಂಸ್ಥೆ ಘೋಷಿಸಿದೆ. ಕಾಶ್ಮೀರಿಗಳ ಹಕ್ಕುಗಳನ್ನು ಗೌರವಿಸಲು ಭಾರತ ಜನಮತಗಣನೆ ನಡೆಸಬೇಕು. ಕಾಶ್ಮೀರವನ್ನು ಭಾರತದ ಆಂತರಿಕ ವಿಷಯ ಎಂಬುದಾಗಿ ಭಾವಿಸುವುದು ಸರಿಯಲ್ಲ’’ ಎಂದರು.